
ನಿರ್ಜನ ಪ್ರದೇಶದಲ್ಲಿ ನೀರಿನ ಗುಂಡಿಗೆ ಬಿದ್ದಿದ್ದ ಎಮ್ಮೆಗಳ ರಕ್ಷಣೆ!
ಶಿವಮೊಗ್ಗ, ಆ. 14: ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪದ ನಿರ್ಜನ ಪ್ರದೇಶದಲ್ಲಿ ಕಳೆದ ಮೂರು ದಿನಗಳ ಹಿಂದೆ ನೀರಿನ ಗುಂಡಿಯೊಂದಕ್ಕೆ ಬಿದ್ದು, ಹೊರಬರಲಾಗದೆ ಸಂಕಷ್ಟ ಪಡುತ್ತಿದ್ದ ಎರಡು ಎಮ್ಮೆಗಳನ್ನು ಭಾನುವಾರ ರಕ್ಷಿಸಿದ ಘಟನೆ ನಡೆದಿದೆ.

ಸೋಮಿನಕೊಪ್ಪದ ಜಾನುವಾರು ಪಾಲಕರಾದ ಮುತಾಹೆರ್ ಇಕ್ಬಾಲ್ ಎಂಬುವರಿಗೆ ಈ ಎಮ್ಮೆಗಳು ಸೇರಿದ್ದಾಗಿವೆ. ಕಳೆದ ಮೂರು ದಿನಗಳ ಹಿಂದೆ ಎಂದಿನಂತೆ ಎಮ್ಮೆಗಳನ್ನು ಮೇಯಲು ಬಿಟ್ಟಿದ್ದರು.

ಆದರೆ ಇದರಲ್ಲಿ ಎರಡು ಎಮ್ಮೆಗಳು ಸುಮಾರು ಐದಾರು ಅಡಿ ಆಳದ ಗುಂಡಿಗೆ ಬಿದ್ದಿದ್ದವು. ಎಲ್ಲೆಡೆ ಹುಡುಕಿದರೂ ಎಮ್ಮೆಗಳ ಸುಳಿವು ಲಭ್ಯವಾಗಿರಲಿಲ್ಲ.
ಭಾನುವಾರ ಎಮ್ಮೆಗಳ ಹುಡುಕಾಟದಲ್ಲಿದ್ದ ಮುತಾಹೇರ್ ಇಕ್ಬಾಲ್ ರವರ ಪುತ್ರ ಶೇಕ್ ಅಯಾಜ್ ಅವರಿಗೆ, ನೀರಿನ ಗುಂಡಿಯಲ್ಲಿ ಎಮ್ಮೆಗಳು ಸಿಲುಕಿ ಬಿದ್ದಿರುವುದು ಗಮನಕ್ಕೆ ಬಂದಿದೆ.

ತಕ್ಷಣವೇ ಕುಟುಂಬ ಸದಸ್ಯರು ಎರಡು ಎಮ್ಮೆಗಳನ್ನು ಗುಂಡಿಯಿಂದ ಸುರಕ್ಷಿತವಾಗಿ ಹೊರ ತೆಗೆಯುವಲ್ಲಿ ಸಫಲರಾಗಿದ್ದಾರೆ.