ಸಂಚಾರಕ್ಕೆ ಮುಕ್ತವಾಗದ ಫ್ಲೈ ಓವರ್ : ಟ್ರಾಫಿಕ್ ಕಿರಿಕಿರಿಗೆ ವಾಹನ ಸವಾರರು ತತ್ತರ..!

ಸಂಚಾರಕ್ಕೆ ಮುಕ್ತವಾಗದ ಫ್ಲೈ ಓವರ್ : ಟ್ರಾಫಿಕ್ ಕಿರಿಕಿರಿಗೆ ವಾಹನ ಸವಾರರು ತತ್ತರ..!

ಬಿ. ರೇಣುಕೇಶ್

ಶಿವಮೊಗ್ಗ, ಮೇ 31: ಶಿವಮೊಗ್ಗ ನಗರದ ಹೊಳೆ ಬಸ್ ನಿಲ್ದಾಣದ ರೈಲ್ವೆ ಗೇಟ್ ಬಳಿ ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಭಾರೀ ಪ್ರಮಾಣದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ವಾಹನ ಸವಾರರು ತೀವ್ರ ತೊಂದರೆ ಪಡುವಂತಾಗಿದೆ.  

ರೈಲುಗಳ ಸಂಚಾರದ ವೇಳೆ, ಗೇಟ್ ಬಂದ್ ಮಾಡಿದ ಸಮಯದಲ್ಲಿ ಟ್ರಾಫಿಕ್ ಕಿರಿಕಿರಿ ತಲೆದೋರುತ್ತಿದೆ. ಎರಡು ಕಡೆಯಿಂದ ನೂರಾರು ವಾಹನಗಳು ಏಕಕಾಲಕ್ಕೆ ನುಗ್ಗುತ್ತವೆ. ಜೊತೆಗೆ ಕೆಲ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುತ್ತಾರೆ. ಈ ಎಲ್ಲ ಕಾರಣಗಳಿಂದ ಟ್ರಾಫಿಕ್ ಜಾಮ್ ಏರ್ಪಡುತ್ತಿದೆ.

ಸ್ಥಳದಲ್ಲಿ ಟ್ರಾಫಿಕ್ ಪೊಲೀಸರಿದ್ದರೂ ಸುಗಮ ವಾಹನ ಸಂಚಾರ ದುಸ್ತರವಾಗುತ್ತಿದೆ. ಇದರಿಂದ ತುರ್ತು ಕೆಲಸಕಾರ್ಯಗಳಿಗೆ ತೆರಳಬೇಕಾದ ವೇಳೆ, ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಕೆಲವೊಮ್ಮೆ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳ ದಟ್ಟಣೆಯಲ್ಲಿ ಸಿಲುಕಿ ಬೀಳುವಂತಾಗುತ್ತದೆ ಎಂದು ಕೆಲ ವಾಹನ ಸವಾರರು ದೂರುತ್ತಾರೆ.

ಸದರಿ ಸ್ಥಳದಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ, ಟ್ರಾಫಿಕ್ ಜಾಮ್ ಸರ್ವೇಸಾಮಾನ್ಯ ಎಂಬಂತಾಗಿದೆ. ಸಾಕಷ್ಟು ತೊಂದರೆಯಾಗುತ್ತಿದೆ. ತ್ವರಿತಗತಿಯಲ್ಲಿ ಫ್ಲೈ ಓವರ್ ಕಾಮಗಾರಿ ಪೂರ್ಣಗೊಳಿಸಿ, ಸುಗಮ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು. ರೈಲುಗಳ ಸಂಚಾರದ ವೇಳೆ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಸಂಚಾರಿ ಪೊಲೀಸರು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಆಗ್ರಹಿಸುತ್ತಾರೆ.

ಸವಳಂಗ ರಸ್ತೆ, ಕಾಶೀಪುರ ರೈಲ್ವೆ ಗೇಟ್ ಬಳಿಯು ಸಂಚಾರ ದುಸ್ತರ!

*** ಶಿವಮೊಗ್ಗದ ಕಾಶೀಪುರ ಹಾಗೂ ಸವಳಂಗ ರಸ್ತೆ ರೈಲ್ವೆ ಗೇಟ್ ಬಳಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಈ ಎರಡು ರೈಲ್ವೆ ಗೇಟ್ ಬಳಿಯೂ ವಾಹನಗಳ ಸಂಚಾರ ದುಸ್ತರವಾಗಿದೆ. ರೈಲುಗಳ ಸಂಚಾರದ ವೇಳೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಕಿರಿದಾದ ರಸ್ತೆಗಳಲ್ಲಿ, ಸುತ್ತುಬಳಸಿ ವಾಹನಗಳು ಸಂಚರಿಸಬೇಕಾದ ದುಃಸ್ಥಿತಿಯಿದೆ.

ಸಂಸದರ ಸಭೆಯಲ್ಲಿ ರೈಲ್ವೆ ಅಧಿಕಾರಿಗಳು ಹೇಳಿದ್ದೇನು?

*** ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ, ಶಿವಮೊಗ್ಗ ಜಿಲ್ಲೆಯ ರೈಲ್ವೆ ಯೋಜನೆಗಳ ಕುರಿತಂತೆ ನೈರುತ್ಯ ರೈಲ್ವೆ ವಲಯದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದರು. ಈ ವೇಳೆ ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ನಿರ್ಮಾಣ ಕಾರ್ಯದ ಪ್ರಗತಿಯ ಕುರಿತಂತೆ ಸಂಸದರು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು.

ಭದ್ರಾವತಿ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಸ್ತುತ ವರ್ಷದ ಡಿಸೆಂಬರ್, ಸವಳಂಗ ರಸ್ತೆಯ ಕಾಮಗಾರಿ ಅಕ್ಟೋಬರ್ ಹಾಗೂ ಕಾಶೀಪುರ ಬಳಿಯ ಮೇಲ್ಸೇತುವೆ ಕಾಮಗಾರಿಯನ್ನು ಜೂನ್ ಒಳಗೆ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಕಡೂರು ರೈಲ್ವೆ ನಿಲ್ದಾಣದಲ್ಲಿಯೇ ಗಂಟೆಗಟ್ಟಲೆ ನಿಂತುಕೊಂಡ ಬೆಂಗಳೂರು-ಶಿವಮೊಗ್ಗ ಜನ ಶತಾಬ್ದಿ ರೈಲು! ಶಿವಮೊಗ್ಗ, ಮೇ 30: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ಜನ ಶತಾಬ್ದಿ ರೈಲು, ಸರಿಸುಮಾರು ಎರಡು ಗಂಟೆಗಳಿಗೂ ಅಧಿಕ ಸಮಯ ಕಡೂರು ರೈಲ್ವೆ ನಿಲ್ದಾಣದಲ್ಲಿಯೇ ನಿಲುಗಡೆ ಮಾಡದ್ದ ಘಟನೆ, ಮಂಗಳವಾರ ರಾತ್ರಿ ನಡೆದಿದೆ. ಆದರೆ ರೈಲು ನಿಲುಗಡೆ ಮಾಡಿದ್ದು ಏಕೆ? ಎಂಬ ವಿಷಯದ ಕುರಿತಂತೆ, ಸಮರ್ಪಕ ಮಾಹಿತಿಯಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿತ್ತು! 'ಕಡೂರು ರೈಲ್ವೆ ನಿಲ್ದಾಣಕ್ಕೆ ಸಂಜೆ 8.30 ರ ಸುಮಾರಿಗೆ ಆಗಮಿಸಿ ನಿಲುಗಡೆಯಾದ ರೈಲು, ರಾತ್ರಿ 10.35 ರ ವೇಳೆಗೆ ಚಾಲನೆಗೊಂಡಿತು. ಗಂಟೆಗಟ್ಟೆಲೆ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲು ಕಾರಣವೇನು ಎಂಬ ವಿಷಯದ ಕುರಿತಂತೆ, ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ಕನಿಷ್ಠ ಮಾಹಿತಿ ನೀಡುವ ಕಾರ್ಯವೂ ಆಗಲಿಲ್ಲ. ಪ್ರಕಟಣೆಯೂ ಹೊರಡಿಸಲಿಲ್ಲ' ಎಂದು ರೈಲಿನಲ್ಲಿ ಪ್ರಯಾಣಿಸುತ್ತಿರುವ ಶಿವಮೊಗ್ಗದ ಪ್ರಯಾಣಿಕರೋರ್ವರು ‘ಉದಯ ಸಾಕ್ಷಿ’ ಗೆ ತಿಳಿಸಿದ್ದಾರೆ. Previous post ಕಡೂರು ರೈಲ್ವೆ ನಿಲ್ದಾಣದಲ್ಲಿಯೇ ಗಂಟೆಗಟ್ಟಲೆ ಸ್ಥಗಿತಗೊಂಡ ಬೆಂಗಳೂರು-ಶಿವಮೊಗ್ಗ ಜನ ಶತಾಬ್ದಿ ರೈಲು!
ಶಿವಮೊಗ್ಗ, ಜೂ. 1: ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಗೆ ಗಸ್ತು ನಿರ್ವಹಣೆಗೆ ನೆರವಾಗಲು ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು, ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು, ಪ್ರತಿ ಗ್ರಾಮಗಳಲ್ಲಿ ಆಯ್ದ ಯುವಕರನ್ನೊಳಗೊಂಡ ‘ಯುವ ಪಡೆ’ ರಚನೆಗೆ ಮುಂದಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ರವರೇ ಈ ವಿನೂತನ ‘ಯುವ ಪಡೆ’ ರಚನೆಯ ಸೂತ್ರಧಾರರಾಗಿದ್ದಾರೆ. ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನ ಸ್ನೇಹಿಯಾಗಿಸಲು ಹಾಗೂ ಕಾನೂನು-ಸುವ್ಯವಸ್ಥೆಯ ಪರಿಣಾಮಕಾರಿ ನಿರ್ವಹಣೆಗೆಗೆ ಹೊಸ ಕ್ರಮಕ್ಕೆ ಮುಂದಾಗಿದ್ದಾರೆ. ಎಸ್ಪಿ ಹೇಳಿದ್ದೇನು?: ‘ಹಳ್ಳಿಗಳಲ್ಲಿ 20 ರಿಂದ 30 ಜನರನ್ನೊಳಗೊಂಡ ಯುವಕರ ಪಡೆ ರಚಿಸಲಾಗುವುದು. ಈ ಪಡೆಯು ಗಸ್ತು ನಿರ್ವಹಣೆ ಹಾಗೂ ಗ್ರಾಮಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಿದೆ’ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ. Next post ಗಸ್ತು – ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಹಳ್ಳಿಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ ಯುವ ಪಡೆ..!