
ದೇವಾಲಯದಲ್ಲಿ ಕಳ್ಳತನ : 6 ವರ್ಷ ಕಠಿಣ ಜೈಲು ಶಿಕ್ಷೆ!
ತೀರ್ಥಹಳ್ಳಿ, ಜೂ. 9: ದೇವಾಲಯದಲ್ಲಿ ಕಳವು ಮಾಡಿದ್ದ ವ್ಯಕ್ತಿಗೆ 6 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ತೀರ್ಥಹಳ್ಳಿಯ ಹಿರಿಯ ವ್ಯವಹಾರ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ತೀರ್ಪು ನೀಡಿದೆ.
ಚಿಕ್ಕಮಗಳೂರು ಜಿಲ್ಲೆ ಹೊಸಕೊಪ್ಪದ ಎಜಿ ಕಟ್ಟೆಯ ಬೇರು ಕೊಡಿಗೆ ನಿವಾಸಿ ಮಂಜುನಾಥ್ ಯಾನೆ ಬೋರ (41) ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಶಿಕ್ಷೆಯ ಜೊತೆಗೆ 20 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ 1 ವರ್ಷ ಹೆಚ್ಚುವರಿಯಾಗಿ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರಾದ ಭರತ್ ಅವರು ಜೂ. 9 ರಂದು ನೀಡಿರುವ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೇಮಲೀಲಾ ಡಿ.ಜೆ. ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನಲೆ: 7-7-2021 ರಂದು ತೀರ್ಥಹಳ್ಳಿ ತಾಲೂಕು ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೊಪ್ಪ ಚಂಗಾರು ಗ್ರಾಮದಲ್ಲಿರುವ ಉಮಾ ಮಹೇಶ್ವರ ದೇವಾಲಯದಲ್ಲಿ ಕಳವು ಕೃತ್ಯ ನಡೆದಿತ್ತು. ಕಾಣಿಕೆ ಹುಂಡಿಯಲ್ಲಿದ್ದ ಹಣ ಅಪಹರಿಸಲಾಗಿತ್ತು.
ಈ ಸಂಬಂಧ ದೇವಾಲಯ ಸಮಿತಿಯವರು ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮಂಜುನಾಥ್ ನನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು.