
ಇದೆಂಥಾ ಸ್ಮಾರ್ಟ್ ಸಿಟಿ ಕೆಲಸ : ನಾಗರೀಕರ ಅಮೂಲ್ಯ ತೆರಿಗೆ ಹಣದ ದುಂದು ವ್ಯರ್ಥ..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಸೆ. 12: ‘ಸ್ಮಾರ್ಟ್ ಯೋಜನೆಗೆ ಶಿವಮೊಗ್ಗ ಆಯ್ಕೆಯಾದಾಗ, ಸಿಂಗಾಪೂರದಂತೆ ನಗರ ನಳನಳಿಸಲಿದೆ… ಇಡೀ ನಗರದ ಸಂಪೂರ್ಣ ಚಿತ್ರಣವೇ ಬದಲಾಗಲಿದೆ..!’ ಎಂದೆಲ್ಲ ಆಡಳಿತಗಾರರು ನಾಗರೀಕರಿಗೆ ಬಣ್ಣ ಬಣ್ಣದ ಕಥೆ ಹೇಳಿದ್ದರು..!
ಆದರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳು ಆರಂಭಗೊಂಡ ನಂತರ, ಯೋಜನೆ ಬಗ್ಗೆ ನಾಗರೀಕರಲ್ಲಿದ್ದ ಅಭಿಪ್ರಾಯವೇ ಬದಲಾಗಲಾರಂಭಿಸಿತು. ಹಲವೆಡೆ ನಡೆದ ಕಳಪೆ ಕಾಮಗಾರಿ, ಅಸಮರ್ಪಕ ಮೇಲ್ವಿಚಾರಣೆ, ಆಮೆವೇಗ, ಬೇಕಾಬಿಟ್ಟಿ ಅನುಷ್ಠಾನ ಸಾಲುಸಾಲು ಲೋಪದೋಷಗಳು ನಾಗರೀಕರನ್ನು ಅಕ್ಷರಶಃ ಹೈರಾಣಾಗುವಂತೆ ಮಾಡಿತ್ತು!

ಮತ್ತೇ ಕಾಮಗಾರಿ!: ಸಾವಿರ ಕೋಟಿ ರೂ. ವೆಚ್ಚದಲ್ಲಿ ನಗರದ ಹಲವೆಡೆ ಹತ್ತು ಹಲವು ಕಾಮಗಾರಿಗಳನ್ನು, ಸ್ಮಾರ್ಟ್ ಸಿಟಿ ಯೋಜನೆ ಅಡಿ ನಡೆಸಲಾಗಿದೆ. ಆದರೆ ಕೆಲ ತಿಂಗಳುಗಳಲ್ಲಿಯೇ ಕಾಮಗಾರಿಗಳ ನಿಜ ಬಣ್ಣ ಬಯಲಾರಂಭಿಸಿದೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ, ಗೋಪಿ ವೃತ್ತ ಸುತ್ತಲಿನ ಫುಟ್’ಪಾತ್ ಗಳಿಗೆ ಅಳವಡಿಸಿದ್ದ ಅಲಂಕಾರಿಕ ಕಲ್ಲಿನ ರೇಲಿಂಗ್ ಸಾಕ್ಷಿಯಾಗಿದೆ.
ಸರ್ಕಲ್ ನ ಅಂದು ಹೆಚ್ಚಿಸಲು ಕಲ್ಲಿನ ರೇಲಿಂಗ್ ಕಾಮಗಾರಿ ನಡೆಸಲಾಗಿತ್ತು. ಲಕ್ಷ ಲಕ್ಷ ರೂ. ವೆಚ್ಚ ಮಾಡಲಾಗಿತ್ತು. ಆದರೆ ಕಲ್ಲಿನ ರೇಲಿಂಗ್ ಗಳು ಅಲುಗಾಡಲಾರಂಭಿಸಿದ್ದವು. ಅಪಾಯಕಾರಿ ಸ್ಥಿತಿಯಲ್ಲಿದ್ದವು. ಕೆಲವೆಡೆ ಉರುಳಿ ಬಿದ್ದು ಪುಡಿಯಾಗಿದ್ದವು!

ಇದೀಗ ವೃತ್ತದ ಕಸ್ತೂರಿ ಬಾ ಕಾಲೇಜ್ ರಸ್ತೆಯ ಪ್ರವೇಶ ದ್ವಾರ ಸಮೀಪದಲ್ಲಿಯೂ ಕಲ್ಲಿನ ರೇಲಿಂಗ್ ಗಳ ಅಪಾಯಕಾರಿ ಸ್ಥಿತಿಯಲ್ಲಿದ್ದವು. ಈ ಹಿನ್ನೆಲೆಯಲ್ಲಿ ಸೋಮವಾರ ಅಲುಗಾಡುತ್ತಿದ್ದ ಕಲ್ಲುಗಳನ್ನು ಕೀಳಲಾಗಿದೆ. ಮತ್ತೇ ಅಳವಡಿಸುವ ಕಾರ್ಯವನ್ನು ಸ್ಮಾರ್ಟ್ ಸಿಟಿ ಆಡಳಿತ ನಡೆಸಲಾರಂಭಿಸಿದೆ.

‘ಸ್ಮಾರ್ಟ್ ಸಿಟಿಯಲ್ಲಿ ಸಾಲುಸಾಲು ಎಂಜಿನಿಯರ್ ಗಳಿದ್ದಾರೆ. ಕಾಮಗಾರಿ ಅನುಷ್ಠಾನದ ವೇಳೆ ಲೋಪ ಗಮನಿಸಿ ಸರಿಪಡಿಸುವ ಕಾರ್ಯ ನಡೆಸಲು ಸಾಧ್ಯವಾಗಲಿಲ್ಲವೇಕೆ? ಅಲಂಕಾರದ ನೆಪದಲ್ಲಿ ನಾಗರೀಕರ ಅಮೂಲ್ಯ ತೆರಿಗೆ ಹಣದ ಅನಾವಶ್ಯಕ ದುಂದು ವೆಚ್ಚ ಮಾಡಲಾಗಿದೆ. ಇದು ಬೇಸರದ ಸಂಗತಿಯಾಗಿದೆ’ ಎಂದು ಸ್ಥಳೀಯ ವರ್ತಕರು ದೂರುತ್ತಾರೆ.
ಅಲಂಕಾರಿಕ ಕಾಮಗಾರಿಯ ಅಗತ್ಯವೇ ಇರಲಿಲ್ಲ : ಕೆ.ವಿ.ವಸಂತಕುಮಾರ್

*** ‘ಗೋಪಿ ವೃತ್ತದಲ್ಲಿ ಅಲಂಕಾರಿಕ ಕಲ್ಲಿನ ರೇಲಿಂಗ್ ಅಗತ್ಯವೇ ಇರಲಿಲ್ಲ. ನಾಗರೀಕರ ತೆರಿಗೆ ಹಣದ ಅನಗತ್ಯ ದುಂದುವೆಚ್ಚ ಮಾಡಲಾಗಿದೆ. ಕಾಮಗಾರಿಯ ನಂತರ ಹಲವೆಡೆ ಕಲ್ಲಿನ ರೇಲಿಂಗ್ ಗಳು ಅಲುಗಾಡುತ್ತಿದ್ದವು. ಅಸಮರ್ಪಕ ಅನುಷ್ಠಾನಕ್ಕೆ ಸಾಕ್ಷಿಯಾಗಿದೆ’ ಎಂದು ನಾಗರೀಕರ ಹಿತರಕ್ಷಣಾ ವೇದಿಕೆಯ ಮುಖಂಡ ಕೆ.ವಿ.ವಸಂತಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.