
ಡ್ರಾಪ್ ಕೊಡುವ ನೆಪದಲ್ಲಿ ಸುಲಿಗೆ : ಇಬ್ಬರು ಯುವಕರ ಬಂಧನ
ಭದ್ರಾವತಿ, ಸೆ. 5: ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯೋರ್ವರ ಬಳಿಯಿದ್ದ ನಗನಾಣ್ಯ ಅಪಹರಿಸಿ ಪರಾರಿಯಾಗಿದ್ದ ಆರೋಪದ ಮೇರೆಗೆ, ಇಬ್ಬರನ್ನು ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಭದ್ರಾವತಿ ತಾಲೂಕು ಸುಲ್ತಾನ್ ಮಟ್ಟಿ ಗ್ರಾಮದ ನಿವಾಸಿಗಳಾದ ಚೇತನ (21) ಹಾಗೂ ಕೀರ್ತನ್ ಕೆ (21) ಬಂಧಿತ ಯುವಕರೆಂದು ಗುರುತಿಸಲಾಗಿದೆ. ಆರೋಪಿತರಿಂದ 11,300 ನಗದು, 2 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸೆ. 1 ರಂದು ಉತ್ತರ ಪ್ರದೇಶ ರಾಜ್ಯದ ಕಾರ್ಮಿಕ ರವೀಂದ್ರ ಯಾದವ್ (39) ಅವರು ಮಾಚೇನಹಳ್ಳಿಗೆ ಹೋಗಲು ಭದ್ರಾವತಿ ಬಸ್ ನಿಲ್ದಾಣದ ಬಳಿ ಬಸ್ ಗೆ ಕಾದು ನಿಂತಿದ್ದರು. ಈ ವೇಳೆ ಬೈಕ್ ನಲ್ಲಿ ಸ್ಥಳಕ್ಕಾಗಮಿಸಿದ ಆರೋಪಿಗಳು ಡ್ರಾಪ್ ಕೊಡುವುದಾಗಿ ಬೈಕ್ ನಲ್ಲಿ ಹತ್ತಿಸಿಕೊಂಡಿದ್ದರು.
ಜೇಡಿಕಟ್ಟೆ ಗ್ರಾಮದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರವೀಂದ್ರ ಯಾದವ್ ಗೆ ಬೆದರಿಸಿ ಅವರ ಬಳಿಯಿದ್ದ ನಗದು, ಎಟಿಎಂ ಕಾರ್ಡ್, ಮೊಬೈಲ್ ಫೋನ್ ಸುಲಿಗೆ ಮಾಡಿದ್ದರು. ಈ ಕುರಿತಂತೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ನಾಗರಾಜ್ ಕೆ.ಆರ್. ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್’ಪೆಕ್ಟರ್ ಶ್ರೀಶೈಲ ಕುಮಾರ್ ಜೆ, ಪಿಎಸ್ಐ ರಮೇಶ್ ಟಿ, ಭಾರತಿ, ಸಿಬ್ಬಂದಿಗಳಾದ ನವೀನ್, ಪ್ರವೀಣ್ ಕುಮಾರ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಂಜಾ ಮಾರಾಟ : ಐವರು ಯುವಕರ ಸೆರೆ
ಭದ್ರಾವತಿ, ಸೆ. 5: ಗಾಂಜಾ ಮಾರಾಟ ಅಡ್ಡೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಐವರು ಯುವಕರನ್ನು ಬಂಧಿಸಿದ ಘಟನೆ ಭದ್ರಾವತಿ ಪಟ್ಟಣದ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭದ್ರಾ ರೈಸ್ ಮಿಲ್ ಸಮೀಪ ನಡೆದಿದೆ.
ಶಿವಮೊಗ್ಗದ ಆರ್.ಎಂ.ಎಲ್ ನಗರದ ನಿವಾಸಿ ಮಹಮ್ಮದ್ ಅಜರುದ್ದೀನ್ ಯಾನೆ ಅಜ್ಜು (24), ಭದ್ರಾವತಿ ಮೋಮಿನ್ ಮೊಹಲ್ಲಾದ ಇಲಿಯಾಜ್ ಬೇಗ್ ಯಾನೆ ಇಲ್ಲು (22), ಸಮೀರ್ ಖಾನ್ ಯಾನೆ ಮೋಟಾ ಸಮೀರ್ (23), ಕೇರಳ ರಾಜ್ಯದ ಮಲಪ್ಪುರಂನ ಸೈನುದ್ದೀನ್ ಯಾನೆ ಸೈನು (38), ಶಿವಮೊಗ್ಗದ ಜೆಪಿ ನಗರದ ಅರ್ಬಾಜ್ ಯಾನೆ ಹಜರತ್ (22) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಡಿವೈಎಸ್ಪಿ ಕೆ.ಆರ್.ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್’ಪೆಕ್ಟರ್ ಶರಣಪ್ಪ ಹಂಡ್ರಗಲ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಬಂಧಿತ ಆರೋಪಿತರಿಂದ 51 ಸಾವಿರ ರೂ. ಮೌಲ್ಯದ 1 ಕೆಜಿ 361 ಗ್ರಾಂ ತೂಕದ ಒಣ ಗಾಂಜಾ, ದ್ವಿ ಚಕ್ರ ವಾಹನ, 800 ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ದ ಹಳೇನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮುಂದುವರಿದ ಕಾರ್ಯಾಚರಣೆ : 99 ಪ್ರಕರಣ ದಾಖಲು
ಶಿವಮೊಗ್ಗ, ಸೆ. 5: ಜಿಲ್ಲೆಯ ವಿವಿಧೆಡೆ ಪೊಲೀಸರು ಏರಿಯಾ ಡಾಮಿನೇಷನ್ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಸೆ. 4 ರ ರಾತ್ರಿ ನಿರ್ಜನ ಪ್ರದೇಶಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪದ ಮೇರೆಗೆ 99 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯ ಬುದ್ಧನಗರ, ವಿದ್ಯಾನಗರ, ಶೇಷಾದ್ರಿಪುರಂ, ಜೆ ಪಿ ನಗರ, ಶಿವಮೊಗ್ಗ-ಬಿ ಉಪ ವಿಭಾಗ ವ್ಯಾಪ್ತಿಯ ಸಾಗರ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪದ ಹತ್ತಿರ, ಚಾಲುಕ್ಯ ಬಾರ್, ಉಷಾ ಸರ್ಕಲ್, ರವೀಂದ್ರ ನಗರ, ಕುಂಸಿಯ ಚೋರಡಿ,

ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ವಿಜಯನಗರ, ಎಕಿನ್ಸಾ ಕಾಲೋನಿ, ಉಜನಿಪುರ, ಹೊಳೆಹೊನ್ನೂರಿನ ಭಗೀರಥ ಸರ್ಕಲ್, ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ಗೋಪಾಲಗೌಡ ನಗರ ಮತ್ತು ಆನಂದಪುರದ ಭೋವಿ ಕಾಲೋನಿಯ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ವಶಕ್ಕೆ ಪಡೆದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರ ಪೂರ್ವಾಪರಗಳನ್ನು ಪರಿಶೀಲಿಸಿದ್ದಾರೆ. ಒಟ್ಟಾರೆ 84 ಲಘು ಪ್ರಕರಣ, ಐಎಂವಿ ಕಾಯ್ದೆಯಡಿ 8 ಹಾಗೂ ಕೋಟ್ಪಾ ಕಾಯ್ದೆಯಡಿ 6 ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.
ಹಾಗೆಯೇ ಓರ್ವನನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈತನ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.