
ಚಿನ್ನಾಭರಣ ಕಳವು ಮಾಡಿದ್ದ ಸೊಸೆ ಸೇರಿದಂತೆ ಇಬ್ಬರು ಅರೆಸ್ಟ್..!
*ಸಿನಿಮೀಯ ಶೈಲಿಯ ಕಳವು ಪ್ರಕರಣ ಬಯಲಿಗೆಳೆದ ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು
ಶಿವಮೊಗ್ಗ, ಮೇ 30: ಮನೆಯೊಂದರಲ್ಲಿ ನಡೆದಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಪ್ರಕರಣವೊಂದನ್ನು, ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳವು ಆರೋಪದ ಮೇರೆಗೆ ಮನೆಯ ಸೊಸೆ ಹಾಗೂ ಯುವಕನೋರ್ವನನ್ನು ಬಂಧಿಸಿದ್ದಾರೆ!
ಹೇಮಾವತಿ ಆರ್ (23) ಹಾಗೂ ಸತೀಶ್ (22) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರಿಂದ 4.30 ಲಕ್ಷ ರೂ. ಮೌಲ್ಯದ 90 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 2050 ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಮಂಜುನಾಥ್ ಬಿ ರವರ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಗಳಾದ ರಾಜುರೆಡ್ಡಿ ಬೆನ್ನೂರು, ಕುಮಾರ್ ಕುರಗುಂದ,
ಎಎಸ್ಐ ಮನೋಹರ್, ಹೆಡ್ ಕಾನ್ಸ್ಟೇಬಲ್ ಗಳಾದ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ಕಾನ್ಸ್ಟೇಬಲ್ ಗಳಾದ ನಾಗಪ್ಪ, ಹರೀಶ್ ನಾಯ್ಕ್, ಲಂಕೇಶ್, ಕಾಂತರಾಜ್, ಅರಿಹಂತ್, ಹರೀಶ್, ಸಂತೋಷ್, ರಮೇಶ್, ಶಿವಕುಮಾರ್, ರಾಘವೇಂದ್ರ, ಜಯಪ್ಪರವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನಲೆ: 13-5-2023 ರಂದು ಗ್ರಾಮವೊಂದರ ಮಹಿಳೆಯೋರ್ವರು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿ, ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳ್ಳರು ಅಪಹರಿಸಿದ್ದಾರೆ. ಹುಡುಕಿಕೊಡುವಂತೆ ಕೋರಿಕೊಂಡಿದ್ದರು.
ನಿಗೂಢವಾಗಿದ್ದ ಪ್ರಕರಣದ ತನಿಖೆಗೆ, ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ತನಿಖೆ ವೇಳೆ ವೃತ್ತಿಪರ ಚೋರರ ಕೃತ್ಯವಲ್ಲ, ಪರಿಚಯಸ್ಥರೇ ಭಾಗಿಯಾಗಿರುವ ಕೃತ್ಯವೆಂಬುವುದು ಪೊಲೀಸರಿಗೆ ಮನವರಿಕೆಯಾಗಿದೆ.
ತನಿಖೆ ವೇಳೆ ಸದರಿ ಮನೆಯ ಸೊಸೆಯೇ, ಆಕೆಗೆ ಪರಿಚಯವಿದ್ದ ಅದೇ ಗ್ರಾಮದ ಯುವಕನ ಜೊತೆ ಸೇರಿ ಚಿನ್ನಾಭರಣ ಕಳವು ಮಾಡಿದ್ದು ಪೊಲೀಸರಿಗೆ ಗೊತ್ತಾಗಿದೆ. ತದನಂತರ ಇಬ್ಬರನ್ನು ಬಂಧಿಸಿ, ಅವರು ಕಳವು ಮಾಡಿದ್ದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.