
ವೈವಿಧ್ಯಮಯ ಗಣೇಶಮೂರ್ತಿಗಳ ಮಾರಾಟ : ಪರಿಸರ ಸ್ನೇಹಿ ವಿಗ್ರಹಗಳಿಗೆ ಸಖತ್ ಡಿಮ್ಯಾಂಡ್!
ಶಿವಮೊಗ್ಗ, ಸೆ. 17: ಗೌರಿ-ಗಣಪತಿ ವಿಗ್ರಹಗಳ ಮಾರಾಟ ಬಿರುಸುಗೊಂಡಿದೆ. ಬಣ್ಣದ ವಿಗ್ರಹಗಳ ಜೊತೆಗೆ, ಪರಿಸರ ಸ್ನೇಹಿ ವಿಗ್ರಹಗಳಿಗೂ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಗ್ರಹ ತಯಾರಕರು ಹಾಗೂ ವ್ಯಾಪಾರಿಗಳು, ಪರಿಸರ ಸ್ನೇಹಿ ವಿಗ್ರಹಗಳ ಮಾರಾಟದತ್ತಲೂ ಚಿತ್ತ ಹರಿಸುತ್ತಿದ್ದಾರೆ.

ಪುಟ್ಟ ಮೂರ್ತಿಯಿಂದಿಡಿದು ದೊಡ್ಡ ವಿಗ್ರಹಗಳವರೆಗೆ ಹತ್ತಾರು ವೈವಿಧ್ಯಮಯ ವಿಗ್ರಹಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಪ್ರಸ್ತುತ ವರ್ಷ ಗಣೇಶ ವಿಗ್ರಹಗಳಿಗೆ ಬೇಡಿಕೆ ಕಡಿಮೆಯಿದೆ. ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ಕಂಡುಬರುತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ. ಇದು ಸಹಜವಾಗಿಯೇ ವಿಗ್ರಹ ತಯಾರಕರು ಹಾಗೂ ವ್ಯಾಪಾರಿಗಳನ್ನು ಚಿಂತಾಕ್ರಾಂತರನ್ನಾಗಿಸಿದೆ.

ಈ ಹಿಂದಿನ ವರ್ಷಗಳಲ್ಲಿ ಹಬ್ಬಕ್ಕೆ ಇನ್ನೂ ಕೆಲ ವಾರಗಳಿರುವಂತೆಯೇ, ಗಣೇಶ ವಿಗ್ರಹಗಳಿಗೆ ಡಿಮ್ಯಾಂಡ್ ಕಂಡುಬರುತ್ತಿತ್ತು. ಅಡ್ವಾನ್ಸ್ ಬುಕ್ ಮಾಡುತ್ತಿದ್ದರು. ಆದರೆ ಕೊರೊನಾದ ನಂತರ ದೊಡ್ಡ ಗಾತ್ರದ ವಿಗ್ರಹಗಳಿಗೆ ಅಷ್ಟೊಂದು ಬೇಡಿಕೆ ಕಂಡುಬರುತ್ತಿಲ್ಲ ಎಂದು ಕೆಲ ವಿಗ್ರಹ ತಯಾರಕರು ಅಭಿಪ್ರಾಯಪಡುತ್ತಾರೆ.

ಮೂರ್ತಿ ತಯಾರಿಕೆಗೆ ಬಳಸುವ ಮಣ್ಣು, ಬಣ್ಣ ಸೇರಿದಂತೆ ಇತರೆ ಕಚ್ಚಾ ಸಾಮಗ್ರಿ ವೆಚ್ಚ ಹೆಚ್ಚಾಗಿದೆ. ತಯಾರಿಕೆಗೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಇದರಿಂದ ವಿಗ್ರಹಗಳ ಬೆಲೆಯಲ್ಲಿಯೂ ಸಹಜವಾಗೆಯೇ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಸದ್ಯ ವ್ಯಾಪಾರ ಕಡಿಮೆಯಿದೆ. ಹಬ್ಬದ ದಿನದಂದು ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದೆವೆ ಎಂದು ಗಣೇಶಮೂರ್ತಿ ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.