ರಾಜ್ಯದ ಗ್ರಾಮೀಣಾಭಿವೃದ್ದಿಯಲ್ಲಿ ಹೊಸ ಬದಲಾವಣೆ ತಂದ ಡಾ.ರಾಜಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’ ಚಿತ್ರ : ಕುವೆಂಪು ವಿವಿ ಪ್ರಭಾರ ಕುಲಪತಿ ಪ್ರೊ. ವೆಂಕಟೇಶ

ಗ್ರಾಮೀಣಾಭಿವೃದ್ದಿಯಲ್ಲಿ ಹೊಸ ಬದಲಾವಣೆ ತಂದ ಡಾ.ರಾಜಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’ ಚಿತ್ರ : ಕುವೆಂಪು ವಿವಿ ಪ್ರಭಾರ ಕುಲಪತಿ ಪ್ರೊ. ವೆಂಕಟೇಶ

ಶಂಕರಘಟ್ಟ (ಶಿವಮೊಗ್ಗ), ಸೆ. 04: ಚಲನಚಿತ್ರ ಎಂಬುದು ಕೇವಲ ಒಂದು ಮನೋರಂಜನ ಮಾಧ್ಯಮವಲ್ಲ ಬದಲಾಗಿ ನೋಡುಗರಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಹಾಗೂ ಸಾಮಾಜಿಕ ಬದಲಾವಣೆಯನ್ನು ತರುವಂತಹ ಸಾಮರ್ಥ್ಯವುಳ್ಳ ಸಶಕ್ತ ಮಾಧ್ಯಮವಾಗಿದೆ ಎಂದು ಕುವೆಂಪು ವಿವಿ ಪ್ರಭಾರ ಕುಲಪತಿ ಪ್ರೊ. ವೆಂಕಟೇಶ ಎಸ್ ಹೇಳಿದರು.

ಕುವೆಂಪು ವಿವಿದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ವಿವಿಯ ಬಸವ ಸಭಾ ಭವನದಲ್ಲಿ ಆಯೋಜಿಸಿರುವ ಐದು ದಿನಗಳ 14ನೇ ಸಹ್ಯಾದ್ರಿ ಸಿನಿಮೋತ್ಸವವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಚಲನಚಿತ್ರಗಳು ಸಾಮಾಜಿಕ ಬದಲಾವಣೆ ಸಾಧನಗಳು ಎನ್ನಲು ಕನ್ನಡವು ಸೇರಿದಂತೆ ಜಾಗತಿಕ ರಂಗದಲ್ಲಿ ಹಲವು ನಿದರ್ಶನಗಳಿವೆ. ರಾಜ್‌ಕುಮಾರ್‌ರ `ಬಂಗಾರದ ಮನುಷ್ಯ` ಸಿನಿಮಾ ಮೂಲಕ ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿಯಲ್ಲಿ ದೊಡ್ಡ ಆಂದೋಲನವೇ ನಡೆಯಿತು ಎಂದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಸಿನಿಮಾಗಳು ಜಾಗತಿಕ ಮಟ್ಟದಲ್ಲೂ ಹೆಸರು ಮಾಡುತ್ತಿದೆ. ಸ್ಥಳೀಯ ಸಂಸ್ಕೃತಿ, ಪರಂಪರೆ ಹಾಗೂ ಸಾಮಾಜಿಕ ಸಂದೇಶವನ್ನು ಸಾರುವಂಥಹ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗುತ್ತಿವೆ. ಈ ದಿಸೆಯಲ್ಲಿ ಕನ್ನಡ ಚಿತ್ರರಂಗ ಮುನ್ನುಡಿ ಇಡುತ್ತಿರುವುದು ಪ್ರಶಂಸನೀಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿನಿಮೋತ್ಸವದ ವಿಷಯ ಮುಗ್ಧ ಮಕ್ಕಳ ಕಣ್ಣುಗಳಲ್ಲಿ ಪ್ರಪಂಚ ಕುರಿತು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಡಿ ಎಸ್ ಪೂರ್ಣಾನಂದ ಮಾತನಾಡಿ, ಸಿನಿಮಾವನ್ನು ಕೇವಲ ವೀಕ್ಷಿಸಿ ಮನೋರಂಜನೆ ಪಡೆಯುವುದಕ್ಕೆ ಮಾತ್ರ ಸೀಮಿತ ಮಾಡಿಕೊಳ್ಳದೆ, ಅದರಲ್ಲಿ ಕಾಣುವ ವಿಚಾರಗಳನ್ನು ಚರ್ಚಿಸುವುದು ಸಿನಿಮಾ ನೋಡುವ ಕ್ರಮವಾಗಿದೆ. ಒಂದು ಸದಭಿರುಚಿಯ ಸಿನಿಮಾವನ್ನು ವೀಕ್ಷಿಸುವುದು ಒಂದು ಉತ್ತಮ ಪುಸ್ತಕ ಓದುವುದಕ್ಕೆ ಸಮವಾಗಿರುತ್ತದೆ.

ಸಿನಿಮೋತ್ಸವದಲ್ಲಿ ಪ್ರದರ್ಶಿಸುವಂತ ಎಲ್ಲಾ ಸಿನಿಮಾಗಳಲ್ಲಿ ಮಕ್ಕಳ ಮುಗ್ಧತೆ, ಜಾಣ್ಮೆ, ಬಡ ಮಕ್ಕಳ ನೋವು ನಲಿವು ಮತ್ತು ಶೋಷಣೆಗೆ ಗುರಿಯಾಗಿ ಅನುಭವಿಸಿದ ಸಂಕಷ್ಟದ ಕುರಿತ ಕಥೆಗಳನ್ನು ಒಳಗೊಂಡಿವೆ. ಮಕ್ಕಳ ಸಿನಿಮಾಗಳನ್ನು ನೋಡುವುದು ಮಾನವೀಯತೆಯನ್ನು ಆಚರಿಸುವ, ಅನುಸರಿಸುವ ಪ್ರಕ್ರಿಯೆಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಖ್ಯಾತ ಛಾಯಗ್ರಹಕರಾದ ಅಶೋಕ್ ಕಶ್ಯಪ್, ವಿಭಾಗದ ಅಧ್ಯಕ್ಷರಾದ ಡಾ. ಸತ್ಯಪ್ರಕಾಶ್ ಎಂ.ಆರ್, ಉಪನ್ಯಾಸಕರಾದ ಪ್ರೊ. ಸತೀಶ್ ಕುಮಾರ್, ಪ್ರೊ. ವರ್ಗೀಸ್ ಪಿ.ಎ, ಡಾ. ರುಮಾನ ತನ್ವೀರ್, ವಿನಯ್ ಜಿ.ಪಿ. ಸಂಶೋಧನಾರ್ಥಿಗಳು ಹಾಗೂ ವಿವಿಧ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಚಿತ್ರ ಸಂಗಾತಿ ಸಿನಿಮಾ ಸೊಸೈಟಿ ಲೋಕಾರ್ಪಣೆ

ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಆರಂಭಿಸುತ್ತಿರುವ ‘ಚಿತ್ರ ಸಂಗಾತಿ ಸಿನಿಮಾ ಸೊಸೈಟಿ’ ಯನ್ನು ಖ್ಯಾತ ಚಲನಚಿತ್ರ ಛಾಯಾಗ್ರಹಕ ಹಾಗೂ ನಿರ್ದೇಶಕ ಅಶೋಕ್ ಕಶ್ಯಪ್ ಲೋಕಾರ್ಪಣೆಗೊಳಿಸಿದರು.

ಖ್ಯಾತ ಚಲನಚಿತ್ರ ಛಾಯಾಗ್ರಹಕ ಹಾಗೂ ನಿರ್ದೇಶಕ ಅಶೋಕ್ ಕಶ್ಯಪ್

ಈ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ವಿಭಾಗದ ಅಧ್ಯಕ್ಷರಾದ ಡಾ. ಸತ್ಯಪ್ರಕಾಶ್ ಎಂ ಆರ್, ಸಿನಿಮಾ ಸೊಸೈಟಿಗಳು ಜಾಗತಿಕವಾಗಿ ಹೆಚ್ಚು ಹೆಸರು ಮಾಡಿರುವ, ಚಿತ್ರಮಂದಿರಗಳಲ್ಲಿ ಪ್ರಸಿದ್ಧಿ ಪಡೆಯದೇ ಇರುವ ಸಿನಿಮಾಗಳನ್ನು ಪ್ರದರ್ಶಿಸುತ್ತಾ ಬಂದಿವೆ. ಚಲನಚಿತ್ರ ನಿರ್ಮಾಣದಲ್ಲಿ ಸಾಧನೆ ಮಾಡಿರುವ ಹಲವಾರು ಗಣ್ಯರುಗಳಾದ ಅಂತಾರಾಷ್ಟ್ರೀಯ ನಿರ್ದೇಶಕರುಗಳಾ ಜೀನ್ ಗೊಡಾರ್ಡ್, ಮಜೀದ್ ಮಜೀದಿ, ಅಬ್ಬಾಸ್ ಕೈರೋಸ್ತಾಮಿ, ಸತ್ಯಜಿತ್ ರೇ, ಅಲ್ಫೆçಡ್ ಹಿಚ್‌ಕಾಕ್, ಮೃಣಾಲ್ ಸೇನ್, ರಿತ್ವಿಕ್ ಘಟಕ್, ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ, ಅಡೂರ್ ಗೋಪಾಲಕೃಷ್ಣರಂತವರು ಸಿನಿಮಾ ಸೊಸೈಟಿಗಳ ಮೂಲಕ ಸ್ಫೂರ್ತಿ ಪಡೆದು ಹೊಸ ಕಲಾಸಿನಿಮಾಗಳನ್ನು ನಿರ್ದೇಶಿಸಿ ಗುರುತಿಸಿಕೊಂಡವರಾಗಿದ್ದಾರೆ.

ಬದುಕಿಗೆ ಸಮೀಪದ ಕಥೆಗಳನ್ನು ಹೇಳುವುದು ಕಲಾತ್ಮಕ ಸಿನಿಮಾಗಳು. ಸಿನಿಮಾ ಸೊಸೈಟಿಯಲ್ಲಿ ಪ್ರದರ್ಶಿಸಿ ವಿದ್ಯಾರ್ಥಿಗಳಲ್ಲಿ ಸಿನಿಮಾ ವಿಮರ್ಶೆ, ಚರ್ಚೆ, ಅನುಸಂಧಾನದ ಸಂಸ್ಕೃತಿಯನ್ನು ಬೆಳೆಸಲಾಗುವುದು ಎಂದರು.

ಸ್ಥಳೀಯ ಕಥೆಗೆ ಜಾಗತಿಕ ವ್ಯಾಪ್ತಿ ಸಾಧ್ಯವಿದೆ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ `ಚಲನಚಿತ್ರ ನಿರ್ಮಾಣ ಹಾಗೂ ರಸಗ್ರಹಣದ` ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರದ ಸಂಪನ್ಮೂಲವ್ಯಕ್ತಿಯಾಗಿ ಖ್ಯಾತ ಛಾಯಾಗ್ರಹಕ ಹಾಗೂ ನಿರ್ದೇಶಕರಾದ ಅಶೋಕ್ ಕಶ್ಯಪ್ ಉಪನ್ಯಾಸ ಮಾಡಿದರು.

ಕುವೆಂಪು ವಿವಿದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ವಿವಿಯ ಬಸವ ಸಭಾ ಭವನದಲ್ಲಿ ಆಯೋಜಿಸಿರುವ ಐದು ದಿನಗಳ 14ನೇ ಸಹ್ಯಾದ್ರಿ ಸಿನಿಮೋತ್ಸವವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಿನಿಮಾ ಒಂದು ಜಾಗತಿಕವಾದ ಅಂಶ. ಅದಕ್ಕೆ ಉತ್ತಮ ಉದಾರಹಣೆ ಕನ್ನಡದ ಕಾಂತಾರ ಸಿನಿಮಾ. ಇದು ಸ್ಥಳೀಯ ಸಂಸ್ಕೃತಿ ಆಧಾರಿತ ಸಿನಿಮಾವಾದರೂ ನಿರ್ದೇಶಕ ಕಥೆ ಹೇಳುವ ಶೈಲಿಯಿಂದ ಸಿನಿಮಾ ದೇಶ ವಿದೇಶದಲ್ಲೂ ಹೆಸರು ಮಾಡಿತು. ಇತ್ತೀಚೆಗೆ ಸ್ಥಳೀಯ ಕಥೆಗಳು ಜಾಗತಿಕವಾಗಿ ಜನಮನ್ನಣೆ ಪಡೆಯುತ್ತಿವೆ. ಹಾಲಿವುಡ್ ಅನ್ನು ಅನುಸರಿಸುವುದು ಬಿಟ್ಟು ಬಾಲಿವುಡ್ ಈಗ ದಕ್ಷಿಣ ಭಾರತದ ಸಿನಿಮಾಗಳ ಕಡೆ ನೋಡುತ್ತಿದೆ ಎಂದರು.

Previous post ಪತ್ರಿಕಾ ವಿತರಕರಿಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ : 2 ಕೋಟಿ ಕ್ಷೇಮ ನಿಧಿ – ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್
ಫೆಬ್ರುವರಿ ಅಂತ್ಯದ ವೇಳೆಗೆ ಬಂಡವಾಳ ವೆಚ್ಚಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ Next post ಫೆಬ್ರುವರಿ ಅಂತ್ಯದ ವೇಳೆಗೆ ಅನುದಾನ ಬಳಕೆಯಾಗಬೇಕು : ಅಧಿಕಾರಿಗಳಿಗೆ ಗಡುವು ನೀಡಿದ ಸಿಎಂ!