
ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರ ಚಿಕಿತ್ಸೆ : ಶಿವಮೊಗ್ಗ ಎನ್.ಯು. ಆಸ್ಪತ್ರೆ ವೈದ್ಯರ ತಂಡದ ಸಾಧನೆ!
ಶಿವಮೊಗ್ಗ, ಮೇ 3: ಮೊಟ್ಟಮೊದಲ ಬಾರಿಗೆ ಮಲೆನಾಡು ಭಾಗದಲ್ಲಿ ಮೂತ್ರಪಿಂಡ ಕಸಿ (ಕಿಡ್ನಿ ಟ್ರಾನ್ಸ್’ಪ್ಲ್ಯಾಂಟ್) ಶಸ್ತ್ರಚಿಕಿತ್ಸೆಯನ್ನು ಎನ್ ಯು ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ನಡೆಸಿದೆ. ‘ಇದೊಂದು ಮೈಲಿಗಲ್ಲಾಗಿದೆ’ ಎಂದು ಎನ್ಯು ಆಸತ್ರೆ ಸಹಾಯಕ ವೈದ್ಯಕೀಯ ನಿರ್ದೇಶಕ ಡಾ.ಪ್ರವೀಣ್ ಮಾಳವದೆ ತಿಳಿಸಿದ್ದಾರೆ.
ಮಾಚೇನಹಳ್ಳಿಯಲ್ಲಿಯ ಎನ್ಯು ಆಸ್ಪತ್ರೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 23 ವರ್ಷದ ಯುವತಿ ಉಸಿರಾಟದ ತೊಂದರೆಯಿಂದ ಬಳುತ್ತಿದ್ದರು. ಅವರನ್ನು ಪರೀಕ್ಷಿಸಿದಾಗ ಅಧಿಕ ರಕ್ತದೊತ್ತಡ, ಮೂತ್ರಪಿಂಡ ವೈಫಲ್ಯ ಕಂಡುಬಂದಿತ್ತು.
ಅವರ ಕುಟುಂಬಸ್ಥರು ಕಿಡ್ನಿ ಕೊಡಲು ನೀಡಲು ಸಿದ್ಧರಾದರು. ಡಯಾಲಿಸಿಸ್ ಆರಂಭಿಸಿದ ಒಂದು ತಿಂಗಳಲ್ಲೇ ಕಿಡ್ನಿ ಟ್ರಾನ್ಸ್ಪ್ಲಾಂಟ್ ಯಶಸ್ವಿಯಾಗಿ ಮಾಡಲಾಗಿದೆ. ದಾನಿ ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರೂ ಆರೋಗ್ಯವಾಗಿದ್ದಾರೆ. ಲ್ಯಾಪ್ರೋಸ್ಕೋಪಿಕ್ ವಿಧಾನದ ಚಿಕಿತ್ಸೆಯಿಂದ ಕಡಿಮೆ ನೋವು, ಕಡಿಮೆ ಸಮಯದಲ್ಲಿ ಚೇತರಿಕೆ ಕಾಣಬಹುದು ಎಂದರು.
ಶಿವಮೊಗ್ಗ ಹಾಗೂ ಸುತ್ತಮುತ್ತಲ ಜಿಲ್ಲೆಯ ಜನರಿಗೆ ಈ ಸೌಲಭ್ಯ ಅನುಕೂಲವಾಗಲಿದೆ. ದೂರದ ಊರುಗಳಿಗೆ ಹೋಗುವುದು ತುಂಬಾ ವೆಚ್ಚದಾಯಕವಾಗಿದೆ. ಮಲೆನಾಡು ಭಾಗದ ಯಾವುದೇ ಜಿಲ್ಲೆಗಳಿಗೆ ಕಿಡ್ನಿ ಟ್ರಾನ್ಸ್ಪ್ಲಾಂಟ್ ಸೌಲಭ್ಯ ಇಲ್ಲ. ಎನ್ಯು ಆಸ್ಪತ್ರೆಯಿಂದ ದೂರದ ಪ್ರಯಾಣದ ವೆಚ್ಚ ಉಳಿಯುತ್ತದೆ. ಟ್ರಾನ್ಸ್’ಪ್ಲ್ಯಾಂಟ್ ನಿಂದ ವಾರಕ್ಕೆ ಎರಡದಿಂದ ಮೂರು ದಿನ ಡಯಾಲಿಸಿಸ್ ಮಾಡಿಸಿಕೊಳ್ಳುವ ಸಮಸ್ಯೆ ಬಗೆಹರಿಯುತ್ತದೆ. ಟ್ರಾನ್ಸ್ಪ್ಲಾಂಟ್ ಮಾಡಿಸಿಕೊಂಡ ರೋಗಿ ಕೆಲವೇ ತಿಂಗಳುಗಳಲ್ಲಿ ಮೊದಲಿನಂತೆ ಜೀವನ ನಡೆಸಬಹುದು. ಒಂದು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿಯಲಿದೆ. ಈ ಸೌಲಭ್ಯವನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕನ್ಸಲ್ಟೆಂಟ್ ಮೂತ್ರಶಾಸ್ತ್ರಜ್ಞ ಮತ್ತು ಟ್ರಾನ್ಸ್ ಪ್ಲಾಂಟ್ ತಜ್ಞ ಶಸ್ತ್ರಚಿಕಿತ್ಸಕ ಡಾ.ಪ್ರದೀಪ್ ಮಾತನಾಡಿ. ಎನ್ಯು ಆಸ್ಪತ್ರೆ ಎಬಿಒ ಹೊಂದಾಣಿಕೆಯಾಗದ ಟ್ರಾನ್ಸ್’ಪ್ಲ್ಯಾಂಟ್, ಮಕ್ಕಳ ಮೂತ್ರಪಿಂಡ ಟ್ರಾನ್ಸ್’ಪ್ಲ್ಯಾಂಟ್ ಮತ್ತು ಸ್ವಾಪ್ ಟ್ರಾನ್ಸ್ ಪ್ಲಾಂಟ್, ರೋಬೋಟಿಕ್ ಸರ್ಜರಿ ನಿರ್ವಹಿಸಲು ಹೆಸರುವಾಸಿಯಾಗಿದೆ. ಕಿಡ್ನಿ ದಾನಕ್ಕೆ ಹೆಚ್ಚು ಜನ ಮುಂದೆ ಬರಬೇಕು. ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವವರಿಗೆ ಇದು ಅನುಕೂಲವಾಗಲಿದೆ ಎಂದರು. ಗೋಷ್ಠಿಯಲ್ಲಿ ಡಾ.ಕಾರ್ತಿಕ್, ಆಸ್ಪತ್ರೆ ವೈದ್ಯರ ತಂಡ ಇದ್ದರು.