
ಶಿಕಾರಿಪುರ : ಬಿ.ವೈ.ವಿಜಯೇಂದ್ರಗೆ ಪ್ರಯಾಸದ ಗೆಲುವು!
*ಭಾರೀ ಹೋರಾಟ ನಡೆಸಿದ ಪಕ್ಷೇತರ ಅಭ್ಯರ್ಥಿ ನಾಗರಾಜಗೌಡ
-ಬಿ. ರೇಣುಕೇಶ್-
ಶಿಕಾರಿಪುರ, ಮೇ 13: ನಿರೀಕ್ಷಿಸಿದಂತೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಅವರು ಪ್ರಯಾಸದ ಜಯ ಸಂಪಾದಿಸಿದ್ದಾರೆ. ಅವರ ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ನಾಗರಾಜಗೌಡ ಅವರು ಭಾರೀ ಹೋರಾಟ ನೀಡಿದ್ದು, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೋಣಿ ಮಾಲತೇಶ್ ಅವರು ಠೇವಣಿ ಕಳೆದುಕೊಂಡು ಹೀನಾಯ ಸೋಲನುಭವಿಸಿದ್ದಾರೆ!
ವಿಜೇತ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಅವರು 81,015 ಮತ ಪಡೆದಿದ್ದಾರೆ. ಅವರ ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ನಾಗರಾಜಗೌಡ ಅವರು 70,371 ಮತ ಪಡೆದಿದ್ದಾರೆ. ಬಿ.ವೈ. ವಿಜಯೇಂದ್ರ ಅವರು ನಾಗರಾಜಗೌಡ ಎದುರು 10,644 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಉಳಿದಂತೆ ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್ ಅವರು 8038 ಮತ ಗಳಿಸಲಷ್ಟೆ ಶಕ್ತರಾಗಿದ್ದಾರೆ.

17 ಸುತ್ತುಗಳಲ್ಲಿ ಶಿಕಾರಿಪುರ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಿತು. ಬಿ.ವೈ.ವಿಜಯೇಂದ್ರ ಅವರು ಪ್ರತಿಯೊಂದು ಸುತ್ತಿನಲ್ಲಿಯೂ ಮುನ್ನಡೆ ಕಾಯ್ದುಕೊಂಡರು, ನಾಗರಾಜಗೌಡ ಅವರು ಉತ್ತಮ ಮತ ಗಳಿಕೆ ಮಾಡುವ ಮೂಲಕ ಸ್ಪರ್ಧೆವೊಡ್ಡುತ್ತಲೆ ಬಂದಿದ್ದು ವಿಶೇಷವಾಗಿತ್ತು. ಅಂತಿಮವಾಗಿ ಬಿ.ವೈ.ವಿಜಯೇಂದ್ರ ಜಯದ ನಗೆ ಬೀರಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲೆಕ್ಕಾಚಾರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿನಿಧಿಸಿಕೊಂಡು ಬರುತ್ತಿದ್ದ ಶಿಕಾರಿಪುರ ವಿಧಾನಸಭಾ ಕ್ಷೇತ್ರವು ಬಿಜೆಪಿ ಭದ್ರಕೋಟೆಯಾಗಿತ್ತು. ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಬಿ.ವೈ.ವಿಜಯೇಂದ್ರಗೆ ಬಿಜೆಪಿ ಟಿಕೆಟ್ ನೀಡಲಾಗಿತ್ತು.
ಮತ್ತೊಂದೆಡೆ, ಕಾಂಗ್ರೆಸ್ ಪಕ್ಷದಲ್ಲಿ ನಾಗರಾಜಗೌಡ ಹಾಗೂ ಗೋಣಿ ಮಾಲತೇಶ್ ಅವರ ನಡುವೆ ಟಿಕೆಟ್ ಗೆ ಭಾರೀ ಪೈಪೋಟಿ ಕಂಡುಬಂದಿತ್ತು. ಆದರೆ ಗೋಣಿ ಮಾಲತೇಶ್ ಅವರಿಗೆ ಅವಕಾಶ ನೀಡಲಾಗಿತ್ತು. ಈ ಕಾರಣದಿಂದ ನಾಗರಾಜಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದರು.
ಈ ನಡುವೆ ಕಾಂಗ್ರೆಸ್ ವರಿಷ್ಠರು ನಾಗರಾಜಗೌಡ ಅವರಿಗೆ ಬಿ ಫಾರಂ ನೀಡುವ ಚಿಂತನೆ ನಡೆಸಿದ್ದರು. ಆದರೆ ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಕೊನೆ ಕ್ಷಣದಲ್ಲಿ ನಾಗರಾಜಗೌಡ ಅವರಿಗೆ ಕಾಂಗ್ರೆಸ್ ಬಿ ಫಾರಂ ಕೈ ತಪ್ಪಿತ್ತು. ಆದಾಗ್ಯೂ ಅವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಮುಂದುವರಿದಿದ್ದರು.
ಭಾರೀ ಪೈಪೋಟಿ: ಮತದಾದನ ಪೂರ್ವದಲ್ಲಿ ನಾಗರಾಜಗೌಡ ಅವರಿಗೆ ಮತದಾರರ ವಲಯದಿಂದ ಭಾರೀ ಬೆಂಬಲ ವ್ಯಕ್ತವಾಗಿತ್ತು. ಕೆಲ ಹಳ್ಳಿಗಳಲ್ಲಿ ಸ್ವತಃ ಮತದಾರರೇ ಹಣ ಸಂಗ್ರಹಿಸಿ ನಾಗರಾಜಗೌಡ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದು ಬಿಜೆಪಿ ಪಕ್ಷದ ನಿದ್ದೆಗೆಡುವಂತೆ ಮಾಡಿತ್ತು.
ಈ ಕಾರಣದಿಂದ ಶಿಕಾರಿಪುರ ಕ್ಷೇತ್ರದಲ್ಲಿ ಪ್ರಾಬಲ್ಯ ಮುಂದುವರಿಸಿಕೊಂಡು ಹೋಗಲು ಬಿಜೆಪಿ ಭಾರೀ ಕಸರತ್ತು ನಡೆಸಿತ್ತು. ಅಂತಿಮವಾಗಿ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.