
ತೀರ್ಥಹಳ್ಳಿ : ಮೀನೂಟಕ್ಕೆ ಬಂದವರ ಕಿರಿಕಿರಿ – ಹೆಚ್ಚುತ್ತಿರುವ ಅಪಘಾತಗಳು!
*ಸೂಕ್ತ ಕ್ರಮಕೈಗೊಳ್ಳುವಂತೆ ಸ್ಥಳಿಯಾಡಳಿತ, ಪೊಲೀಸ್ ಇಲಾಖೆಗೆ ಗ್ರಾಮಸ್ಥರ ಆಗ್ರಹ
ತೀರ್ಥಹಳ್ಳಿ, ಜು. 3: ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಸಮೀಪದ 17 ನೇ ಮೈಲಿಕಲ್ಲು ಹಳಸವಾಳ ರಸ್ತೆಯ ಮೀನು ಹೋಟೆಲ್ ಸಮೀಪ, ಶನಿವಾರ ಹಾಗೂ ಭಾನುವಾರದ ವೇಳೆ ಜನ-ವಾಹನ ಸಂಚಾರ ದುಸ್ತರವಾಗಿ ಪರಿಣಮಿಸುತ್ತಿದೆ. ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಶನಿವಾರ, ಭಾನುವಾರ ಹಾಗೂ ರಜಾ ದಿನಗಳಂದು ಹೋಟೆಲ್ ಸಮೀಪದ ರಸ್ತೆಯ ಎಲ್ಲೆಂದರಲ್ಲಿ ಕಾರು, ಬೈಕ್ ಮತ್ತೀತರ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸುಗಮ ಜನ – ವಾಹನ ಸಂಚಾರ ದುಸ್ತರವಾಗಿ ಪರಿಣಮಿಸುತ್ತಿದೆ.
ಈ ವೇಳೆ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ವಾಹನಗಳನ್ನು ಸರಿಯಾಗಿ ನಿಲ್ಲಿಸಿ ಎಂದು ಸಲಹೆ ನೀಡಿದರೆ, ಮದ್ಯದ ನಶೆಯಲ್ಲಿರುವವರು ಜಗಳಕ್ಕಿಳಿಯುತ್ತಿದ್ದಾರೆ. ಹಲ್ಲೆ ಮಾಡಲು ಯತ್ನಿಸುತ್ತಾರೆ. ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.
ಕಳೆದ ಭಾನುವಾರ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರೊಂದರ ಬಾಗಿಲನ್ನು ಮದ್ಯದ ನಶೆಯಲ್ಲಿದ್ದವರು ಏಕಾಏಕಿ ತೆರೆದ ಪರಿಣಾಮ, ಬೈಕ್ ನಲ್ಲಿ ಮಗುವಿನೊಂದಿಗೆ ತೆರಳುತ್ತಿದ್ದ ಚಾಲಕ ಕೆಳಕ್ಕೆ ಬಿದ್ದಿದ್ದಾನೆ. ಮಗುವಿಗೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದೆ. ಸದರಿ ಕಾರಿನಲ್ಲಿದ್ದವರು ಬೈಕ್ ಚಾಲಕನೊಂದಿಗೆ ಗಲಾಟೆ ಮಾಡಿದ್ದಾರೆ.
ನಾಗರೀಕರಿಗೆ ಆಗುತ್ತಿರುವ ಸಮಸ್ಯೆಯ ಮಾಹಿತಿ, ಸ್ಥಳೀಯಾಡಳಿತ ಹಾಗೂ ಪೋಲಿಸ್ ಇಲಾಖೆಯ ಗಮನದಲ್ಲಿದೆ. ಆದರೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಸದರಿ ಮೀನು ಹೋಟೆಲ್ ಸಮೀಪದ ರಸ್ತೆಯಲ್ಲಿ ಆಗುತ್ತಿರುವ ಕಿರಿಕಿರಿ ತಪ್ಪಿಸಲು ಸ್ಥಳೀಯಾಡಳಿತ ಹಾಗೂ ಪೊಲೀಸ್ ಇಲಾಖೆ ಆದ್ಯ ಗಮನಹರಿಸಬೇಕು. ಸುಗಮ ಸುಗಮ ಜನ – ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಸಂಭಾವ್ಯ ಅನಾಹುತಗಳನ್ನು ತಪ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.