
shikaripur | ಶಿಕಾರಿಪುರ : ಬೀಗ ಹಾಕಿದ್ದ ನಾಲ್ಕು ಮನೆಗಳಲ್ಲಿ ಸರಣಿ ಕಳ್ಳತನ, ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಲೂಟಿ!
ಶಿಕಾರಿಪುರ (shikaripura), ಏ. 3: ಶಿಕಾರಿಪುರ ಪಟ್ಟಣದ ಚನ್ನಕೇಶವ ನಗರದಲ್ಲಿ ಬೀಗ ಹಾಕಿದ್ದ ನಾಲ್ಕು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಕಳವು ಮಾಡಿ ಪರಾರಿಯಾಗಿರುವ ಘಟನೆ ಕಳೆದ ಸೋಮವಾರ ರಾತ್ರಿ ವೇಳೆ ನಡೆದಿದೆ.
ಚನ್ನಕೇಶವ ನಗರದಲ್ಲಿರುವ 15 ನೇ ಕ್ರಾಸ್ ನ ಬಣಕಾರ್, ಮೆಸ್ಕಾಂ ಸಿಬ್ಬಂದಿ ಹಾಲೇಶಪ್ಪ, ಅದೇ ಬಡಾವಣೆಯ 14 ನೇ ಕ್ರಾಸ್ ನಲ್ಲಿರುವ ತಿಪ್ಪೇಶಪ್ಪ ಹಾಗೂ ವೆಂಕಟೇಶ್ ಎಂಬುವರ ಮನೆಯಲ್ಲಿ ಕಳ್ಳತನಗಳು ನಡೆದಿವೆ.
ಸದರಿ ಮನೆಯವರ ಕುಟುಂಬದವರು ನಾನಾ ಕೆಲಸಕಾರ್ಯಗಳ ನಿಮಿತ್ತ, ಬಾಗಿಲಿಗೆ ಬೀಗ ಹಾಕಿಕೊಂಡು ಪರ ಊರುಗಳಿಗೆ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನುಗಮನಿಸಿ ಕಳ್ಳರು ಸರಣಿ ಕಳವು ಕೃತ್ಯ ನಡೆಸಿದ್ದಾರೆ.
ಪರಾರಿ : ಮೆಸ್ಕಾಂ ಸಿಬ್ಬಂದಿ ಮನೆಯಲ್ಲಿ ದುಷ್ಕರ್ಮಿಗಳು ಕಳ್ಳತನ ನಡೆಸುತ್ತಿದ್ದ ವೇಳೆ, ನೆರೆ ಮನೆಯ ನಾಗರಾಜ್ ಎಂಬುವರು ಅನುಮಾನದ ಮೇರೆಗೆ ಮನೆಯಿಂದ ಹೊರಬಂದು ಪರಿಶೀಲಿಸಿದ್ದಾರೆ. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯನ್ನು ವಿಚಾರಿಸಲು ಮುಂದಾಗಿದ್ದು, ಈ ವೇಳೆ ಮೆಸ್ಕಾಂ ಸಿಬ್ಬಂದಿ ಮನೆ ಬಾಗಿಲು ತೆರೆದಿರುವುದು ಕಂಡುಬಂದಿದೆ.
ತಕ್ಷಣವೇ ನಾಗರಾಜ್ ಕೂಗಿಕೊಂಡಿದ್ದು, ದುಷ್ಕರ್ಮಿಗಳು ನಾಗರಾಜ್ ರತ್ತ ಕಬ್ಬಿಣದ ವಸ್ತುವೊಂದನ್ನು ತೂರಿ ಸ್ಥಳದಿಂದ ಪರಾರಿಯಾಗಿದ್ದಾರೆ. ಆದಾಗ್ಯೂ ಕಳ್ಳನನ್ನು ಹಿಡಿಯಲು ಯತ್ನ ನಡೆದಿದ್ದು, ಈ ವೇಳೆ ಕಳ್ಳನ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಳ್ಳಲಾಗಿದೆ. ಅದರಲ್ಲಿ ಬೆಳ್ಳಿಯ ವಸ್ತುಗಳಿರುವುದು ಕಂಡುಬಂದಿದೆ.
ನೆರೆಹೊರೆಯವರು ಬೆನ್ನಟ್ಟಿ ಕಳ್ಳರನ್ನು ಹಿಡಿಯಲು ಮಾಡಿದ ಪ್ರಯತ್ನ ಸಫಲವಾಗಿಲ್ಲ. ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಘಟನಾ ಸ್ಥಳಗಳಿಗೆ ಬೆರಳಚ್ಚು, ಶ್ವಾನದಳ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ.
Shikaripura, Apr. 3: A series of burglaries took place in four locked houses in Channakeshava Nagar of Shikaripura town, and cash worth lakhs of rupees was stolen and fled the scene on Monday night.