
ತೀರ್ಥಹಳ್ಳಿ : ಭಾರೀ ಹೋರಾಟದಲ್ಲಿ ಜಯದ ಗಡಿ ತಲುಪಿದ ಆರಗ ಜ್ಞಾನೇಂದ್ರ!
*ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಪರಾಭವ
-ಬಿ. ರೇಣುಕೇಶ್-
ತೀರ್ಥಹಳ್ಳಿ, ಮೇ 13: ಹಾಲಿ – ಮಾಜಿ ಸಚಿವರ ಸ್ಪರ್ಧೆಯಿಂದ ಇಡೀ ರಾಜ್ಯದ ಗಮನ ಸೆಳೆದಿದ್ದ ಹಾಗೂ ನೇರ ಪೈಪೋಟಿ ಕಂಡುಬಂದಿದ್ದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ, ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ ಅವರು ಗೆಲುವಿನ ನಗೆ ಬೀರಿದ್ದಾರೆ. ಜಯದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಪರಾಭವಗೊಂಡಿದ್ದಾರೆ!
ವಿಜೇತ ಅಭ್ಯರ್ಥಿ ಆರಗ ಜ್ಞಾನೇಂದ್ರ ಅವರು 83,879 ಮತ ಪಡೆದರೆ, ಕಿಮ್ಮನೆ ರತ್ನಾಕ್ ಅವರು 71,791 ಪಡೆದಿದ್ದಾರೆ. ಆರಗ ಜ್ಞಾನೇಂದ್ರ ಅವರು 12,088 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.
ಒಟ್ಟಾರೆ 19 ಸುತ್ತುಗಳಲ್ಲಿ ತೀರ್ಥಹಳ್ಳಿ ಕ್ಷೇತ್ರದ ಮತ ಎಣಿಕೆ ನಡೆಯಿತು. ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಆರಗ ಜ್ಞಾನೇಂದ್ರ ಮುನ್ನಡೆ ಕಾಯ್ದುಕೊಳ್ಳವಲ್ಲಿ ಸಫಲವಾದರು. ಪ್ರಾರಂಭದಲ್ಲಿ ಎರಡ್ಮೂರು ಸಾವಿರವಿದ್ದ ಆರಗ ಅವರ ಮತಗಳ ಅಂತರ ಕ್ರಮೇಣ ಏರಿಕೆಯಾಗುತ್ತಾ ಬಂದಿತು.
ಬದಲಾದ ಲೆಕ್ಕಾಚಾರ: ಕಾಂಗ್ರೆಸ್ ನಿಂದ ಕಿಮ್ಮನೆ ರತ್ನಾಕರ್ ಜೊತೆಯಲ್ಲಿ ಮುಖಂಡ ಆರ್.ಎಂ.ಮಂಜುನಾಥ್ ಗೌಡ ಅವರು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇಬ್ಬರ ನಡುವೆ ಟಿಕೆಟ್ ಗೆ ಭಾರೀ ಪೈಪೋಟಿ ಕಂಡುಬಂದಿತ್ತು. ಅಂತಿಮವಾಗಿ ಕಾಂಗ್ರೆಸ್ ಕಿಮ್ಮನೆ ರತ್ನಾಕರ್ ಅವರಿಗೆ ಟಿಕೆಟ್ ನೀಡಿತ್ತು. ಮಂಜುನಾಥ್ ಗೌಡ ಅವರಿಗೆ ಎಂ.ಎಲ್.ಸಿ. ಮಾಡುವ ಭರವಸೆ ನೀಡಲಾಗಿತ್ತು.

ತದನಂತರ ಈ ಇಬ್ಬರು ನಾಯಕರು ಜೊತೆಜೊತೆಯಾಗಿ ಚುನಾವಣೆ ಎದುರಿಸಿದ್ದರು. ಮತದಾನ ಪೂರ್ವದಲ್ಲಿ ಕ್ಷೇತ್ರದಾದ್ಯಂತ ಕಿಮ್ಮನೆ ಪರವಾದ ಅಲೆ ಕಂಡುಬಂದಿತ್ತು. ಅವರ ಜಯ ನಿಶ್ಚಿತ ಎಂದೇ ವಿಶ್ಲೇಷಿಸಲಾಗಿತ್ತು.
ಆದರೆ ಮತದಾನದ ನಂತರದ ಲೆಕ್ಕಾಚಾರದಲ್ಲಿ ಕಿಮ್ಮನೆ ಸೋಲುವ ಸಾಧ್ಯತೆಗಳು ದಟ್ಟವಾಗಿತ್ತು. ಬಿಜೆಪಿ ಗೆಲುವಿನ ಲಕ್ಷಣಗಳು ಕಂಡುಬಂದಿದ್ದವು. ಇದೀಗ ಮತದಾನೋತ್ತರ ಲೆಕ್ಕಾಚಾರದಂತೆ ಕಾಂಗ್ರೆಸ್ ಪರಾಭವಗೊಂಡಿದೆ. ಬಿಜೆಪಿ ಜಯದ ನಗೆ ಬೀರಿದೆ.
ಸೋಲು-ಗೆಲುವಿನ ಲೆಕ್ಕಾಚಾರ: ಗೃಹ ಸಚಿವರಾದ ನಂತರವೂ ಆರಗ ಜ್ಞಾನೇಂದ್ರ ಅವರು ಕ್ಷೇತ್ರದ ಮತದಾರರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು. ಜೊತೆಗೆ ನಿರಂತರವಾಗಿ ಕ್ಷೇತ್ರ ಸುತ್ತು ಹಾಕುವ ಮೂಲಕ ತಮ್ಮ ವಿರುದ್ದ ಆಡಳಿತ ವಿರೋಧಿ ಅಲೆ ಎದುರಾಗದಂತೆ ಮತದಾರರ ವಿಶ್ವಾಸ ಉಳಿಸಿಕೊಂಡಿದ್ದರು. ಜೊತೆಗೆ ಹಿಂದುತ್ವ ಆಧಾರಿತ ಮತಗಳಿಕೆ ಲೆಕ್ಕಾಚಾರ ಹಾಗೂ ಚುನಾವಣೆ ವೇಳೆ ‘ಮತಗಳಿಕೆ’ಗೆ ನಡೆಸಿದ ಗುಪ್ತ ಕಾರ್ಯತಂತ್ರಗಳು ಬಿಜೆಪಿ ಗೆಲುವಿಗೆ ಕಾರಣವೆಂದೇ ವಿಶ್ಲೇಷಿಸಲಾಗುತ್ತಿದೆ.
ಜಯದ ಉಮೇದಿನಲ್ಲಿದ್ದ ಕಾಂಗ್ರೆಸ್ ಪಕ್ಷ ಪರಾಭವಗೊಂಡಿರುವುದಕ್ಕೆ ಕಾರ್ಯತಂತ್ರಗಳ ವೈಫಲ್ಯ, ಕೊನೆ ಹಂತದಲ್ಲಿ ಕೆಲ ನಾಯಕರು ‘ಕೈ’ ಕೊಟ್ಟಿದ್ದು, ‘ಆರ್ಥಿಕ ಸಂಪನ್ಮೂಲ’ಗಳ ಕೊರತೆ ಮತ್ತೀತರ ಕಾರಣಗಳು ಮುಖ್ಯವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.