
ಮಲೆನಾಡಲ್ಲಿ ರಣ ಬಿಸಿಲು : ನಾಗರೀಕರು ತತ್ತರ!
– ಬಿ. ರೇಣುಕೇಶ್ –
ಶಿವಮೊಗ್ಗ, ಎ. 9: ರಣ ಬಿಸಿಲಿಗೆ ಮಲೆನಾಡು ಅಕ್ಷರಶಃ ಬಿಸಿಯಾಗಲಾರಂಭಿಸಿದೆ..! ಹೌದು. ಪ್ರಸ್ತುತ ಬೇಸಿಗೆ ತಾಪಕ್ಕೆ, ಶಿವಮೊಗ್ಗ ಜಿಲ್ಲೆಯ ನಾಗರೀಕರು ತತ್ತರಿಸಿದ್ದಾರೆ. ಹೈರಾಣಾಗುವಂತೆ ಮಾಡಿದೆ!!
ಜಿಲ್ಲೆಯ ಇತರೆಡೆಯಂತೆ, ಶಿವಮೊಗ್ಗ ನಗರದಲ್ಲಿಯೂ ತಾಪಮಾನದ ಪ್ರಮಾಣ ತೀವ್ರ ಸ್ವರೂಪದಲ್ಲಿದೆ. ಹಗಲು ವೇಳೆ ಇಡೀ ನಗರ ಕಾದ ಕಾವಲಿಯಂತಾಗಿ ಪರಿವರ್ತಿತವಾಗುತ್ತಿದೆ. ಮನೆಯಿಂದ ಹೊರಬರಲಾಗದ ಮಟ್ಟಕ್ಕೆ ಬಿಸಿಲು ಬೀಳುತ್ತಿದೆ. ದಿನದಿಂದ ದಿನಕ್ಕೆ ತಾಪಮಾನ ಏರುಗತಿಯಲ್ಲಿ ಸಾಗುತ್ತಿರುವುದು, ನಾಗರೀಕರನ್ನು ಕಂಗಲಾಗಿಸಿದೆ. ಎದುಸಿರು ಹೆಚ್ಚಾಗುವಂತೆ ಮಾಡಿದೆ.
‘ಬೆಳಿಗ್ಗೆಯ ವೇಳೆ ಬಿಸಿಲ ತೀವ್ರತೆ ಹೆಚ್ಚಿರುತ್ತದೆ. ಮಧ್ಯಾಹ್ನದ ವೇಳೆಯಲ್ಲಂತೂ ಸೂರ್ಯ ಅಕ್ಷರಶಃ ಬೆಂಕಿಯುಗುಳುತ್ತಿರುವ ಅನುಭವವಾಗುತ್ತದೆ. ಡಾಂಬರು ರಸ್ತೆಗಳು ಬರಿಗಾಲಲ್ಲಿ ನಡೆಯಲು ಆಗದಷ್ಟು ಬಿಸಿಯಾಗಿರುತ್ತವೆ. ಏಪ್ರಿಲ್ ನಲ್ಲೇ ಈ ರೀತಿಯಾದರೇ, ಇನ್ನೂ ಮೇ ತಿಂಗಳಲ್ಲಿ ಉಷ್ಣಾಂಶದ ತೀವ್ರತೆ ಯಾವ ಸ್ವರೂಪದಲ್ಲಿದೆ ಎಂಬುವುದನ್ನು ನೆನೆದರೆ ಭಯವಾಗುತ್ತದೆ’ ಎಂದು ಶಿವಮೊಗ್ಗದ ಶರಾವತಿನಗರ ನಿವಾಸಿ ನಾಗರಾಜ್ ಎಂಬುವರು ಹೇಳುತ್ತಾರೆ.
ವಿರಳ: ಬಿಸಿಲ ಬೇಗೆಯ ಕಾರಣದಿಂದಲೇ ಮಧ್ಯಾಹ್ನದ ವೇಳೆ, ಶಿವಮೊಗ್ಗ ನಗರದ ಪ್ರಮುಖ ರಸ್ತೆ – ವೃತ್ತಗಳಲ್ಲಿ ಜನ-ವಾಹನ ಸಂಚಾರ ವಿರಳವಾಗಿರುವುದು ಕಂಡುಬರುತ್ತಿದೆ. ಇದರಿಂದ ವ್ಯಾಪಾರ-ವಹಿವಾಟಿನ ಮೇಲೆಯೂ ಪರಿಣಾಮ ಬೀರುವಂತಾಗಿದೆ.
ಮತ್ತೊಂದೆಡೆ ತಂಪು ಪಾನೀಯ, ಎಳನೀರಿಗೆ ಭಾರೀ ಡಿಮ್ಯಾಂಡ್ ಕಂಡುಬಂದಿದೆ. ಹಾಗೆಯೇ ಕಲ್ಲಂಗಡಿ, ಕರಬೂಜದಂತಹ ತಂಪುಂಟು ಮಾಡುವ ಹಣ್ಣುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಒಟ್ಟಾರೆ ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪ, ಮಲೆನಾಡಿಗರ ನಿದ್ದೆಗೆಡುವಂತೆ ಮಾಡಿರುವುದಂತೂ ಸತ್ಯವಾಗಿದೆ!
ಒಣಗುತ್ತಿರುವ ಕೆರೆಕಟ್ಟೆಗಳು : ಶುರುವಾಗಲಾರಂಭಿಸಿದೆ ಜೀವಜಲಕ್ಕೆ ತತ್ವಾರ!
*** ತಾಪಮಾನದ ಬೇಗೆಗೆ, ಶಿವಮೊಗ್ಗ ಜಿಲ್ಲೆಯ ಹಲವೆಡೆ ಅಂತರ್ಜಲದ ಮಟ್ಟ ಗಂಭೀರ ಸ್ವರೂಪದಲ್ಲಿ ಕುಸಿಯಲಾರಂಭಿಸಿದೆ. ಕೆರೆಕಟ್ಟೆ ಸೇರಿದಂತೆ ಜಲಮೂಲಗಳಲ್ಲಿ ನೀರಿನ ಪ್ರಮಾಣದಲ್ಲಿ ದಿಢೀರ್ ಇಳಿಕೆ ಕಂಡುಬರಲಾರಂಭಿಸಿದೆ. ಈಗಾಗಲೇ ಜಿಲ್ಲೆಯ ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ಜನ-ಜಾನುವಾರುಗಳು ಪರಿತಪಿಸುವಂತಾಗಿದೆ. ಉಷ್ಣಾಂಶದ ಬೇಗೆ ಇದೇ ರೀತಿಯಲ್ಲಿ ಮುಂದುವರಿದರೆ ಮೇ ತಿಂಗಳಲ್ಲಿ ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ.