
bhadravati | ಭದ್ರಾವತಿ : ಗುಜುರಿ ವಸ್ತುಗಳ ರಾಬರಿ ಮಾಡಿದ್ದ ನಾಲ್ವರ ಸೆರೆ!
ಭದ್ರಾವತಿ (bhadravati), ಏ. 18: ಗುಜುರಿ ವಸ್ತುಗಳನ್ನು ರಾಬರಿ ಮಾಡಿ ಕೊಂಡೊಯ್ದಿದ್ದ ಆರೋಪದ ಮೇರೆಗೆ, ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ ಘಟನೆ ನಡೆದಿದೆ.
ಭದ್ರಾವತಿ ಹೊಸಮನೆಯ ಭೋವಿ ಕಾಲೋನಿ ನಿವಾಸಿ ಕವಿರಾಜ (21), ಶಿವಮೊಗ್ಗದ ಮೇಲಿನ ತುಂಗಾನಗರದ ನಿವಾಸಿ ಮುಬಾರಕ್, ಭದ್ರಾವತಿಯ ಬಾರಂದೂರು ನಿವಾಸಿ ಅಜಿತ್ ಯಾನೆ ಘಟ್ಟ (19) ಹಾಗೂ ಕಬಳಿಕಟ್ಟೆ ಗ್ರಾಮದ ಮಂಜುನಾಥ್ ಯಾನೆ ಮಂಜು (21) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ 3.50 ಲಕ್ಷ ರೂ. ಮೌಲ್ಯದ ಕಳವು ಮಾಡಿದ್ದ 700 ಕೆಜಿ ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 85 ಸಾವಿರ ರೂ. ಮೌಲ್ಯದ ಟಾಟಾ ಏಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಭದ್ರಾವತಿ ಡಿವೈಎಸ್ಪಿ ನಾಗರಾಜ್ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಜಗದೀಶ್ ಹಂಚಿನಾಳ್ ನೇತೃತ್ವದಲ್ಲಿ ಪಿಎಸ್ಐ ಶ್ರೀಶೈಲಕೆಂಚಣ್ಣವರ್, ಎಸ್ಐ ಚಂದ್ರಶೇಖರ್, ದಿವಾಕರ್ ರಾವ್, ಸಿಬ್ಬಂದಿಗಳಾದ ಹೆಚ್ ಸಿ ಮಂಜುನಾಥ್, ಸಿಪಿಸಿಗಳಾದ ಈರಯ್ಯ, ರೇವಣ ಸಿದ್ದಪ್ಪ, ವಿಜಯಕುಮಾರ್, ಸಂತೋಷ ಕುಮಾರ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಪ್ರಕರಣದ ಹಿನ್ನೆಲೆ : 25-3-2025 ರಂದು ಶಿವಮೊಗ್ಗದ ಆರ್ ಎಂ ಎಲ್ ನಗರದ ನಿವಾಸಿ ಕಾರ್ತಿಕ್ (22) ಎಂಬುವರು, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಿನಕೊಪ್ಪ ಕ್ರಾಸ್ ಸಮೀಪ ಓಮ್ನಿ ಕಾರು ಚಾಲನೆ ಮಾಡಿಕೊಂಡು ತೆರಳುತ್ತಿದ್ದರು.
ಸುಮಾರು 6. 35 ನಿಮಿಷದ ವೇಳೆಗೆ ಯಾರೋ 4 ಜನರು 2 ಬೈಕ್ ಗಳಲ್ಲಿ ಆಗಮಿಸಿ ಕಾರನ್ನು ಅಡ್ಡ ಹಾಕಿ ನಿಲ್ಲಿಸಿದ್ದರು. ಈ ವೇಳೆ 3. 50 ಲಕ್ಷ ರೂ. ಮೌಲ್ಯದ, 900 ಕೆಜಿ ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳನ್ನು ರಾಬರಿ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತಂತೆ ಕಾರ್ತಿಕ್ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Bhadravati, Apr. 18: Bhadravati Rural Police Station arrested four people on charges of stealing and taking away valuables.