
ಮುಂದಿನ ವಾರದಿಂದ ಆರಂಭವಾಗಲಿರುವ ಶಿವಮೊಗ್ಗ – ಶಿಕಾರಿಪುರ ರೈಲ್ವೆ ಮಾರ್ಗದ ಕಾಮಗಾರಿ 2025 ಕ್ಕೆ ಪೂರ್ಣ
ಹುಬ್ಬಳ್ಳಿ/ಶಿವಮೊಗ್ಗ, ಮೇ 23: ‘ಕೇಂದ್ರ – ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ, ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗದ ಮೊದಲ ಹಂತದ ಕಾಮಗಾರಿ, ಮುಂದಿನ ವಾರದಿಂದ ಆರಂಭಗೊಳ್ಳಲಿದೆ’ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ, ಹುಬ್ಬಳ್ಳಿಯಲ್ಲಿ ಮೇ 22 ರಂದು ನೈರುತ್ಯ ರೈಲ್ವೆ ವಲಯದ ಹಿರಿಯ ಅಧಿಕಾರಿಗಳ ಜೊತೆ ಸಂಸದರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಚರ್ಚಿಸಲಾದ ವಿಷಯದ ಕುರಿತಂತೆ ಅವರು ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
2025 ಕ್ಕೆ ಪೂರ್ಣ: ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಯೋಜನೆಯನ್ನು 1200 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಶಿವಮೊಗ್ಗ – ಶಿಕಾರಿಪುರ ನಡುವಿನ 46 ಕಿ.ಮೀ. ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಭೂ ಸ್ವಾದೀನ ಪ್ರಕ್ರಿಯೆ, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.
ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಮಗಾರಿ ಅನುಷ್ಠಾನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಮುಂದಿನ ವಾರದಿಂದ ಕಾಮಗಾರಿ ಆರಂಭವಾಗಲಿದೆ. 2025 ರ ವೇಳೆಗೆ ಮೊದಲ ಹಂತದ ಕೆಲಸ ಪೂರ್ಣಗೊಳ್ಳಲಿದೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.
ಅನುದಾನ: ಅಮೃತ್ ಭಾರತ್ ಯೋಜನೆಯಡಿ ಶಿವಮೊಗ್ಗ ಮುಖ್ಯ ರೈಲ್ವೆ ನಿಲ್ದಾಣಕ್ಕೆ 19.28 ಕೋಟಿ ರೂ., ತಾಳಗುಪ್ಪಕ್ಕೆ 22.5 ಕೋ.ರೂ., ಸಾಗರ ರೈಲ್ವೆ ನಿಲ್ದಾಣಕ್ಕೆ 21.10 ಕೋ.ರೂ. ಹಾಗೂ ಶಿವಮೊಗ್ಗದ ರೈಲ್ವೆ ಗೂಡ್ಸ್ ಯಾರ್ಡ್’ಗೆ 33 ಕೋಟಿ ರೂ. ಮಂಜೂರಾಗಿದೆ. ಈ ಅನುದಾನದಡಿ ನಿಲ್ದಾಣಗಳ ಸರ್ವಾಂಗೀಣ ಅಭಿವೃದ್ದಿ ಹಾಗೂ ಆಧುನೀಕರಣ ಕಾರ್ಯಕೈಗೊಳ್ಳಲಾಗುತ್ತದೆ.
ಕೋಚಿಂಗ್ ಡಿಪೋ: ಶಿವಮೊಗ್ಗದ ಕೋಟೆಗಂಗೂರು ಬಳಿ ಕೋಚಿಂಗ್ ಡಿಪೋ ಕಾಮಗಾರಿ ಪ್ರಗತಿಯಲ್ಲಿದೆ. 2024 ರ ಮೇ ಅಥವಾ ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಶಿವಮೊಗ್ಗದ ಸವಳಂಗ ರಸ್ತೆ, ಕಾಶೀಪುರ ರಸ್ತೆ ಹಾಗೂ ಭದ್ರಾವತಿ ಕಡದಕಟ್ಟೆ ಬಳಿ ನಡೆಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸಂಸದರು ಹೇಳಿದ್ದಾರೆ.
ಸಭೆಯಲ್ಲಿ ರೈಲ್ವೆ ಅಧಿಕಾರಿಗಳಾದ ಹೆಚ್.ಎಂ.ದಿನೇಶ್, ಶ್ರೀಧರ್ ಮೂರ್ತಿ, ಸಂತೋಷ್ ಹೆಗ್ಡೆ, ಆಶೀಷ್ ಪಾಂಡೆ, ಆನಂದ ಭಾರತಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ತಾಳಗುಪ್ಪ – ಹುಬ್ಬಳ್ಳಿ ಮಾರ್ಗದ ಬಗ್ಗೆ ಚರ್ಚೆ
*** ತಾಳಗುಪ್ಪ-ತಡಸ-ಹೊನ್ನಾವರ-ಶಿರಸಿ-ಹುಬ್ಬಳ್ಳಿ ನಡುವೆ ನೂತನ ರೈಲ್ವೆ ಮಾರ್ಗ ಯೋಜನೆಯ ಸರ್ವೇ ಕಾಮಗಾರಿ ಪೂರ್ಣಗೊಂಡಿದೆ. ನೈರುತ್ಯ ರೈಲ್ವೆಯು ಸರ್ವೇ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಯೋಜನೆ ಮಂಜೂರು ಮಾಡಲು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಕೋರಲಾಗಿದೆ. ನೈರುತ್ಯ ರೈಲ್ವೆಯು ಈ ನಿಟ್ಟಿನಲ್ಲಿ ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ.
ಬೆಂಗಳೂರು – ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಬೇಡಿಕೆ
*** ಬೆಂಗಳೂರು – ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಕ್ರಮಕೈಗೊಳ್ಳುವಂತೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಈ ಸಂಬಂಧ ರೈಲ್ವೆ ಮಂಡಳಿಯ ಅನುಮೋದನೆ ಪಡೆಯುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಅರಸಾಳು, ಹಾರನಹಳ್ಳಿಗಳಲ್ಲಿ ಮೈಸೂರು-ತಾಳಗುಪ್ಪ ಎಕ್ಸ್’ಪ್ರೆಸ್ ರೈಲು ನಿಲುಗಡೆ ಮಾಡುವಂತೆ, ಶಿವಮೊಗ್ಗ-ಬೆಂಗಳೂರು, ಶಿವಮೊಗ್ಗ-ಮೈಸೂರು ನಡುವೆ ಸಂಚರಿಸುತ್ತಿರುವ ರೈಲುಗಳ ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಂಸದರು ಮಾಹಿತಿ ನೀಡಿದ್ದಾರೆ.
One thought on “ಮುಂದಿನ ವಾರದಿಂದ ಆರಂಭವಾಗಲಿರುವ ಶಿವಮೊಗ್ಗ – ಶಿಕಾರಿಪುರ ರೈಲ್ವೆ ಮಾರ್ಗದ ಕಾಮಗಾರಿ 2025 ಕ್ಕೆ ಪೂರ್ಣ”
Comments are closed.
V needs high speed trains to bengaluru,since,commuters traveling 2 blr is more from smg n surrounding districts