
bhadravati | ಭದ್ರಾವತಿ : ಐವರು ಮಕ್ಕಳ ನಿಗೂಢ ನಾಪತ್ತೆ ಪ್ರಕರಣ ಸುಖಾಂತ್ಯ – ಪತ್ತೆಯಾಗಿದ್ದೆಲ್ಲಿ?
ಭದ್ರಾವತಿ (bhadravathi), ಏ. 5: ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಐವರು ಬಾಲಕರು ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯಗೊಂಡಿದೆ!
ನಾಪತ್ತೆಯಾಗಿದ್ದ ಐವರು ಮಕ್ಕಳು ಗ್ರಾಮದ ತೋಟವೊಂದರಲ್ಲಿ ಪತ್ತೆಯಾಗಿದ್ದಾರೆ. ಇದರಿಂದ ಪೋಷಕರು ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಏನೀದು ಘಟನೆ? : ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ 8 ರಿಂದ 14 ವರ್ಷ ವಯೋಮಾನದೊಳಗಿನ ಐವರು ಮಕ್ಕಳು, ಏ. 6 ರ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಸಮೀಪದ ನಾಲೆಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಸಂಜೆಯಾದರೂ ಮನೆಗೆ ಹಿಂದಿರುಗಿರಲಿಲ್ಲ.
ಮಕ್ಕಳು ಮನೆಗೆ ಹಿಂದಿರುಗದಿದ್ದರಿಂದ ಪೋಷಕರುಗಳು ಊರಿನ ಪರಿಚಯಸ್ಥರು, ಸಂಬಂಧಿಗಳ ಮನೆಗಳು ಸೇರಿದಂತೆ ಗ್ರಾಮದೆಲ್ಲೆಡೆ ಹುಡುಕಾಟ ನಡೆಸಿದ್ದರು. ಎಲ್ಲಿಯೂ ಮಕ್ಕಳ ಸುಳಿವು ಪತ್ತೆಯಾಗಿರಲಿಲ್ಲ.
ಆತಂಕಗೊಂಡ ಪೋಷಕರು ಗ್ರಾಮಾಂತರ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದರು. ಅಲರ್ಟ್ ಆದ ಪೊಲೀಸರು ಕೆರೆಕಟ್ಟೆ, ನಿರ್ಜನ ಪ್ರದೇಶಗಳು, ಬಸ್, ರೈಲ್ವೆ ನಿಲ್ದಾಣ ಸೇರಿದಂತೆ ಹಲವೆಡೆ ಶೋಧ ನಡೆಸಿದ್ದರು. ಮತ್ತೊಂದೆಡೆ, ಪೋಷಕರು ಹಾಗೂ ಗ್ರಾಮಸ್ಥರು ರಾತ್ರಿಯಿಡಿ ಎಲ್ಲೆಡೆ ಹುಡುಕಾಟ ನಡೆಸಿದ್ದರು.
ಎಲ್ಲಿಯೂ ಮಕ್ಕಳ ಇರುವಿಕೆಯ ಸುಳಿವು ಲಭ್ಯವಾಗಿರಲಿಲ್ಲ. ಈ ನಡುವೆ ಕೆಲವರು ಮಕ್ಕಳನ್ನು ಅಪಹರಣ ಮಾಡಿರುವ ಶಂಕೆ ಕೂಡ ವ್ಯಕ್ತಪಡಿಸಲಾರಂಭಿಸಿದ್ದರು. ಮಕ್ಕಳ ನಿಗೂಢ ಕಣ್ಮರೆ ಪ್ರಕರಣ ಕಗ್ಗಂಟಾಗಿ ಪರಿಣಮಿಸಲಾರಂಭಿಸಿತ್ತು.
ಪತ್ತೆಯಾದರು : ಮೀನು ಹಿಡಿಯಲು ಹೋಗಿದ್ದ ವಿಷಯ ತಿಳಿದರೆ, ಪೋಷಕರು ಎಲ್ಲಿ ಬೈಯುತ್ತಾರೊ ಎಂಬ ಭಯದಲ್ಲಿ ಗ್ರಾಮದ ಹೊರವಲಯದ ತೋಟದ ಮನೆಯೊಂದರ ಬಳಿ ರಾತ್ರಿ ಬಾಳೆ ಎಲೆ ಹಾಸಿಕೊಂಡು ಮಕ್ಕಳು ಮಲಗಿದ್ದರು.
ಸೋಮವಾರ ಬೆಳಿಗ್ಗೆ ಗ್ರಾಮಸ್ಥರ ಕಣ್ಣಿಗೆ ಮಕ್ಕಳು ಬಿದ್ದಿದ್ದಾರೆ. ಇದರಲ್ಲಿ ಮೂವರು ಮಕ್ಕಳು ಸಿಕ್ಕಿದ್ದು, ಇಬ್ಬರು ಗ್ರಾಮಸ್ಥರ ಕೈಗೆ ಸಿಗದೆ ಕಬ್ಬಿನ ಗದ್ದೆಗಳಲ್ಲಿ ಓಡಿ ಹೋಗುತ್ತಿದ್ದಾರೆ. ಅವರನ್ನು ಮನವೊಲಿಸಿ ಕರೆ ತರುವ ಪ್ರಯತ್ನವನ್ನು ಗ್ರಾಮಸ್ಥರು ನಡೆಸುತ್ತಿದ್ದಾರೆ.
ಒಟ್ಟಾರೆ ಮಕ್ಕಳು ಪತ್ತೆಯಾಗಿದ್ದರಿಂದ ರಾತ್ರಿಯಿಡಿ ಆತಂಕದಿಂದ ಹುಡುಕಾಡುತ್ತಿದ್ದ ಪೋಷಕರು, ಗ್ರಾಮಸ್ಥರು ಹಾಗೂ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.
ರಾತ್ರಿಯಿಡಿ ಹುಡುಕಾಟ ನಡೆಸಿದ್ದ ಪೊಲೀಸರು!
*** ಐವರು ಮಕ್ಕಳ ನಿಗೂಢ ಪ್ರಕರಣ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿತ್ತು. ಭದ್ರಾವತಿ ಗ್ರಾಮಾಂತರ ಠಾಣೆ ಇನ್ಸ್’ಪೆಕ್ಟರ್ ಜಗದೀಶ್ ಹಂಚಿನಾಳ್, ಸಬ್ ಇನ್ಸ್’ಪೆಕ್ಟರ್ ಮಹೇಶ್ ಮತ್ತವರ ಸಿಬ್ಬಂದಿಗಳು ತಡರಾತ್ರಿಯವರೆಗೂ ಗ್ರಾಮಸ್ಥರ ನೆರವಿನೊಂದಿಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಟ ನಡೆಸಿದ್ದರು. ನಂತರ ಮುಂಜಾನೆ 5 ಗಂಟೆಯಿಂದ ಮತ್ತೆ ಶೋಧ ಕಾರ್ಯಾಚರಣೆ ನಡೆಸಲಾರಂಭಿಸಿದ್ದರು. ಮಕ್ಕಳ ಇರುವಿಕೆಯ ಸುಳಿವು ಲಭ್ಯವಾಗುತ್ತಿದ್ದಂತೆ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
Bhadravathi, Apr. 5: The case of the mysterious disappearance of five boys from a village under the jurisdiction of Bhadravathi Rural Police Station has come to a happy end! Five missing children have been found in a village garden, bringing relief to parents and villagers.