ಜಾತಿ/ಸಿಂಧುತ್ವ ಪ್ರಮಾಣ ಪತ್ರ ನೀಡುವ ಬಗ್ಗೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ

ವಿಳಂಬವಾದರೆ ಜಿಲ್ಲಾಧಿಕಾರಿಗಳ  ಮೇಲೆ ಕ್ರಮ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಆಗಸ್ಟ್ 25: ಕಲಬುರಗಿ, ಬೀದರ್ ಮತ್ತು  ಯಾದಗಿರಿ ಜಿಲ್ಲೆಗಳಲ್ಲಿ  ಗೊಂಡ ಸಮುದಾಯಕ್ಕೆ ಸೇರಿರುವ ಬಗ್ಗೆ ಸಿ.ಆರ್.ಇ ಸೆಲ್ ನವರು ಪರಿಶೀಲಿಸಿ  ವರದಿ ಕೊಟ್ಟ ನಂತರವೂ ವಿಳಂಬವಾದರೆ, ಜಿಲ್ಲಾಧಿಕಾರಿಗಳು ಅನಗತ್ಯವಾಗಿ ವಿಳಂಬ ಮಾಡಿದ್ದಾರೆ ಎಂದು ಅಮಾನತು ಮಾಡಲಾಗುವುದು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ  ನೀಡಿದರು.

ಕಲಬುರಗಿ, ಬೀದರ್ ಮತ್ತು ಯಾದಗಿರಿ  ಜಿಲ್ಲೆಗಳಲ್ಲಿ  ಗೊಂಡ ಹಾಗೂ ಕೊಡುಗು ಜಿಲ್ಲೆಯಲ್ಲಿ ಕುರುಬ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಜಾತಿ ಪತ್ರಮಾಣ ಪತ್ರ,  ಸಿಂಧುತ್ವ ಪ್ರಮಾಣಪತ್ರ ನೀಡುವ ಸಂಬಂಧ ಎದುರಿಸುತ್ತಿರುವ  ಸಮಸ್ಯೆಗಳ ಕುರಿತು ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಗೊಂಡ ಸಮುದಾಯದವರ ಅಹವಾಲುಗಳನ್ನು ಸಮಗ್ರವಾಗಿ ಕೇಳಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಸಿ.ಆರ್.ಇ ಸೆಲ್ ಇರುವುದು ಹಕ್ಕುಗಳ ರಕ್ಷಣೆಗಾಗಿ ಹಾಗೂ ಪ್ರಕರಣಗಳ ವಿಚಾರಣೆಗಾಗಿ. ಸಿಆರ್ ಇ ಸೆಲ್ ವಿಚಾರಣೆ ಮಾಡಿ ನೀಡಿದ ವರದಿಯನ್ನು ಅಂಗೀಕರಿಸಬೇಕು. ಕಲಬುರಗಿ, ಬೀದರ್ ಮತ್ತು ಯಾದಗಿರಿ  ಜಿಲ್ಲೆಗಳಲ್ಲಿ  ಗೊಂಡ ಎನ್ನುವ ಸಮುದಾಯ ಎಸ್.ಟಿ ಗೆ ಸೇರಿದೆ. ಶಾಲಾ ದಾಖಲಾತಿ,  ಪೋಷಕರ ಇತಿಹಾಸ ವನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಬಹುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. 

ದೂರುಗಳಿದ್ದರೆ ತನಿಖೆ ಮಾಡಿ :  ಪ್ರಮಾಣಪತ್ರ ನೀಡಲು ಅನಗತ್ಯವಾಗಿ ವಿಳಂಬ ಮಾಡಬಾರದು. ದೂರುಗಳು  ಇದ್ದರೆ ತನಿಖೆ ಮಾಡಿಸಬೇಕು.  ದೂರುಗಳು ಇಲ್ಲದೆ ಹೋದರೆ  ಸ್ವಯಂ ಪ್ರೇರಿತವಾಗಿ  ಪ್ರಕರಣಗಳನ್ನು ಕೈಗೊಳ್ಳುವಂತಿಲ್ಲ ಎಂದು ಸೂಚಿಸಿದರು.  

ಸಿ.ಆರ್.ಇ ಸೆಲ್ ನವರು ತನಿಖೆ ಮಾಡಿದ ವರದಿ ನೀಡಿದ ಕೂಡಲೇ ಅಂಗೀಕರಿಸಿ, ಸಂಬಂಧಿಸಿದ  ಜಿಲ್ಲಾಧಿಕಾರಿಗಳು ಕೂಡಲೇ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದರು.  

ವಿಳಂಬ ಸಲ್ಲದು‌‌ :‌ ಕೊಡಗು ಜಿಲ್ಲೆಯ ಕುರುಬ ಸಮುದಾಯದವರು ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿರುತ್ತಾರೆ.   ಅನಗತ್ಯವಾಗಿ ವಿಳಂಬ ಮಾಡದೇ ತ್ವರಿತವಾಗಿ ಜಾತಿ ಪ್ರಮಾಣ ಪತ್ರಗಳನ್ನು ನೀಡಬೇಕು.    ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ವಿದ್ಯಾರ್ಥಿವೇತನಗಳನ್ನು ನೀಡಬಹುದು ಎಂದು ಸೂಚಿಸಿದರು. 

ಕಂದಾಯ ಸಚಿವ ಕೃಷ್ಣಬೈರೇಗೌಡ, ಅರಣ್ಯ ಸಚಿವ ಈಶ್ವರ ಖಂಡ್ರೆ, ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವಜನಸೇವಾ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್,  ಕಲಬುರಗಿ, ಬೀದರ್, ಯಾದಗಿರಿ ಹಾಗೂ ಕೊಡಗು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್  ಪಿ.ಮಣಿವಣ್ಣನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ. ಕಲ್ಲೇಶ್, ಗೊಂಡ ಹಾಗೂ ಕುರುಬ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕ್ಲಾಸ್ ಗೆ ಸರಿಯಾಗಿ ಬರುತ್ತಿಲ್ಲ ಎಂದು ಪೋಷಕರಿಗೆ ತಿಳಿಸಿದ್ದ ಉಪನ್ಯಾಸಕನಿಗೆ ಕಾಲೇಜ್ ನಲ್ಲಿಯೇ ಲಾಂಗ್ ತೋರಿಸಿ ಬೆದರಿಸಿದ ವಿದ್ಯಾರ್ಥಿ..! Previous post ಕ್ಲಾಸ್ ಗೆ ಸರಿಯಾಗಿ ಬರುತ್ತಿಲ್ಲ ಎಂದು ಪೋಷಕರಿಗೆ ತಿಳಿಸಿದ್ದ ಉಪನ್ಯಾಸಕನಿಗೆ ಕಾಲೇಜ್ ನಲ್ಲಿಯೇ ಲಾಂಗ್ ತೋರಿಸಿ ಬೆದರಿಸಿದ ವಿದ್ಯಾರ್ಥಿ..!
‘ಕಾನೂನಿನ ದೃಷ್ಟಿಯಲ್ಲಿ ಸರ್ವರು ಸಮಾನರು : ಸಂವಿಧಾನದ ಮೌಲ್ಯ ಪರಿಣಾಮಕಾರಿಯಾಗಿ ಜಾರಿಯಾಗಬೇಕು’ - ಸಿದ್ದರಾಮಯ್ಯ Next post ‘ಕಾನೂನಿನ ದೃಷ್ಟಿಯಲ್ಲಿ ಸರ್ವರು ಸಮಾನರು : ಸಂವಿಧಾನದ ಮೌಲ್ಯ ಪರಿಣಾಮಕಾರಿಯಾಗಿ ಜಾರಿಯಾಗಬೇಕು’ – ಸಿದ್ದರಾಮಯ್ಯ