
ಬಿಸಿಲ ಬೇಗೆಗೆ ಬತ್ತಿದ ಕೆರೆಗಳು : ತುಂಗಾಭದ್ರಾ ನದಿಯಿಂದ ನೀರು ಹರಿಸಲು ಆಗ್ರಹಿಸಿ ಮನವಿ
ಶಿವಮೊಗ್ಗ, ಎ. 25: ತೀವ್ರ ಸ್ವರೂಪದ ಬಿಸಿಲ ಬೇಗೆಯಿಂದ ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗುತ್ತಿವೆ. ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ತಕ್ಷಣವೇ ತುಂಗಾಭದ್ರಾ ನದಿಯಿಂದ ಕೆರೆಗಳಿಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದು ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮಗಳ ರೈತರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಈ ಸಂಬಂಧ ಮಂಗಳವಾರ ಶಿವಮೊಗ್ಗ ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರಿಗೆ ಕೊಮ್ಮನಾಳು, ಸೋಮಿನಕೊಪ್ಪ, ಆಲದಹಳ್ಳಿ, ಹರಮಘಟ್ಟ, ಸುತ್ತುಕೋಟೆ, ಬನ್ನಿಕೆರೆ, ಬೂದಿಗೆರೆ ಕಾಲೋನಿ, ಬಿಕೊನಹಳ್ಳಿ, ಕಿಟ್ಟತಾಳು ರೈತರು ಮನವಿ ಪತ್ರ ಅರ್ಪಿಸಿದ್ದಾರೆ.
ಹಾಹಾಕಾರ: ಹರಮಘಟ್ಟದ ಗೌಡನ ಕೆರೆ, ಹರಮಘಟ್ಟದ ಸಿಗೇಕೆರೆ, ಬೂದಿಗೆರೆ ಕೆರೆ, ಸುತ್ತುಕೋಟೆ, ಅಯ್ಯನಕೆರೆ ಸೇರಿದಂತೆ ಹಲವು ಕೆರೆಗಳು ಬತ್ತಲಾರಂಭಿಸಿದೆ. ಬೋರ್’ವೆಲ್, ಬಾವಿ ಮತ್ತೀತರ ಜಲಮೂಲಗಳ ಅಂತರ್ಜಲದ ಪ್ರಮಾಣ ಕೂಡ ಕುಸಿಯುತ್ತಿದೆ. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಾರಂಭಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತುಂಗಾಭದ್ರಾ ನದಿಯಿಂದ ಕೆರೆಗಳಿಗೆ ನೀರು ಪೂರೈಸುವ ಬೂದಿಗೆರೆ ಏತ ನೀರಾವರಿ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಆದರೆ ಇಲ್ಲಿಯವರೆಗೂ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ. ಇದರಿಂದ ಪ್ರಸ್ತುತ ಬೇಸಿಗೆಯ ವೇಳೆ ಗ್ರಾಮಸ್ಥರು ತೀವ್ರ ತೊಂದರೆ ಎದುರಿಸುವಂತಾಗಿದೆ.
ಕೆರೆಕಟ್ಟೆಗಳಲ್ಲಿ ಕಡಿಮೆಯಾಗಿರುವುದು ಹಾಗೂ ಅಂತರ್ಜಲ ಮಟ್ಟ ಕುಸಿದಿರುವುದರಿಂದ, ತೋಟಗದ್ದೆಗಳಲ್ಲಿ ಬೆಳೆದ ಬೆಳೆಗಳು ಒಣಗುತ್ತಿವೆ. ಜನ-ಜಾನುವಾರುಗಳ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಈ ಕಾರಣದಿಂದ ತಕ್ಷಣವೇ ಬೂದಿಗೆರೆ ಯೋಜನೆಯಡಿ ತುಂಗಾಭದ್ರಾ ನದಿಯಿಂದ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮನವಿ ಅರ್ಪಿಸುವ ವೇಳೆ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಷಣ್ಮುಖಪ್ಪ, ಮುಖಂಡರಾದ ಕೆ.ಎನ್.ಮಹೇಶ್ವರಪ್ಪ, ಆರ್.ವಿ.ರಾಜಪ್ಪ, ಎಂ.ಹೆಚ್.ಮಹೇಶ್ವರಪ್ಪ, ಚನ್ನವೀರಪ್ಪ, ಜಿ.ಪಿ.ಬಸವರಾಜ, ನಾಗರಾಜಪ್ಪ, ಕೊಮ್ಮನಾಳ್ ನಾಗಪ್ಪ, ಸುತ್ತುಕೋಟೆ ವೀರಪ್ಪಯ್ಯ, ಬೀರನಕೆರೆ ಬಸವರಾಜ್ ಸೇರಿದಂತೆ ಮೊದಲಾದವರಿದ್ದರು.