
ಭದ್ರಾವತಿ : ನಾಲ್ಕು ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿ ಅರೆಸ್ಟ್!
ಭದ್ರಾವತಿ, ಸೆ. 15: ಸರಣಿ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಯುವಕನೋರ್ವನನ್ನು ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಭದ್ರಾವತಿ ತಾಲೂಕು ಜೇಡಿಕಟ್ಟೆ ಗ್ರಾಮದ ನಿವಾಸಿ ಪ್ರಜ್ವಲ್ (20) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ 34,400 ನಗದು, 18,665 ರೂ. ಮೌಲ್ಯದ ತಂಬಾಕು ಉತ್ಪನ್ನ, ಕೃತ್ಯಕ್ಕೆ ಬಳಸಿದ್ದ ದ್ವಿ ಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಸೆ. 10 ರಂದು ಜೇಡಿಕಟ್ಟೆಯ ಎರಡು ಹೋಟೆಲ್, ರಾಜಪ್ಪ ಲೇಔಟ್ ನಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್ ಹಾಗೂ ಮಾಚೇನಹಳ್ಳಿ ಬಳಿಯಿರುವ ಭವಾನಿ ಸ್ಟೀಲ್ ಇಂಡಸ್ಟ್ರೀಸ್ ಕಚೇರಿ ಸೇರಿದಂತೆ ನಾಲ್ಕು ಕಡೆ ಕಳವು ಕೃತ್ಯಗಳು ನಡೆದಿದ್ದವು. ನಗದು ಮತ್ತೀತರ ವಸ್ತುಗಳನ್ನು ಕಳವು ಮಾಡಲಾಗಿತ್ತು.
ಡಿವೈಎಸ್ಪಿ ನಾಗರಾಜ್ ಕೆ.ಆರ್. ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಶ್ರೀಶೈಲಕುಮಾರ್ ಜೆ, ಸಬ್ ಇನ್ಸ್’ಪೆಕ್ಟರ್ ಗಳಾದ ರಮೇಶ್, ಭಾರತಿ, ಸಿಬ್ಬಂದಿಗಳಾದ ರಾಘವೇಂದ್ರ, ನವೀನ್ ಟಿ, ಪ್ರವೀಣ್ ಕುಮಾರ್, ತೀರ್ಥಲಿಂಗಪ್ಪ, ಅಶ್ವಿನಿರವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.