
ಬಾರ್ ಕ್ಯಾಷಿಯರ್ ಕೊಲೆ ಮಾಡಿದ ಮದ್ಯ ಸೇವನೆಗೆ ಆಗಮಿಸಿದ್ದ ಯುವಕರು!
*ಪೊಲೀಸರ ಸಮ್ಮುಖದಲ್ಲಿಯೇ ನಡೆದು ಹೋದ ಆಘಾತಕಾರಿ ಘಟನೆ..!!
ಶಿವಮೊಗ್ಗ, ಜೂ. 5: ಮದ್ಯ ಸೇವನೆಗೆ ಆಗಮಿಸಿದ್ದ ಯುವಕರ ತಂಡವೊಂದು, ಪೊಲೀಸರ ಸಮ್ಮುಖದಲ್ಲಿಯೇ ಬಾರ್ ವೊಂದರ ಕ್ಯಾಷಿಯರ್ ಗೆ ಚೂರಿಯಿಂದ ಇರಿದು ಕೊಲೆ ಮಾಡಿದ ಆಘಾತಕಾರಿ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಸಚಿನ್ (27) ಕೊಲೆಗೀಡಾದ ಯುವಕ ಎಂದು ಗುರುತಿಸಲಾಗಿದೆ. ಆಯನೂರು ತಾಂಡಾದ ನಿವಾಸಿಗಳಾದ ನಿರಂಜನ, ಸತೀಶ್ ಹಾಗೂ ಅಶೋಕ ನಾಯ್ಕ್ ಆರೋಪಿಗಳೆಂದು ಗುರುತಿಸಲಾಗಿದೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆ ಹಿನ್ನೆಲೆ: ನವರತ್ನ ಬಾರ್ ನಲ್ಲಿ ಈ ಘಟನೆ ನಡೆದಿದೆ. ಭಾನುವಾರ ರಾತ್ರಿ ಮೂವರು ಆರೋಪಿಗಳು ಮದ್ಯ ಸೇವನೆಗೆ ಆಗಮಿಸಿದ್ದಾರೆ. ರಾತ್ರಿ 11 ಗಂಟೆಯ ನಂತರವೂ ಮದ್ಯ ಸೇವಿಸುತ್ತ ಆರೋಪಿಗಳು ಕುಳಿತ್ತಿದ್ದಾರೆ.
ಸಮಯವಾಗಿದೆ ಬಾರ್ ನಿಂದ ಹೊರಹೋಗಿ ಎಂಬ ಸಿಬ್ಬಂದಿಗಳ ಮಾತಿಗೆ ಸೊಪ್ಪು ಹಾಕಿಲ್ಲ. ಸಿಬ್ಬಂದಿಗಳ ಜೊತೆಯೇ ಗಲಾಟೆ ಮಾಡಿದ್ದಾರೆ. ಈ ಕಾರಣದಿಂದ ಬಾರ್ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
112 ವಾಹನದ ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ಆರೋಪಿಗಳು, ಬಿಯರ್ ಬಾಟಲಿ ಒಡೆದು ಬಾರ್ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಗಲಾಟೆಯ ನಡುವೆಯೇ, ಓರ್ವ ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ಕ್ಯಾಷಿಯರ್ ಸಚಿನ್ ಗೆ ಇರಿದಿದ್ದಾನೆ. ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಬಾರ್ ಸಿಬ್ಬಂದಿಗಳು ಸಚಿನ್ ನನ್ನು ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆ ಸಚಿನ್ ಅಸುನೀಗಿದ್ದಾನೆ ಎಂದು ಹೇಳಲಾಗಿದೆ.
ಆಘಾತಕಾರಿ!: ಪೊಲೀಸರ ಸಮ್ಮುಖದಲ್ಲಿಯೇ ಆರೋಪಿಗಳು ಬಾರ್ ಕ್ಯಾಷಿಯರ್ ಮೇಲೆ ಹಲ್ಲೆ ಮಾಡಿ, ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.
ಆರೋಪಿಗಳು ಪರಾರಿಯಾಗಿದ್ದು ಹೇಗೆ? ಕೃತ್ಯ ತಡೆಯಲು ಪೊಲೀಸರಿಗೆ ಸಾಧ್ಯವಾಗದಿದ್ದುದು ಏಕೆ? ಎಂಬಿತ್ಯಾದಿ ವಿಷಯಗಳ ಕುರಿತಂತೆ ಇನ್ನಷ್ಟೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ.