
ಸಾಗರ : ಬೆಂಬಲಿಗರ ಬಲದ ಮೇಲೆ ವಿಜಯದ ನಗೆ ಬೀರಿದ ಬೇಳೂರು ಗೋಪಾಲಕೃಷ್ಣ!
-ಬಿ.ರೇಣುಕೇಶ್-
ಸಾಗರ, ಮೇ 13: ‘ಹಳೇ ದೋಸ್ತಿ’ಗಳ ನಡುವೆ ಭಾರೀ ಹಣಾಹಣಿಗೆ ವೇದಿಕೆಯಾಗಿದ್ದ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ, ಕೊನೆಗೂ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಜಯದ ನಗೆ ಬೀರಿದ್ದಾರೆ. ಕ್ಷೇತ್ರದ ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಪರಾಭವಗೊಂಡಿದ್ದಾರೆ!
ವಿಜೇತ ಬೇಳೂರು ಗೋಪಾಲಕೃಷ್ಣ ಅವರು 88,179 ಮತ ಪಡೆದಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಹರತಾಳು ಹಾಲಪ್ಪ ಅವರು 72,263 ಮತ ಗಳಿಸಿದ್ದಾರೆ. ಬೇಳೂರು ಅವರು 15,916 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.
ಉಳಿದಂತೆ ಜೆಡಿಎಸ್ ಅಭ್ಯರ್ಥಿ ಸೈಯದ್ ಜಾಕೀರ್ ಕೇವಲ 345 ಮತ ಪಡೆದರೆ, ಎಎಪಿ ಅಭ್ಯರ್ಥಿ ಕೆ.ದಿವಾಕರ್’ಗೆ 1029 ಮತ ಸಂದಾಯವಾಗಿದೆ.
‘ಸಾಂಪ್ರದಾಯಿಕ ಮತಗಳು ವಿಭಜನೆಯಾಗದಿದ್ದುದು ಹಾಗೂ ಬಿಜೆಪಿ ವಿರೋಧಿ ಮತಗಳ ಕ್ರೋಢೀಕರಣವು, ಕಾಂಗ್ರೆಸ್ ಪಕ್ಷದ ಜಯ ಸುಲಭವಾಗುವಂತಾಗಿದೆ’ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಭಾರೀ ಸೆಣಸಾಟ: ಪ್ರಸ್ತುತ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಹೋರಾಟ ಕಂಡುಬಂದಿತ್ತು. ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಮತ್ತೆ ಜಯ ಸಂಪಾದಿಸಲು ಭಾರೀ ಕಸರತ್ತು ನಡೆಸಿದ್ದರು. ಈ ಕಾರಣದಿಂದ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ನಂದಿನಿ ಅವರನ್ನು ಬಿಜೆಪಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಸರ್ಕಾರದ ಮೂಲಕ ಸಾಕಷ್ಟು ಅನುದಾನ ಕ್ಷೇತ್ರಕ್ಕೆ ತಂದಿದ್ದರು. ಹಲವು ಅಭಿವೃದ್ದಿ ಕಾಮಗಾರಿ ಅನುಷ್ಠಾನಗೊಳಿಸಿದ್ದರು.

ಇನ್ನೊಂದೆಡೆ, ಬೇಳೂರು ಗೋಪಾಲಕೃಷ್ಣ ಅವರು ಕಳೆದ ಹಲವು ವರ್ಷಗಳಿಂದ ಕ್ಷೇತ್ರದ ಮತದಾರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ರಾಜಕಾರಣದಲ್ಲಿ ಸಕ್ರಿಯವಾಗಿದ್ದರು. ಅಧಿಕಾರವಿಲ್ಲದ ಹೊರತಾಗಿಯೂ ನಾಗರೀಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಡೆಸಿಕೊಂಡು ಬರುತ್ತಿದ್ದರು. ಬೆಂಬಲಿಗ ಪಡೆಯ ಮೂಲಕ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಎದುರಾಳಿ ಹಾಲಪ್ಪ ವೈಫಲ್ಯಗಳನ್ನು ಕ್ಷೇತ್ರದ ನಾಗರೀಕರ ಗಮನಕ್ಕೆ ತರುವ ಕಾರ್ಯ ನಡೆಸಿಕೊಂಡು ಬರುತ್ತಿದ್ದರು. ಈ ಎಲ್ಲ ಮೂಲಕ ನಾಗರೀಕರ ಗಮನ ಸೆಳೆಯುವ ಕಾರ್ಯ ಮಾಡಿಕೊಂಡು ಬಂದಿದ್ದರು.
ಲೆಕ್ಕಾಚಾರ: ಶಾಸಕ ಹರತಾಳು ಹಾಲಪ್ಪ ಅವರು ಕೆಲ ಸ್ವಪಕ್ಷೀಯ ನಾಯಕರೊಂದಿಗೆ ವೈಮನಸ್ಸು ಬೆಳೆಸಿಕೊಂಡಿದ್ದು, ಅವರ ಕೆಲ ಬೆಂಬಲಿಗರ ವಿರುದ್ದ ಕೇಳಿಬಂದ ಆರೋಪಗಳು, ಆಡಳಿತ ವಿರೋಧಿ ಅಲೆ ಸೇರಿದಂತೆ ಹಲವು ರಾಜಕೀಯ ಕಾರಣಗಳು ಅವರಿಗೆ ದೊಡ್ಡ ಹೊರೆಯಾಗಿ ಪರಿಣಮಿಸುವಂತಾಗಿದೆ.
ಮತ್ತೊಂದೆಡೆ ಬೇಳೂರು ಅವರು ಮತದಾರರೊಂದಿಗೆ ಹೊಂದಿದ್ದ ಉತ್ತಮ ಬಾಂಧವ್ಯ, ಭಾವಾನಾತ್ಮಕ ರಾಜಕಾರಣ ನಡೆ, ಬೆಂಬಲಿಗ ಪಡೆಯ ಪ್ರಾಮಾಣಿಕ ಕಾರ್ಯನಿರ್ವಹಣೆ, ಕಾಂಗ್ರೆಸ್ ಪರವಾದ ಅಲೆ ಮತ್ತೀತರ ಅಂಶಗಳು ಅವರ ಮತಗಳಿಕೆಗೆ ಸಹಕಾರಿಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.