
ಶಿಕಾರಿಪುರ ಪೊಲೀಸರಿಂದ 101 ರೌಡಿ ಶೀಟರ್ ಗಳ ಪರೇಡ್ : ದುಷ್ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ!
ಶಿಕಾರಿಪುರ, ಸೆ. 15: ಮುಂಬರುವ ಗೌರಿಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ, ಜಿಲ್ಲೆಯಾದ್ಯಂತ ಶಾಂತಿ-ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ. ಪೊಲೀಸರು ರೌಡಿ ಶೀಟರ್ ಗಳ ಪರೇಡ್ ನಡೆಸಿ, ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ಈ ನಡುವೆ ಶಿಕಾರಿಪುರ ಪೊಲೀಸ್ ಉಪ ವಿಭಾಗದ ರೌಡಿ ಶೀಟರ್ ಗಳ ಪರೇಡ್ ನ್ನು ಸೆ. 14 ರಂದು ಶಿಕಾರಿಪುರ ಪಟ್ಟಣದಲ್ಲಿ ನಡೆಸಲಾಗಿದೆ. ಈ ವೇಳೆ ಡಿವೈಎಸ್ಪಿ ಶಿವಾನಂದ ಮದರಖಂಡಿ, ಶಿಕಾರಿಪುರ ವೃತ್ತದ ಸಿಪಿಐ ರುದ್ರೇಶ್, ಸೊರಬ ವೃತ್ತದ ಸಿಪಿಐ ರಾಜಶೇಖರ್ ಹಾಗೂ ಆಯಾ ಪೊಲೀಸ್ ಠಾಣೆಗಳ ಪಿಎಸ್ಐಗಳು ಉಪಸ್ಥಿತರಿದ್ದರು.
ಶಿಕಾರಿಪುರ ಪೊಲೀಸ್ ಉಪ ವಿಭಾಗ ವ್ಯಾಪ್ತಿಯ 101 ರೌಡಿ ಶೀಟರ್ ಗಳು ಪರೇಡ್ ನಲ್ಲಿ ಭಾಗವಹಿಸಿದ್ದರು. ಈ ಹಿಂದೆ ದಾಖಲಾಗಿದ್ದ ಪ್ರಕರಣಗಳು, ಪ್ರಸ್ತುತ ಜೀವನ ನಿರ್ವಹಣೆಗೆ ಮಾಡುತ್ತಿರುವ ಕೆಲಸಕಾರ್ಯ, ಇತ್ತೀಚೆಗೆ ಭಾಗಿಯಾದ ದೃಷ್ಕೃತ್ಯಗಳ ಕುರಿತಂತೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಮುಂಬರುವ ಗೌರಿಗಣೇಶ್ ಹಾಗೂ ಈದ್ ಮಿಲಾದ್ ಹಬ್ಬದ ವೇಳೆ ಯಾವುದೇ ಕಾನೂನುಬಾಹಿರ ದುಷ್ಕೃತ್ಯಗಳಲ್ಲಿ ಭಾಗಿಯಾಗಬಾರದು. ದುಷ್ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ರೌಡಿ ಶೀಟರ್ ಗಳಿಗೆ ನೀಡಿದ್ದಾರೆ.