
ಕಾಂಗ್ರೆಸ್ ಅಧಿಕಾರಕ್ಕೆ – ವಿದ್ಯುತ್ ಬಿಲ್ ಪಾವತಿ : ನಾಗರೀಕರ ಪ್ರಶ್ನೆಗಳ ಸುರಿಮಳೆಗೆ ಮೆಸ್ಕಾಂ ಸಿಬ್ಬಂದಿಗಳು ಸುಸ್ತೋ ಸುಸ್ತು!
ವರದಿ : ಬಿ.ರೇಣುಕೇಶ್
ಶಿವಮೊಗ್ಗ, ಮೇ 19: ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡುವುದಾಗಿ, ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ವೇಳೆ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಇದೀಗ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಾರಂಭಿಸಿದೆ.
ಈ ನಡುವೆ ರಾಜ್ಯದ ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ವಿವಿಧೆಡೆ ವಿದ್ಯುತ್ ಬಿಲ್ ಪಾವತಿಗೆ ಕೆಲ ನಾಗರೀಕರು ನಿರಾಕರಿಸುತ್ತಿದ್ದಾರೆ. ಕೆಲವೆಡೆ ಮೀಟರ್ ರೀಡರ್ ಗಳನ್ನು ಹಳ್ಳಿಗಳ ಒಳಗೆ ಗ್ರಾಮಸ್ಥರು ಬಿಟ್ಟುಕೊಳ್ಳುತ್ತಿಲ್ಲ ಎಂಬ ವರದಿಗಳು ಬರುತ್ತಿವೆ.
ಇದೀಗ ಶಿವಮೊಗ್ಗ ಜಿಲ್ಲೆಯ ಕೆಲ ಗ್ರಾಮಗಳ ಗ್ರಾಮಸ್ಥರು ಕೂಡ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ವಿದ್ಯುತ್ ಬಿಲ್ ಏಕೆ ಕೊಡಬೇಕು?’ ಎಂದು ಮೆಸ್ಕಾಂ ಸಿಬ್ಬಂದಿಗಳನ್ನು ಪ್ರಶ್ನಿಸುತ್ತಿರುವ ಮಾಹಿತಿಗಳು ಕೇಳಿಬರಲಾರಂಭಿಸಿದೆ.
‘200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡುವುದಾಗಿ ಕಾಂಗ್ರೆಸ್ ಪಕ್ಷ ಹೇಳಿದೆ. ಇದೀಗ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬಂದಿದೆ. ನಾವು 200 ಯೂನಿಟ್ ವರೆಗೆ ವಿದ್ಯುತ್ ಬಳಕೆ ಮಾಡಿಲ್ಲ. ನಾವ್ಯಾಕೆ ಹಣ ಕೊಡಬೇಕು ಎಂದು ಕೆಲ ಗ್ರಾಮಸ್ಥರು ಪ್ರಶ್ನಿಸುತ್ತಾರೆ. ದಿನದಿಂದ ದಿನಕ್ಕೆ ಈ ರೀತಿ ಪ್ರಶ್ನಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಉಚಿತ ವಿದ್ಯುತ್ ಪೂರೈಕೆ ಕುರಿತಂತೆ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಧಿಕೃತ ಆದೇಶ ಹೊರಡಿಸಬೇಕು. ಅಲ್ಲಿಯವರೆಗೂ ನೀವು ಬಳಕೆ ಮಾಡಿದ ವಿದ್ಯುತ್ ಶುಲ್ಕ ಪಾವತಿಸಬೇಕು ಎಂದು ಪ್ರಶ್ನಿಸುವವರಿಗೆ ತಿಳಿ ಹೇಳಲಾಗುತ್ತಿದೆ. ಕೆಲ ನಾಗರೀಕರಿಗೆ ತಿಳಿ ಹೇಳುವಲ್ಲಿ ಸಾಕಾಗಿ ಹೋಗುತ್ತದೆ’ ಎಂದು ಹೆಸರೇಳಲಿಚ್ಚಿಸದ ಶಿವಮೊಗ್ಗ ತಾಲೂಕಿನ ಮೆಸ್ಕಾಂ ಸಿಬ್ಬಂದಿಯೋರ್ವರು ಹೇಳುತ್ತಾರೆ.
ಮತ್ತೆ ಕೆಲ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಲು ಮೀನಮೇಷ ಎಣಿಸುತ್ತಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬರಲಿ. ಏನು ತೀರ್ಮಾನ ಕೈಗೊಳ್ಳುತ್ತದೆಯೋ ಎಂಬುವುದನ್ನು ಕಾದು ನೋಡಲು ಮುಂದಾಗಿರುವ ಮಾಹಿತಿಗಳು ಕೇಳಿಬರುತ್ತವೆ. ಉಳಿದಂತೆ ವಸ್ತುಸ್ಥಿತಿಯ ಮಾಹಿತಿಯಿರುವ ಗ್ರಾಹಕರು ತಾವು ಬಳಸಿದ ವಿದ್ಯುತ್ ಶುಲ್ಕವನ್ನು ಎಂದಿನಂತೆ ಪಾವತಿಸುತ್ತಿದ್ದಾರೆ ಎಂದು ಮೆಸ್ಕಾಂ ಸಿಬ್ಬಂದಿಯೋರ್ವರು ತಿಳಿಸುತ್ತಾರೆ.
ಮೊದಲ ಸಚಿವ ಸಂಪುಟ ಸಭೆಯಲ್ಲಿ ‘ಗ್ಯಾರೆಂಟಿ’ಗಳ ಘೋಷಣೆ..?!
*** ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ‘ಗ್ಯಾರೆಂಟಿ’ಗಳಲ್ಲಿ ಕೆಲವನ್ನು, ಮೊದಲ ಸಚಿವ ಸಂಪುಟ ಸಭೆಯಲ್ಲಿ ಈಡೇರಿಸುವ ಸಾಧ್ಯತೆಗಳು ಗೋಚರವಾಗುತ್ತಿವೆ. ಸದ್ಯ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಪೂರೈಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಮೊದಲ ಸಂಪುಟ ಸಭೆಯಲ್ಲಿ ಈ ಗ್ಯಾರೆಂಟಿ ಘೋಷಣೆಗೆ ಸರ್ಕಾರ ಕ್ರಮಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿವೆ. ಈ ಸಂಬಂಧ ಮುಖ್ಯಮಂತ್ರಿ ಗದ್ದುಗೆಯೇರುತ್ತಿರುವ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗುತ್ತಿರುವ ಡಿ.ಕೆ.ಶಿವಕುಮಾರ್ ಅವರು ಯಾವ ಕ್ರಮಕೈಗೊಳ್ಳುತ್ತಾರೆ ಎಂಬ ಕುತೂಹಲ ಸಾರ್ವಜನಿಕ ವಲಯದಲ್ಲಿದೆ.