
ಶಿವಮೊಗ್ಗ : ಹಣಕ್ಕಾಗಿ ಯುವತಿಯ ಅಪಹರಣ – ನಿಗೂಢವಾದ ಪ್ರಕರಣ!
ಶಿವಮೊಗ್ಗ, ಮೇ 15: ಹಣಕ್ಕಾಗಿ ಯುವತಿಯೋರ್ವಳನ್ನು ದುಷ್ಕರ್ಮಿಗಳು ಅಪಹರಿಸಿರುವ ಘಟನೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆ ಕುರಿತಂತೆ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ರಂಜಿತಾ ಬಿ (22) ಕಿಡ್ನ್ಯಾಪ್ ಆದ ಯುವತಿ ಎಂದು ಗುರುತಿಸಲಾಗಿದೆ. ಮೇ 14 ರಂದು ಸಂಜೆ 5 ಗಂಟೆ ರಾತ್ರಿ 9.30 ರ ನಡುವೆ ಯುವತಿಯ ಕಿಡ್ನ್ಯಾಪ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣಕ್ಕೊಳಗಾದ ಯುವತಿಯು ಸುಮಾರು 5.1 ಅಡಿ ಎತ್ತರ, ಬಿಳಿ ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಕಾಣೆಯಾದ ವೇಳೆ ನೇವಿ ಬ್ಲೂ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಸಾರ್ವಜನಿಕರಿಗೆ ಯುವತಿಯ ಸುಳಿವು ಲಭ್ಯವಾದಲ್ಲಿ ಜಯನಗರ ಪೊಲೀಸ್ ಠಾಣೆ ಅಥವಾ ಜಿಲ್ಲಾ ನಿಸ್ತಂತು ಕೇಂದ್ರ ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ : 08182-261400/261413/261416 ನ್ನು ಸಂಪರ್ಕಿಸಬಹುದೆಂದು ಜಯನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ನಿಗೂಢ – ಅನುಮಾನ?: ಸದ್ಯ ಅಪಹರಣಕ್ಕೊಳಗಾದ ಯುವತಿಯು ಹೊರ ಜಿಲ್ಲೆಯವರಾಗಿದ್ದು, ನಗರದಲ್ಲಿ ನರ್ಸಿಂಗ್ ಕೋರ್ಸ್ ವೊಂದರ ಅಭ್ಯಾಸ ನಡೆಸುತ್ತಿದ್ದಾರೆ. ಸವಳಂಗ ರಸ್ತೆಯ ಮಹಿಳಾ ಪಿಜಿಯೊಂದರಲ್ಲಿ ತಂಗಿದ್ದಾರೆ ಎಂದು ತಿಳಿದುಬಂದಿದೆ.
ಯುವತಿ ಅಪಹರಣಕ್ಕೊಳಗಾದ ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಪ್ರತ್ಯೇಕ ತಂಡಗಳಾಗಿ ತನಿಖೆ ನಡೆಸಲಾರಂಭಿಸಿದ್ದಾರೆ. ವಿವಿಧೆಡೆಯ ಸಿಸಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲಿಸಿ ವಿವರ ಕಲೆ ಹಾಕಲಾರಂಭಿಸಿದ್ದಾರೆ ಎನ್ನಲಾಗಿದೆ.
ಅಪಹರಣ ಪ್ರಕರಣದ ಸುತ್ತ ಅನುಮಾನದ ಹುತ್ತ ನಿರ್ಮಾಣವಾಗಿದೆ. ಅಪಹರಣವಾಗಿದ್ದು ನಿಜವೇ? ಕಾರಣವೇನು? ಎಂಬುವುದು ಪೊಲೀಸರ ತನಿಖೆಯ ನಂತರಷ್ಟೆ ಹೆಚ್ಚಿನ ವಿವರಗಳು ಹೊರ ಬರಬೇಕಾಗಿದೆ.