
ಪುಂಡ ಪೋಕರಿಗಳ ಅಡ್ಡೆಯಾಗುತ್ತಿರುವ ಸರ್ಕಾರಿ ಶಾಲಾ ಆವರಣ : ಗಮನಹರಿಸುವುದೆ ಸ್ಮಾರ್ಟ್ ಸಿಟಿ ಆಡಳಿತ?
ಕೋಟ್ಯಾಂತರ ರೂ. ವೆಚ್ಚದಲ್ಲಿ ಕಟ್ಟಡ ನವೀಕರಣ : ಆದರೆ ದುರಸ್ತಿಯಾಗದ ಶಾಲೆಯ ಕಾಂಪೌಂಡ್ ಗೋಡೆ..!
ಶಿವಮೊಗ್ಗ, ಜೂ. 27: ಶಿವಮೊಗ್ಗದ ಕರ್ನಾಟಕ ಸಂಘ ಸಮೀಪದ ಸರ್ಕಾರಿ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆ ಅವ್ಯವಸ್ಥೆಯಿಂದ, ರಾತ್ರಿ ವೇಳೆ ಹಾಗೂ ರಜಾ ದಿನಗಳಂದು ಶಾಲಾ ಆವರಣವು ಪುಂಡ ಪೋಕರಿಗಳ ಅಡ್ಡೆಯಾಗುತ್ತಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತಿತವಾಗುತ್ತಿದೆ!
ಸ್ಮಾರ್ಟ್ ಸಿಟಿ ಆಡಳಿತವು ಕೋಟ್ಯಾಂತರ ರೂ. ವೆಚ್ಚದಲ್ಲಿ ಶಾಲಾ ಕಟ್ಟಡದ ನವೀಕರಣ ಕಾಮಗಾರಿ ನಡೆಸಿದೆ. ಶಾಲಾ ಕಾಂಪೌಂಡ್ ಗೆ ಹೊಂದಿಕೊಂಡಂತೆ ಸರ್ ಎಂ.ವಿಶ್ವೇಶ್ವರಯ್ಯರವರ ಪ್ರತಿಮೆ ನಿರ್ಮಾಣ ಮಾಡಿದೆ.

ಕಾಮಗಾರಿ ವೇಳೆ ಹಲವೆಡೆ ಶಾಲೆಯ ಕಾಂಪೌಂಡ್ ಗೋಡೆ ಹಾನಿಯಾಗಿತ್ತು. ಶಾಲೆಗೆ ಪ್ರವೇಶ ಕಲ್ಪಿಸುವ ಮುಖ್ಯ ದ್ವಾರದ ಗೇಟ್ ಕೂಡ ದುರಸ್ತಿಗೀಡಾಗಿತ್ತು. ಆದರೆ ಗೋಡೆಯ ದುರಸ್ತಿಗೆ ಕ್ರಮಕೈಗೊಂಡಿರಲಿಲ್ಲ. ಇದರಿಂದ ಶಾಲಾ ಆವರಣದೊಳಗೆ ಅನದಿಕೃತ ವ್ಯಕ್ತಿಗಳು ಪ್ರವೇಶಿಸುತ್ತಿದ್ದಾರೆ. ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ.
ಸ್ಮಾರ್ಟ್ ಸಿಟಿ ಎಂಜಿನಿಯರ್ ಗಳ ನಿರ್ಲಕ್ಷ್ಯ ಧೋರಣೆಯಿಂದ, ಇದೀಗ ಶಾಲಾ ಆವರಣವು ಪುಂಡಪೋಕರಿಗಳ ಅಡ್ಡೆಯಾಗುವಂತಾಗಿದೆ. ತಕ್ಷಣವೇ ಸ್ಮಾರ್ಟ್ ಸಿಟಿ ಆಡಳಿತ ಶಾಲಾ ಕಾಂಪೌಂಡ್ ದುರಸ್ತಿಗೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಶಾಲೆಯ ಹಳೇಯ ವಿದ್ಯಾರ್ಥಿ ಸಂಘ ಆಗ್ರಹಿಸಿದೆ.
ಹಳೇಯ ವಿದ್ಯಾರ್ಥಿ ಸಂಘಟನೆಯಿಂದ ಸ್ಮಾರ್ಟ್ ಸಿಟಿ ಎಂಡಿಗೆ ಮನವಿ
*** ಮೇನ್ ಮಿಡ್ಲು ಸ್ಕೂಲ್ ಶಾಲೆಯ ಕಾಂಪೌಂಡ್ ಗೋಡೆ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ, ಶಾಲೆಯ ಹಳೇಯ ವಿದ್ಯಾರ್ಥಿ ಸಂಘಟನೆಯು ಮಂಗಳವಾರ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಎಂಡಿ ಚಿದಾನಂದ ವಟಾರೆಯವರಿಗೆ ಮನವಿ ಪತ್ರ ಅರ್ಪಿಸಿದೆ.

ಸ್ಮಾರ್ಟ್ ಸಿಟಿಯಿಂದ ನಡೆಸಿದ ನವೀಕರಣ ಕಾಮಗಾರಿ ವೇಳೆ, ಹಲವೆಡೆ ಕಾಂಪೌಂಡ್ ಗೋಡೆಗೆ ಹಾನಿಯಾಗಿತ್ತು. ಕಾಮಗಾರಿ ಪೂರ್ಣಗೊಂಡ ನಂತರ ಕಾಂಪೌಂಡ್ ದುರಸ್ತಿಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಕಾಮಗಾರಿ ಪೂರ್ಣಗೊಂಡ ನಂತರ ಕಾಂಪೌಂಡ್ ಗೋಡೆ ದುರಸ್ತಿ ಮಾಡದೆ ಹಾಗೆಯೇ ಬಿಡಲಾಗಿತ್ತು. ಇದೀಗ ಶಾಲಾ ಆವರಣಕ್ಕೆ ಅನದಿಕೃತ ವ್ಯಕ್ತಿಗಳು ಪ್ರವೇಶಿಸುತ್ತಿದ್ದಾರೆ. ಅನೈತಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.
ಕಾಲಮಿತಿಯೊಳಗೆ ಶಾಲೆಯ ಕಾಂಪೌಂಡ್ ಗೋಡೆ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ. ಮನವಿ ಅರ್ಪಿಸುವ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ, ಉಪಾಧ್ಯಕ್ಷ ಪರಶುರಾಮ, ರಾಮು ಮೊದಲಾದವರಿದ್ದರು.