ಹೋರಿ ಬೆದರಿಸುವ ಸ್ಪರ್ಧೆ : ಪಶುಪಾಲನ ಇಲಾಖೆಯಿಂದ ಅನುಮತಿ ಪಡೆಯಲು ಶಿವಮೊಗ್ಗ ಡಿಸಿ ಸೂಚನೆ!

ಹೋರಿ ಬೆದರಿಸುವ ಸ್ಪರ್ಧೆ : ಅನುಮತಿ ಪಡೆಯಲು ಶಿವಮೊಗ್ಗ ಡಿಸಿ ಸೂಚನೆ!

ಶಿವಮೊಗ್ಗ, ಸೆ. 20: ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸುವವರು ಮುಂಚಿತವಾಗಿಯೇ, ಅನುಮತಿ ಪಡೆಯಬೇಕು. ಅಧಿಕಾರಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಪಡೆದು,15 ದಿನ ಮುಂಚಿತವಾಗಿ ಅನುಮತಿ ನೀಡಬೇಕು ಎಂದು ಡಿಸಿ ಡಾ.ಆರ್.ಸೆಲ್ವಮಣಿ ಅವರು ಸೂಚಿಸಿದ್ದಾರೆ.

ಶಿವಮೊಗ್ಗ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಲಸಿಕಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸೆ. 19 ರಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೆಟ್ ಶಾಪ್: ಪ್ರ್ರಿವೆನ್ಶನ್ ಆಫ್ ಕ್ರುಯಲ್ಟಿ ಟು ಅನಿಮಲ್ಸ್ (ಪೆಟ್ ಶಾಪ್) ರೂಲ್ಸ್ 2018 ರ ಪ್ರಕಾರ ಜಿಲ್ಲೆಯ ಪೆಟ್ ಶಾಪ್ ಮಾಲೀಕರು ತಾವು ಉದ್ದಿಮೆ ಪರವಾನಗಿ ತೆಗೆದುಕೊಳ್ಳುವ ಮುನ್ನ ರೂ.5000 ಶುಲ್ಕ ನೀಡಿ ಜಿಲ್ಲಾ ಪ್ರಾಣಿ ದಯಾ ಸಂಘದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು.

ನೋಂದಣಿ ಮಾಡಿಸಿಕೊಳ್ಳದೇ ಪೆಟ್ ಶಾಪ್ ವಹಿವಾಟು ಮಾಡಿದರೆ ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು. ಪ್ರಸ್ತುತ ನೋಂದಣಿಗೆ 15 ಅರ್ಜಿಗಳು ಬಂದಿದ್ದು, ಈ ಸಂಬಂಧ ಸಮಿತಿ ರಚಿಸಿ ನಿಯಮಾನುಸಾರ ಅನುಮೋದನೆ ನೀಡುವಂತೆ ಪಶುಪಾಲನಾ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ಡಿಸಿ ನೀಡಿದ್ದಾರೆ.

ಲಸಿಕೆ : ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾದ ಕಾಲುಬಾಯಿ ರೋಗ ನಿಯಂತ್ರಣಕ್ಕೆ ಆಕಳು, ಎಮ್ಮೆ ಮತ್ತು ಕರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ರೋಗ ಲಸಿಕೆ ಹಾಕಿಸಬೇಕು ಎಂದರು.

ರೈತರಿಗೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡುವ ಕಾಲುಬಾಯಿ ರೋಗ ನಿಯಂತ್ರಿಸಿ, ನಿರ್ಮೂಲನೆ ಮಾಡಲು ಪ್ರತಿ 6ತಿಂಗಳಿಗೊಮ್ಮೆ ಈ ರೋಗದ ವಿರುದ್ದ ಲಸಿಕೆ ಹಾಕಿಸುವುದು ಕಡ್ಡಾಯವಾಗಿದೆ. ಲಸಿಕೆದಾರರು ನಿಮ್ಮ ಗ್ರಾಮಕ್ಕೆ, ಮನೆಬಾಗಿಲಿಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ಹಾಕುವರು. ಯಾರೂ ಕೂಡ ತಮ್ಮ ಎಮ್ಮೆ, ದನ ಕರುಗಳು ಲಸಿಕೆಯಿಂದ ವಂಚಿತರಾಗದಂತೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಜಿಲ್ಲೆಯಲ್ಲಿ ಶೇ.100 ಲಸಿಕಾ ಪ್ರಗತಿ ಸಾಧಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಹೊಸನಗರ, ಸೊರಬ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಕೃತಕ ಗರ್ಭಧಾರಣೆ ಪ್ರಗತಿ ಸ್ವಲ್ಪ ಕಡಿಮೆಯಿದ್ದು, ಇದನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಪಶುಪಾಲನಾ ಮತ್ತು ಪಶುಸೇವಾ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1586 ಗ್ರಾಮಗಳಿವೆ. 4 ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ 6,39,250 ಡೋಸ್ ಲಸಿಕೆ ನೀಡಲಾಗಿದೆ. ಒಟ್ಟು 653573 ಸಿರಿಂಜ್‍ಗಳು ಲಭ್ಯವಿದ್ದು ಸರಬರಾಜಾದ ಲಸಿಕೆ ಶೇಖರಿಸಿಡಲು 4 ವಾಕ್ ಇನ್ ಕೂಲರ್ ಮತ್ತು 23 ಐಸ್‍ಲೈನ್ ರೆಫ್ರಿಜರೇಟರ್‍ಗಳಿವೆ ಹಾಗೂ ಒಟ್ಟು 467 ಲಸಿಕಾದಾರರು ಇದ್ದಾರೆ.

ಕಳೆದ 3 ನೇ ಲಸಿಕಾ ಅಭಿಯಾನದಲ್ಲಿ 554010 ಜಾನುವಾರುಗಳಿಗೆ ಲಸಿಕೆ ನೀಡುವ ಮೂಲಕ ಜಿಲ್ಲೆಯಲ್ಲಿ ಶೇ.95 ಪ್ರಗತಿ ಸಾಧಿಸಲಾಗಿತ್ತು. ಲಸಿಕಾ ಅಭಿಯಾನದ ಮಾಹಿತಿ ವೆಬ್‍ಸೈಟ್ www.ahvs.kar.nic.in ಇಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶಪಾಲನಾ ಇಲಾಖೆಯ ಪಶು ಆಸ್ಪತ್ರೆ ಅಥವಾ ಹಾಲು ಉತ್ಪಾದಕರ ಸಹಕಾ ಸಂಘಗಳನ್ನು ಸಂಪರ್ಕಿಸಬಹುದೆಂದರು.

ಸಭೆಯಲ್ಲಿ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಪೊಸ್ಟರ್‍ನ್ನು ಡಿಸಿ ಮತ್ತು ಇತರೆ ಅಧಿಕಾರಿಗಳು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಪಶುಪಾಲನಾ ಮತ್ತು ಪಶುಸೇವಾ ಇಲಾಖೆಯ ವಿವಿಧ ತಾಲ್ಲೂಕುಗಳ ಸಹಾಯಕ ನಿರ್ದೇಶಕರು, ಪಶುವೈದ್ಯರು ಹಾಜರಿದ್ದರು.

ಭದ್ರಾ ಡ್ಯಾಂನಿಂದ ನಾಲೆಗಳಿಗೆ ನೀರು ಹರಿವು ಸ್ಥಗಿತಕ್ಕೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ Previous post ಭದ್ರಾ ಡ್ಯಾಂನಿಂದ ನಾಲೆಗಳಿಗೆ ನೀರು ಹರಿವು ಸ್ಥಗಿತಕ್ಕೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ
ಕಾವೇರಿ ಜಲ ವಿವಾದ : ಪ್ರಧಾನಿ ಮಧ್ಯ ಪ್ರವೇಶಕ್ಕೆ ಸಿಎಂ ಸಿದ್ದರಾಮಯ್ಯ ಮನವಿ Next post ಕಾವೇರಿ ಜಲ ವಿವಾದ : ಪ್ರಧಾನಿ ಮಧ್ಯ ಪ್ರವೇಶಕ್ಕೆ ಸಿಎಂ ಸಿದ್ದರಾಮಯ್ಯ ಮನವಿ