
ಶಿವಮೊಗ್ಗ ನಗರ ಕ್ಷೇತ್ರ : ಜೆಡಿಎಸ್ ಟಿಕೆಟ್ ಹೈಡ್ರಾಮಾಕ್ಕೆ ಕೊನೆಗೂ ತೆರೆ..!
ಕಾಂಗ್ರೆಸ್ ಮಾಜಿ ಶಾಸಕರಿಗೆ ಹೆಚ್.ಡಿ.ಕುಮಾರಸ್ವಾಮಿ ನೀಡಿದ್ದ ಭರವಸೆಯೇನು?
ಆಯನೂರು ಮಂಜುನಾಥ್ ಗೆ ಟಿಕೆಟ್ ನೀಡಲು ಕಾರಣವೇನು?
************************************************
-ಬಿ.ರೇಣುಕೇಶ್-
ಶಿವಮೊಗ್ಗ, ಎ. 19: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ, ಇಷ್ಟು ದಿನ ತಣ್ಣಗಿದ್ದ ಜೆಡಿಎಸ್ ಪಕ್ಷದ ಚಟುವಟಿಕೆಗಳು ದಿಢೀರ್ ಕಾವೇರಿದೆ! ಮಂಗಳವಾರದಿಂದ ಸಾಕಷ್ಟು ಕುತೂಹಲ ಮೂಡಿಸಿದ್ದ, ಜೆಡಿಎಸ್ ಟಿಕೆಟ್ ಹೈಡ್ರಾಮಾಕ್ಕೆ ಕೊನೆಗೂ ತೆರೆ ಬಿದ್ದಿದೆ. ಬಿಜೆಪಿಯಿಂದ ಹೊರಬಂದ ಆಯನೂರು ಮಂಜುನಾಥ್ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ!
ಇದರಿಂದ ಜೆಡಿಎಸ್ ನಿಂದ ಕಣಕ್ಕಿಳಿಯಲು ಸಾಕಷ್ಟು ಕಸರತ್ತು ನಡೆಸಿದ್ದ ಹಾಗೂ ಬೆಂಗಳೂರಿನಲ್ಲಿಯೇ ಬೀಡುಬಿಟ್ಟು ಲಾಬಿ ನಡೆಸುತ್ತಿದ್ದ, ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರ ಲೆಕ್ಕಾಚಾರಗಳು ತಲೆಕೆಳಗಾಗುವಂತಾಗಿದೆ.
‘ಕೈ’ ಹಿಡಿಯಲಿಲ್ಲ: ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯುವುದಾಗಿ ಘೋಷಿಸುವ ಮೂಲಕ, ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದ ಆಯನೂರು ಮಂಜುನಾಥ್ ಕಾಂಗ್ರೆಸ್ ನಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿತ್ತು. ‘ಕೈ’ ಟಿಕೆಟ್ ಗೆ ಕೆಲ ರಾಜ್ಯ ನಾಯಕರ ಮೂಲಕ ತೆರೆಮರೆಯ ಕಸರತ್ತು ನಡೆಸಿದ್ದರು. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಪಾಳೇಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿದ್ದವು. ಈ ಕಾರಣದಿಂದಲೇ, ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯೂ ವಿಳಂಬವಾಗಿತ್ತು.
ಕಾಂಗ್ರೆಸ್ ರಾಜ್ಯ ನಾಯಕರು ಆಯನೂರು ಬಗ್ಗೆ ಮೃಧು ಧೋರಣೆ ತಳೆದಿದ್ದರು. ವರಿಷ್ಠರಿಗೆ ಅವರ ಹೆಸರು ಶಿಫಾರಸ್ಸು ಕೂಡ ಮಾಡಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.
ಯೋಗಿಗೆ ಶ್ರೀನಿವಾಸ್ ಬಲ!: ಪ್ರಸ್ತುತ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಹೆಚ್.ಸಿ.ಯೋಗೇಶ್, ದೆಹಲಿ ಹಂತದಲ್ಲಿ ಟಿಕೆಟ್ ಗೆ ಭಾರೀ ಲಾಬಿ ನಡೆಸಿದ್ದರು. ಮೂಲತಃ ಭದ್ರಾವತಿಯವರಾದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮೂಲಕ, ರಾಹುಲ್ ಗಾಂಧಿ ಮೇಲೆ ಒತ್ತಡ ಹಾಕಿಸಿದ್ದರು ಎನ್ನಲಾಗಿದೆ.

ಬಿ.ವಿ.ಶ್ರೀನಿವಾಸ್ ಅವರು ಕೂಡ ಹೆಚ್.ಸಿ.ಯೋಗೇಶ್ ಪರವಾಗಿ, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಪ್ರಮುಖರ ಜೊತೆ ಮಾತುಕತೆ ನಡೆಸಿದ್ದರು. ಇದೆಲ್ಲದರ ಫಲವಾಗಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ವರಿಷ್ಠರು ಆಯನೂರಿಗೆ ಟಿಕೆಟ್ ನಿರಾಕರಿಸಿದ್ದರು ಎಂಬ ಮಾತುಗಳು ಕಾಂಗ್ರೆಸ್ ಪಾಳೇಯದಿಂದ ಕೇಳಿಬಂದಿದ್ದವು.
ಜೆಡಿಎಸ್ ನತ್ತ ಚಿತ್ತ: ಈ ನಡುವೆ ಆಯನೂರು ಜೆಡಿಎಸ್ ನಾಯಕರ ಜೊತೆ ಸಂಪರ್ಕದಲ್ಲಿದ್ದರು. ಬಿಜೆಪಿ ಅಭ್ಯರ್ಥಿ ಘೋಷಣೆಗೆ ಕಾದು ಕುಳಿತ್ತಿದ್ದರು. ಮತ್ತೊಂದೆಡೆ, ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ದಿಢೀರ್ ಆಗಿ ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಮನೆಗೆ ಭೇಟಿ ನೀಡಿದ್ದರು. ಜೆಡಿಎಸ್ ನಿಂದ ಕಣಕ್ಕಿಳಿಯಲು ಅವಕಾಶ ನೀಡುವಂತೆ ಕೋರಿದ್ದರು. ಹೆಚ್.ಡಿ.ಕುಮಾರಸ್ವಾಮಿ ಅವರು ಶಿವಮೊಗ್ಗ ಜಿಲ್ಲಾ ಜೆಡಿಎಸ್ ನಾಯಕರ ಅಭಿಪ್ರಾಯ ಪಡೆದು ನಿರ್ಧಾರ ತಿಳಿಸುತ್ತೆನೆ. ಅಲ್ಲಿಯವರೆಗೂ ಕಾಯುವಂತೆ ಹೇಳಿದ್ದರು ಎನ್ನಲಾಗಿದೆ.
ಈ ಬೆಳವಣಿಗೆಗಳ ನಡುವೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಅವರು, ಆಯನೂರು ಮಂಜುನಾಥ್ ಪರವಾಗಿ ಹೆಚ್.ಡಿ.ಕುಮಾರಸ್ವಾಮಿ ಬಳಿ ಬ್ಯಾಟಿಂಗ್ ನಡೆಸಿದ್ದರು. ಅಂತಿಮವಾಗಿ ಕುಮಾರಸ್ವಾಮಿ ಅವರು ಆಯನೂರು ಪರವಾಗಿ ನಿಂತುಕೊಳ್ಳುವಂತಾಯಿತು. ಇದರಿಂದ ಜೆಡಿಎಸ್ ನಿಂದ ಕಣಕ್ಕಿಳಿಯುವ ತಯಾರಿಯಲ್ಲಿದ್ದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರ ಲೆಕ್ಕಾಚಾರ ತಲೆಕೆಳಗಾಗುವಂತಾಗಿದೆ ಎಂದು ಹೇಳಲಾಗುತ್ತಿದೆ.
ಶಾಂತವಾದ ಕಾಂಗ್ರೆಸ್ ಮಾಜಿ ಶಾಸಕ..!
*** ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಹಾಗೂ ಚುನಾವಣಾ ಕಣಕ್ಕಿಳಿಯುವ ತಯಾರಿಯಲ್ಲಿದ್ದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು, ತಮ್ಮ ನಿರ್ಧಾರ ಬದಲಾಯಿಸಿದ್ದಾರೆ. ಕಾಂಗ್ರೆಸ್ ನಲ್ಲಿಯೇ ಮುಂದುವರಿಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಆ ಪಕ್ಷದ ಮೂಲಗಳು ಮಾಹಿತಿ ನೀಡುತ್ತವೆ. ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಸೇರಿದಂತೆ ಹಲವು ನಾಯಕರು ಪ್ರಸನ್ನಕುಮಾರ್ ರವರ ಜೊತೆ ಸಮಾಲೋಚಿಸಿದ್ದಾರೆ.

ಚುನಾವಣಾ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದೆಡೆ, ಜೆಡಿಎಸ್ ಟಿಕೆಟ್ ಆಯನೂರು ಮಂಜುನಾಥ್ ಪಾಲಾಗಿದ್ದರಿಂದ ಪ್ರಸನ್ನಕುಮಾರ್ ರವರು ಕೂಡ ಚುನಾವಣಾ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿಯುವ ತೀರ್ಮಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆಯನೂರು ಮಂಜುನಾಥ್ ಗೆಲುವಿಗೆ ಶ್ರಮ : ಎಂ.ಶ್ರೀಕಾಂತ್
*** ‘ಪ್ರಸ್ತುತ ಚುನಾವಣೆಯಲ್ಲಿ ತಾವು ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಿದರೆ, ಪಕ್ಷಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂಬ ಅಭಿಪ್ರಾಯವನ್ನು ಪಕ್ಷದ ನಾಯಕರಿಗೆ ತಿಳಿಸಿದ್ದೆ. ಪ್ರಸ್ತುತ ಪಕ್ಷದ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಕಣಕ್ಕಿಳಿಯುತ್ತಿದ್ದಾರೆ. ಅವರ ಗೆಲುವಿಗೆ ಶ್ರಮಿಸಲಾಗುವುದು’ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಅವರು ತಿಳಿಸಿದ್ದಾರೆ.

ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹಲವು ದಶಕಗಳಿಂದ ಆಯನೂರು ಮಂಜುನಾಥ್ ರಾಜಕೀಯ ರಂಗದಲ್ಲಿದ್ದಾರೆ. ಕಾರ್ಮಿಕರು ಸೇರಿದಂತೆ ನೊಂದ ವರ್ಗಗಳ ಪರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಶಿವಮೊಗ್ಗದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ನೆಲೆಸಬೇಕಾದರೆ ಆಯನೂರು ಮಂಜುನಾಥ್ ರವರು ಶಾಸಕರಾಗಿ ಆಯ್ಕೆಯಾದರೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಮತದಾರರ ವಲಯದಲ್ಲಿದೆ ಎಂದು ಎಂ.ಶ್ರೀಕಾಂತ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
—————–