
ಮತದಾನದ ನಂತರ ಸೋಲು-ಗೆಲುವಿನ ಲೆಕ್ಕಾಚಾರ ಬಿರುಸು!
ವರದಿ : ಬಿ.ರೇಣುಕೇಶ್
ವಿಧಾನಸಭೆ ಸಾರ್ವತ್ರಿಕ ಚುನಾವಣೆ – 2023 ಮಹಾ ಸಮರಕ್ಕೆ ತೆರೆ ಬಿದ್ದಿದೆ. ಮೇ 13 ರ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ನಡುವೆ ರಾಜಕೀಯ ಪಕ್ಷ ಮಾತ್ರವಲ್ಲದೆ, ಸಾರ್ವಜನಿಕ ವಲಯದಲ್ಲಿ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರಗಳು ಬಿರುಸುಗೊಂಡಿವೆ!
ಯಾವ ಅಸೆಂಬ್ಲಿ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ? ಯಾವ ಪಕ್ಷಕ್ಕೆ ಎಷ್ಟೆಷ್ಟು ಮತ ಬೀಳಬಹುದು? ಯಾವ ಅಭ್ಯರ್ಥಿ ಗೆಲ್ಲಬಹುದು – ಸೋಲಬಹುದು? ಸೋಲು – ಗೆಲುವಿಗೆ ಕಾರಣವಾಗುವ ಅಂಶಗಳೇನು? ಎಂಬಿತ್ಯಾದಿ ಚರ್ಚೆಗಳು ಸರ್ವೇ ಸಾಮಾನ್ಯವಾಗಿದೆ.
ಮತ್ತೊಂದೆಡೆ, ಕೆಲ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಅಸೆಂಬ್ಲಿ ಕ್ಷೇತ್ರಗಳ ಪ್ರತಿಯೊಂದು ಬೂತ್ ನಲ್ಲಿ ಆಗಿರುವ ಮತದಾನದ ವಿವರ ಕಲೆ ಹಾಕುತ್ತಿದ್ದಾರೆ. ತಮ್ಮ ಪಕ್ಷಗಳ ಬೂತ್ ಏಜೆಂಟ್ ಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದರ ಆಧಾರದ ಮೇಲೆ ಯಾವ್ಯಾವ ಭಾಗದಲ್ಲಿ ಎಷ್ಟೆಷ್ಟು ಮತ ತಮಗೆ ಬಿದ್ದಿರಬಹುದು? ಎದುರಾಳಿಗಳ ಮತ ಗಳಿಕೆ ಎಷ್ಟಿರಬಹುದು? ಎಂಬ ಊಹಾತ್ಮಕ ಲೆಕ್ಕಾಚಾರದಲ್ಲಿ ಮುಳುಗಿರುವುದು ಕಂಡುಬರುತ್ತಿದೆ.
ಬೆಟ್ಟಿಂಗ್: ಕೆಲ ರಾಜಕೀಯ ಕುತೂಹಲಿಗಳು, ಅಭ್ಯರ್ಥಿಗಳ ಬೆಂಬಲಿಗರು ಬೆಟ್ಟಿಂಗ್ ರಾಜಕಾರಣದಲ್ಲಿ ತೊಡಗಿದ್ದಾರೆ. ಅಭ್ಯರ್ಥಿಗಳ ಸೋಲು – ಗೆಲುವಿನ ಮೇಲೆ ಪಣ ಕಟ್ಟುತ್ತಿದ್ದಾರೆ. ಭಾರೀ ಪ್ರಮಾಣದ ಬೆಟ್ಟಿಂಗ್ ನಡೆಯುತ್ತಿರುವ ಮಾಹಿತಿಗಳು ರಾಜಕೀಯ ವಲಯದಿಂದ ಕೇಳಿ ಬರಲಾರಂಭಿಸಿದೆ.
ನಿಗೂಢ: ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಅಖಾಡ ಕಂಡುಬಂದಿದೆ. ಇದರಿಂದ ಯಾವಾ ಕ್ಷೇತ್ರದಲ್ಲಿ ಯಾರು ಜಯ ಸಾಧಿಸುತ್ತಾರೆ ಎಂಬುವುದು ಊಹಿಸಲು ಆಗದಂತಾಗಿದೆ. ಯಾರೇ ಗೆಲುವು ಸಾಧಿಸಿದರೂ ಅಂತರ ಕಡಿಮೆಯಿರಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಮತದಾನೋತ್ತರ ಸಮೀಕ್ಷೆ: ವಿವಿಧ ಸುದ್ದಿಸಂಸ್ಥೆಗಳು ಹಾಗೂ ಖಾಸಗಿ ಎಜೆನ್ಸಿಗಳು ನಡೆಸಿದ ಮತದಾನೋತ್ತರ ಸಮೀಕ್ಷೆಗಳ ಬಗ್ಗೆಯೂ ರಾಜಕೀಯ ರಂಗದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸಮೀಕ್ಷೆಗಳ ಬಗ್ಗೆ ಪರ – ವಿರೋಧ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆ ಎಲ್ಲರ ಚಿತ್ತ ಮೇ 13 ಮತ ಎಣಿಕೆಯತ್ತ ನೆಟ್ಟಿದೆ.
ವಿಶ್ರಾಂತಿಗೆ ಮೊರೆ ಹೋದ ಅಭ್ಯರ್ಥಿಗಳು..!
*** ಇಷ್ಟು ದಿನ ಮತದಾರ ಪ್ರಭುಗಳ ಚಿತ್ತ ಸೆಳೆಯಲು ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಓಡಾಡುತ್ತಿದ್ದ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಮತದಾನ ಪೂರ್ಣಗೊಂಡ ನಂತರ ವಿಶ್ರಾಂತಿ ಮೊರೆ ಹೋಗಿದ್ದಾರೆ. ಕೆಲ ಅಭ್ಯರ್ಥಿಗಳು ಮನೆಯಲ್ಲಿಯೇ ಇದ್ದು, ಬೆಂಬಲಿಗರ ಮೂಲಕ ಕ್ಷೇತ್ರ ವ್ಯಾಪ್ತಿಯ ಮತದಾನ ವಿವರ ಪಡೆದುಕೊಳ್ಳುತ್ತಿದ್ದಾರೆ. ಎಲ್ಲೆಲ್ಲಿ ತಮಗೆ ಮತ ಬಂದಿರಬಹುದು ಎಂಬುವುದರ ವಿವರ ಕಲೆ ಹಾಕುತ್ತಿದ್ದಾರೆ. ಮತ್ತೊಂದೆಡೆ, ಕೆಲ ಅಭ್ಯರ್ಥಿಗಳು ಧಾರ್ಮಿಕ ತಾಣಗಳಿಗೆ ಭೇಟಿಯಿತ್ತು ತಮ್ಮ ಗೆಲುವಿಗೆ ಪ್ರಾರ್ಥಿಸಿ ದೇವರಿಗೆ ವಿಶೇಷ ಪೂಜೆ ಅರ್ಪಿಸುತ್ತಿದ್ದಾರೆ.
One thought on “ಮತದಾನದ ನಂತರ ಸೋಲು-ಗೆಲುವಿನ ಲೆಕ್ಕಾಚಾರ ಬಿರುಸು!”
Comments are closed.
Hello sir.
ತುಂಬಾ ಚೆನ್ನಾಗಿದೆ. ಒಂದು ಒಳ್ಳೆಯ ವಾರ್ತಾ ವಾಹಿನಿ. ತುಂಬಾ ಉಪಯುಕ್ತವಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗವಂತಹ ಒಂದು ವಿಭಿನ್ನ ಪ್ರಯತ್ನಕ್ಕೆ ನನ್ನ ಅಭಿಮಾನದ ನಮಸ್ತೆ.