
ಶಿವಮೊಗ್ಗ ಕ್ಷೇತ್ರ : ಬಿಜೆಪಿ ಚನ್ನಬಸಪ್ಪಗೆ ವಿಜಯದ ಮಾಲೆ!
*ಕಾಂಗ್ರೆಸ್ ಪರಾಭವ – ಜೆಡಿಎಸ್ ಗೆ ಹೀನಾಯ ಸೋಲು!
-ಬಿ. ರೇಣುಕೇಶ್-
ಶಿವಮೊಗ್ಗ, ಮೇ 13: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿದೆ. ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ವಿಜಯದ ನಗೆ ಬೀರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೀಶ್ ಪರಾಭಗೊಂಡಿದ್ದು, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಮತ್ತೊಂದೆಡೆ, ಭಾರೀ ಕುತೂಹಲ ಮೂಡಿಸಿದ್ದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೀನಾಯ ಸೋಲನುಭವಿಸಿದ್ದಾರೆ!
ವಿಜೇತ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪರವರು 95,399 ಮತ ಪಡೆದಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಹೆಚ್.ಸಿ.ಯೋಗೀಶ್ ಅವರು 68,071 ಮತ ಸಂಪಾದಿಸಿದ್ದಾರೆ. ಚನ್ನಬಸಪ್ಪ ಅವರು ಹೆಚ್.ಸಿ.ಯೋಗೀಶ್ ಎದುರು 27,328 ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ. ಉಳಿದಂತೆ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು ಕೇವಲ 8623 ಮತ ಗಳಿಸಿದ್ದಾರೆ.

ಟಿಕೆಟ್ ರಾಜಕಾರಣ: ಶಿವಮೊಗ್ಗ ನಗರ ಕ್ಷೇತ್ರದ ಪ್ರತಿನಿಧಿಸಿಕೊಂಡು ಬರುತ್ತಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಣೆ ಮಾಡಿತ್ತು. ಅವರ ಪುತ್ರ ಕೆ.ಇ.ಕಾಂತೇಶ್ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಕೊನೆ ಕ್ಷಣದಲ್ಲಿ ಬಿಜೆಪಿ ವರಿಷ್ಠರು ಚನ್ನಬಸಪ್ಪ ಅವರಿಗೆ ಮಣೆ ಹಾಕಿದ್ದರು.
ಮತ್ತೊಂದೆಡೆ, ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಅವರು ಬಿಜೆಪಿ ತೊರೆದಿದ್ದರು. ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಅವರಿಗೆ ಅಲ್ಲಿ ಸ್ಪರ್ಧೆಗೆ ಅವಕಾಶ ಸಿಗದಿದ್ದರಿಂದ, ಕೊನೆ ಕ್ಷಣದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದರು.

ಇನ್ನೊಂದೆಡೆ, ಕಾಂಗ್ರೆಸ್ ಪಕ್ಷದಲ್ಲಿಯೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿತ್ತು. ಯಾರು ಅಖಾಡಕ್ಕಿಳಿಯುತ್ತಾರೆ ಎಂಬುವುದು ಊಹಿಸಲಾಗದಂತಹ ಸ್ಥಿತಿಯಿತ್ತು. ಅಂತಿಮವಾಗಿ ಹೆಚ್.ಸಿ.ಯೋಗೀಶ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದರು.
ಭಾರೀ ಲೆಕ್ಕಾಚಾರ: ಮತದಾನದ ಪೂರ್ವದಲ್ಲಿ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ನಡುವೆ ತ್ರಿಕೋನ ಹಣಾಹಣಿಯ ಲೆಕ್ಕಾಚಾರಗಳು ಕಂಡುಬಂದಿದ್ದವು. ಬಿಜೆಪಿ ಅಭ್ಯರ್ಥಿ ಮತಗಳಿಕೆಯ ಮೇಲೆ ‘ಒಳ ಒಡೆತ’ ಪರಿಣಾಮ ಬೀರಲಿದೆ ಎಂದು ಹೇಳಲಾಗಿತ್ತು. ಬಿಜೆಪಿ ಮತಗಳಿಕೆ ಲೆಕ್ಕಾಚಾರ ತಲೆಕೆಳಗಾಗಲಿದೆ ಎಂದು ಹೇಳಲಾಗಿತ್ತು.
ಮತ್ತೊಂದೆಡೆ, ಹೆಚ್.ಸಿ.ಯೋಗೀಶ್ ಗೆ ಟಿಕೆಟ್ ನೀಡಿದ್ದರಿಂದ ಮುನಿಸಿಕೊಂಡ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದರು. ಇದರ ನಡುವೆ ಕಾಂಗ್ರೆಸ್ ನ ಹಲವು ನಾಯಕರು ಜೆಡಿಎಸ್ ನತ್ತ ಮುಖ ಮಾಡಿದ್ದರು. ಒಗ್ಗಟ್ಟಿನ ಕೊರತೆ ಕಂಡುಬಂದಿತ್ತು. ಭಿನ್ನಮತ ಮನೆ ಮಾಡಿತ್ತು.
ಬಿಜೆಪಿ ಹಾಗೂ ಕಾಂಗ್ರೆಸ್ ರಾಜಕೀಯ ವಿದ್ಯಮಾನಗಳಿಂದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಮತಗಳಿಕೆಗೆ ಸಹಕಾರಿಯಾಗಲಿದೆ ಎಂದು ಹೇಳಲಾಗಿತ್ತು. ಪ್ರಭಾವಿ ಸಮುದಾಯ ಹಾಗೂ ಅಲ್ಪಸಂಖ್ಯಾತರ ಮತಗಳಿಕೆಯ ವಿಶ್ವಾಸದಲ್ಲಿ ಜೆಡಿಎಸ್ ಪಕ್ಷವಿತ್ತು. ಈ ಕಾರಣದಿಂದ ಜೆಡಿಎಸ್ ಪಕ್ಷದ ಮೇಲೆ ಭಾರೀ ನಿರೀಕ್ಷೆ ಮನೆ ಮಾಡಿತ್ತು.
ಆದರೆ ಎಲ್ಲ ಲೆಕ್ಕಾಚಾರಗಳು ಉಲ್ಟಾ ಹೊಡೆದಿದೆ. ಬಿಜೆಪಿಗೆ ನಿರೀಕ್ಷಿಸಿದಂತೆ ‘ಹಿಂದುತ್ವ’ದ ಲೆಕ್ಕಾಚಾರಗಳು ಕೈ ಹಿಡಿದಿದೆ. ಕಾಂಗ್ರೆಸ್ ಕೂಡ ಉತ್ತಮ ಮತಗಳಿಕೆ ಮಾಡಿದೆ. ಸಾಂಪ್ರಾದಯಿಕ ಮತ ಸೆಳೆಯುವಲ್ಲಿ ಯಶವಾಗಿದ್ದರೂ ಜಯದ ಹೊಸ್ತಿಲಿಗೆ ಬರಲು ಸಾಧ್ಯವಾಗಿಲ್ಲ.
ಆದರೆ ಜೆಡಿಎಸ್ ಪಕ್ಷ ನಿರೀಕ್ಷಿಸಿದ್ದ ಪ್ರಮುಖ ವರ್ಗಗಳು ಮತಗಳು ಕೈಕೊಟ್ಟಿವೆ. ಆ ಪಕ್ಷಕ್ಕೆ ನಾಯಕರು ಬಂದರೇ ಹೊರತು ಮತಗಳು ಬರಲಿಲ್ಲ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಾರೆ.
ಮೊದಲ ಬಾರಿಗೆ ಅಸೆಂಬ್ಲಿ ಪ್ರವೇಶ!
*** ಬಿಜೆಪಿ ಪಕ್ಷದ ವಿಜೇತ ಅಭ್ಯರ್ಥಿ ಚನ್ನಬಸಪ್ಪ ಅವರು ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರಸಭೆ ಸದಸ್ಯರಾಗಿ, ಪಾಲಿಕೆ ಕಾರ್ಪೋರೇಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಅವರು ಪಾಲಿಕೆ ಕಾರ್ಪೋರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಟ್ಟಾ ಹಿಂದುತ್ವದ ಪ್ರತಿಪಾದಕರಾಗಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅದೇ ಅವರ ಜಯಕ್ಕೆ ಮುಖ್ಯ ಕಾರಣವಾಗಿ ಪರಿಣಮಿಸಿದೆ.