
ಬಾಡಿಗೆ ಮನೆಯವರಿಗೂ ಉಚಿತ ವಿದ್ಯುತ್ ಸೌಲಭ್ಯ : ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ
ಬೆಂಗಳೂರು, ಜೂ. 6: ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರಿಗೂ ಉಚಿತ ವಿದ್ಯುತ್ ಸೌಲಭ್ಯ ದೊರಕಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.
ಗೃಹಜ್ಯೋತಿ ಯೋಜನೆಯ ಮಾರ್ಗಸೂಚಿ ಪ್ರಕಟವಾದ ಬಳಿಕ, ಬಾಡಿಗೆ ಮನೆಯಲ್ಲಿರುವವರಿಗೆ ಉಚಿತ ವಿದ್ಯುತ್ ಸೌಲಭ್ಯ ಲಭ್ಯವಾಗುವುದಿಲ್ಲ ಎಂಬ ಗೊಂದಲಗಳು ಮನೆ ಮಾಡಿದ್ದವು. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆಡೆ ಮಾಡಿಕೊಟ್ಟಿತ್ತು.
ಮಂಗಳವಾರ ವಿಧಾನಸೌಧದಲ್ಲಿ ಡಿ ದೇವರಾಜು ಅರಸು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮುಖ್ಯಮಂತ್ರಿಗಳು ಸುದ್ದಿಗಾರರೊಂದಿಗೆ ಮಾತನಾಡಿದರು.

200 ಯೂನಿಟ್ ಉಚಿತ ವಿದ್ಯುತ್ ಯೋಜನೆ ಬಾಡಿಗೆದಾರರಿಗೂ ಅನ್ವಯವಾಗಲಿದೆ. ಆದರೆ ವಾಣಿಜ್ಯವಾಗಿ ಬಳಕೆ ಮಾಡುವವರಿಗೆ ಉಚಿತ ವಿದ್ಯುತ್ ಅನ್ವಯ ಆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ವಿರುದ್ದ ಟೀಕೆ: ವಿದ್ಯುತ್ ದರ ಏರಿಕೆ ವಿರುದ್ದ ಬಿಜೆಪಿ ಪಕ್ಷ ನಡೆಸುತ್ತಿರುವ ಪ್ರತಿಭಟನೆಗೆ ಸಿಎಂ ಕಿಡಿಕಾರಿದ್ದಾರೆ. ಬಿಜೆಪಿ ನಾಯಕರಿಗೆ ಯಾವುದೇ ವಿಷಯವಿಲ್ಲವಾಗಿದೆ. ಅವರು ಅಧಿಕಾರದಲ್ಲಿದ್ದಾಗ ಹೇಳಿದ ಯಾವುದೇ ಕೆಲಸ ಮಾಡಿಲಿಲ್ಲ. ಭ್ರಷ್ಟಾಚಾರ ನಡೆಸಿದರು. ಈಗ ನಮಗೆ ಪಾಠ ಹೇಳಲು ಬರುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ನಾವು ಅಧಿಕಾರಕ್ಕೆ ಬಂದ ಕೇವಲ 15 ದಿವಸದಲ್ಲಿಯೇ ರಾಜ್ಯದ ನಾಗರೀಕರಿಗೆ ನೀಡಿದ್ದ ಭರವಸೆಯಂತೆ ಎಲ್ಲ 5 ಗ್ಯಾರಂಟಿಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದವೆ ಎಂದು ಹೇಳಿದ್ದಾರೆ.
ಗೊಂದಲ ಮೂಡಿಸಿದ್ದ ಗೃಹ ಜ್ಯೋತಿ ಯೋಜನೆ ಮಾರ್ಗಸೂಚಿ..!
ಪ್ರತಿ ಮನೆಗೆ ಗರಿಷ್ಠ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ’ ಯೋಜನೆಗೆ ಸಂಬಂಧಿಸಿದಂತೆ ಸರಕಾರ ಮಾರ್ಗಸೂಚಿ ಪ್ರಕಟಿಸಿತ್ತು.

ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿಒಂದಕ್ಕಿಂತ ಹೆಚ್ಚು ಸ್ಥಾವರ (ಮೀಟರ್) ಗಳಿದ್ದರೆ ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ ಎಂದು ಹೇಳಲಾಗಿತ್ತು. ಇದರಿಂದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ಗೃಹ ಜ್ಯೋತಿ ಯೋಜನೆ ಸೌಲಭ್ಯ ಲಭ್ಯವಾಗದಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿತ್ತು.