
ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಎಸ್ಪಿ ಸೂಚನೆ
ಶಿಕಾರಿಪುರ, ಜೂ. 7: ‘ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಕಠಿಣ ಕ್ರಮಕೈಗೊಳ್ಳಬೇಕು. ಅಪರಾಧ ಕೃತ್ಯಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು’ ಎಂದು ಪೊಲೀಸ್ ಅಧಿಕಾರಿ-ಸಿಬ್ಬಂದಿಗಳಿಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸೂಚಿಸಿದ್ದಾರೆ.
ಶಿಕಾರಿಪುರ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ, ಜೂ.6 ರ ಸಂಜೆ ನಡೆದ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳ ಸಭೆಯಲ್ಲಿ ಎಸ್ಪಿ ಈ ಸೂಚನೆ ನೀಡಿದ್ದಾರೆ.

ಅಕ್ರಮ ಮದ್ಯ ಮಾರಾಟ, ಓಸಿ, ಮಟ್ಕಾ, ಗಾಂಜಾ ಮಾರಾಟ – ಸೇವನೆ ಮಾಡುವವರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು. ಆಯಾ ಠಾಣಾ ವ್ಯಾಪ್ತಿಯ ಪ್ರತಿ ಬೀಟ್ ಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು. ಈ ಮೂಲಕ ಸಂಭಾವ್ಯ ಅಪರಾಧ ಕೃತ್ಯಗಳು ಜರುಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದ್ದಾರೆ.
50 ಜನರನ್ನೊಳಗೊಂಡ ಬೀಟ್ ಸಮಿತಿ ರಚಿಸಬೇಕು. ನಿಯಮಿತವಾಗಿ ಸಮಿತಿಗಳ ಸಭೆ ನಡೆಸಬೇಕು. ಕುಂದುಕೊರತೆ ಆಲಿಸಿ, ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರತಿ ಗ್ರಾಮದಲ್ಲಿ ಆಯ್ದ ಯುವಕರನ್ನೊಳಗೊಂಡ ಯುವ ಪಡೆ ರಚಿಸಬೇಕು. ಬೀಟ್ ಪೊಲೀಸರು ಗಸ್ತು ನಡೆಸುವಾಗ ಯುವ ಪಡೆ ಸದಸ್ಯರ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಸಭೆಯಲ್ಲಿ ಡಿವೈಎಸ್ಪಿ ಶಿವಾನಂದ್ ಮದರಕಂಡಿ, ಇನ್ಸ್’ಪೆಕ್ಟರ್ ಲಕ್ಷ್ಮಣ್ ಸೇರಿದಂತೆ ಗ್ರಾಮಾಂತರ ಠಾಣೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.