
ಶಿವಮೊಗ್ಗ : ಲಕ್ಷಾಂತರ ರೂ. ಮೌಲ್ಯದ ಅಕ್ಕಿ ಪ್ಯಾಕೇಟ್ ಕಳವು ಪ್ರಕರಣ – ಇಬ್ಬರ ಬಂಧನ!
ಶಿವಮೊಗ್ಗ, ಸೆ. 9: ಲಕ್ಷಾಂತರ ರೂ. ಮೌಲ್ಯದ ಅಕ್ಕಿ ಪ್ಯಾಕೇಟ್ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ ಘಟನೆ ನಡೆದಿದೆ.
ಶಿವಮೊಗ್ಗದ ಮೇಲಿನ ತುಂಗಾನಗರದ ನಿವಾಸಿ ಕುಮಾರ್ ಕೆ (36) ಹಾಗೂ ಅಣ್ಣಾನಗರದ ನಿವಾಸಿ ಜಯಣ್ಣ (40) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಇವರಿಂದ 1.7 ಲಕ್ಷ ರೂ. ಮೌಲ್ಯದ ತಲಾ 26 ಕೆಜಿ ತೂಕದ 77 ಚೀಲ ಅಕ್ಕಿ ಪ್ಯಾಕೇಟ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಪ್ಯಾಸೆಂಜರ್ ಆಟೋವನ್ನು ಪೊಲೀಶರು ವಶಕ್ಕೆ ಪಡೆದುಕೊಂಡಿದ್ದಾರೆ.

ಸೆ. 4 ರಂದು ಎಪಿಎಂಸಿಯಲ್ಲಿರುವ ಎನ್.ಬಿ.ಎಂ ಎಂಟರ್ ಪ್ರೈಸಸ್ ನಲ್ಲಿನ ಮಳಿಗೆಯಲ್ಲಿದ್ದ ಅಕ್ಕಿ ಪ್ಯಾಕೇಟ್ ಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಮಳಿಗೆ ಮಾಲೀಕರು ವಿನೋಬನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರೊಬೇಷನರಿ ಐಪಿಎಸ್ ಅಧಿಕಾರಿ ಬಿಂದುಮಣಿ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಬಿ.ಸಿ.ಸುನೀಲ್, ಸಿಬ್ಬಂದಿಗಳಾದ ಸಿಪಿಸಿ ರಾಜು, ಚಂದ್ರಾನಾಯ್ಕ್, ಮಲ್ಲಪ್ಪ ಮತ್ತು ಅರುಣ್ ಕುಮಾರ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊರವಲಯದ ಪ್ರದೇಶಗಳಲ್ಲಿ ಮುಂದುವರಿದ ಪೊಲೀಸರ ವಿಶೇಷ ಗಸ್ತು ಕಾರ್ಯಾಚರಣೆ!
ಶಿವಮೊಗ್ಗ, ಸೆ. 9: ಜಿಲ್ಲೆಯ ವಿವಿಧೆಡೆ ಹೊರವಲಯ ಹಾಗೂ ನಿರ್ಜನ ಪ್ರದೇಶಗಳಲ್ಲಿ, ಕಳೆದ ಕೆಲ ದಿನಗಳಿಂದ ಪೊಲೀಸರು ನಡೆಸುತ್ತಿರುವ ವಿಶೇಷ ಗಸ್ತು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಸೆ. 8 ರ ರಾತ್ರಿ ಶಿವಮೊಗ್ಗ ವ್ಯಾಪ್ತಿಯ ಲಷ್ಕರ್ ಮೊಹಲ್ಲ, ಅಶೋಕ ರಸ್ತೆ, ಎಸ್.ಪಿ.ಎಂ ರಸ್ತೆ, ಗಾಂಧಿನಗರ, ವೆಂಕಟೇಶ್ ನಗರ, ರಾಜೇಂದ್ರ ನಗರ, ಭದ್ರಾವತಿ ವ್ಯಾಪ್ತಿಯ ತರೀಕೆರೆ ರಸ್ತೆ, ನೆಹರು ನಗರ, ಸರ್ ಎಂವಿ ಕಾಲೇಜು ನ್ಯೂಟೌನ್,

ಶಿಕಾರಿಪುರ ವ್ಯಾಪ್ತಿಯ ಶಿರಾಳಕೊಪ್ಪ ಬಸ್ ಸ್ಟಾಂಡ್, ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ಇಂಡಸ್ಟ್ರಿಯಲ್ ಏರಿಯಾ, ಗುಡ್ಡೇಕೇರಿ, ಇಕ್ಕೇರಿ ವೃತ್ತದದಲ್ಲಿ ಏರಿಯಾ ಡಾಮಿನೇಷನ್ ವಿಶೇಷ ಗಸ್ತು ಕಾರ್ಯಾಚರಣೆ ಮಾಡಿದ್ದಾರೆ.
ಈ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಹಾಗೂ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅವರುಗಳ ಪೂರ್ವಾಪರ ಸಂಗ್ರಹಿಸಿದ್ದಾರೆ. 63 ಲಘು ಪ್ರಕರಣ ದಾಖಲಿಸಿದ್ಧಾರೆ. ಐಎಂವಿ ಕಾಯ್ದೆಯಡಿ 13 ಹಾಗೂ ಕೋಟ್ಪಾ ಕಾಯ್ದೆಯಡಿ 2 ಪ್ರಕರಣ ದಾಖಲಿಸಿದ್ದಾರೆ.