ಚಿಕ್ಕಬಳ್ಳಾಪುರ – ರಸ್ತೆ ಬದಿ ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿ : 13 ಮಂದಿ ಸಾವು!
ಚಿಕ್ಕಬಳ್ಳಾಪುರ, ಅ. 26: ರಸ್ತೆ ಬದಿ ನಿಂತಿದ್ದ ಸಿಮೆಂಟ್ ಬಲ್ಕರ್ ಲಾರಿಗೆ ಹಿಂಬದಿಯಿಂದ ಟಾಟಾ ಸುಮೋ ವಾಹನ ಡಿಕ್ಕಿ ಹೊಡೆದ ಪರಿಣಾಮ, ಟಾಟಾ ಸುಮೋದಲ್ಲಿದ್ದ 13 ಮಂದಿ ಮೃತಪಟ್ಟಿರುವ ಭೀಕರ ಘಟನೆ ಚಿಕ್ಕಬಳ್ಳಾಪುರದ ಚಿತ್ರಾವತಿ ಸಮೀಪದ ರಾಷ್ಟ್ರೀಯ ಹೆದ್ದಾರಿ – 44 ರಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಅಪಘಾತದಲ್ಲಿ 8 ಮಂದಿ ಪುರುಷರು, ನಾಲ್ವರು ಮಹಿಳೆಯರು ಹಾಗೂ 1 ಗಂಡು ಮಗು ಮೃತಪಟ್ಟಿದೆ. ಮೃತರ ಪೈಕಿ ದೊಡ್ಡಬಳ್ಳಾಪುರದ ಅರುಣ (40), ಇವರ ಮಗ ಹೃತ್ವಿಕ್ ಯತಿನ್ (6), ಬೆಂಗಳೂರಿನ ಬಸವೇಶ್ವರ ನಗರದ ಸುಬ್ಬಮ್ಮ, ಆಂಧ್ರಪ್ರದೇಶದ ಕೊತ್ತಚೆರಮ ನಿವಾಸಿ ಪರುಮಾಳ್, ಕಾವಲ್ ಭೈರಸಂದ್ರದ ನರಸಿಂಹಮೂರ್ತಿ, ಚಾಲಕ ನರಸಿಂಹಪ್ಪ ಎಂದು ಗುರುತಿಸಲಾಗಿದೆ. ಮೃತರಲ್ಲಿ ಹಲವರ ಹೆಸರು, ವಿಳಾಸ ಇನ್ನಷ್ಟೆ ತಿಳಿದುಬರಬೇಕಾಗಿದೆ.
ಮೃತರೆಲ್ಲರು ಕೂಲಿಕಾರ್ಮಿಕರಾಗಿದ್ದಾರೆ. ಇವರೆಲ್ಲ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳುತ್ತಿದ್ದರು. ಆಂಧ್ರದ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಾಟಾ ಸುಮೋದಲ್ಲಿ ಬಾಗೇಪಲ್ಲಿ – ಚಿಕ್ಕಬಳ್ಳಾಪುರ ನಡುವಿನ ವಿವಿಧ ಪ್ರದೇಶಗಳಲ್ಲಿ ಹತ್ತಿಕೊಂಡಿದ್ದರು ಎಂದು ಹೇಳಲಾಗಿದೆ.
ಅವಘಡದಲ್ಲಿ 12 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ದಟ್ಟ ಮಂಜು ಕವಿದಿದ್ದರಿಂದ ಟಾಟಾ ಸುಮೋ ವಾಹನ ಚಾಲಕನಿಗೆ ರಸ್ತೆ ಬದಿ ನಿಂತಿದ್ದ ಲಾರಿ ಕಾಣದೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗಿದೆ.
ಪರಿಹಾರ ಘೋಷಣೆ : ಚಿಕ್ಕಬಳ್ಳಾಪುರದ ಚಿತ್ರಾವತಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ಎರಡು ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಕೋರಿರುವ ಮುಖ್ಯಮಂತ್ರಿಗಳು ಘಟನೆ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.