ಲೈಂಗಿಕ ದೌರ್ಜನ್ಯದಿಂದ ಬಾಲಕಿ ಆತ್ಮಹತ್ಯೆ ಪ್ರಕರಣ : 23 ರ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!
ಶಿವಮೊಗ್ಗ, ನ. 5: ಲೈಂಗಿಕ ದೌರ್ಜನ್ಯ ಎಸಗಿ ಅಪ್ರಾಪ್ತ ವಯಸ್ಸಿನ ಯುವತಿ ಆತ್ಮಹತ್ಯೆಗೆ ಕಾರಣಕರ್ತನಾದ ಯುವಕನಿಗೆ, 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಫಾಸ್ಟ್ ಟ್ರ್ಯಾಕ್ ವಿಶೇಷ ಕೋರ್ಟ್ (ಎಫ್.ಟಿ.ಎಸ್.ಸಿ – 1) ತೀರ್ಪು ನೀಡಿದೆ.
23 ವರ್ಷದ ಯುವಕನೇ ಜೈಲು ಶಿಕ್ಷೆಗೆ ಗುರಿಯಾದವನಾಗಿದ್ದಾನೆ. ಶಿಕ್ಷೆಯ ಜೊತೆಗೆ 1.25 ಲಕ್ಷ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.
ನ್ಯಾಯಾಧೀಶರಾದ ಲತಾ ಅವರು ನ. 4 ರಂದು ಈ ತೀರ್ಪು ನೀಡಿದ್ದಾರೆ. ಮೃತ ಬಾಲಕಿಯ ಕುಟುಂಬಕ್ಕೆ 17 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ ಹಾಗೂ ಮಮತ ಅವರು ವಾದ ಮಂಡಿಸಿದ್ದರು.
ಘಟನೆ ಹಿನ್ನೆಲೆ: 2020 ನೇ ಸಾಲಿನಲ್ಲಿ ಸದರಿ ಘಟನೆ ನಡೆದಿತ್ತು. ತೀರ್ಥಹಳ್ಳಿ ತಾಲೂಕು ಮೂಲದ ಯುವಕನ ಲೈಂಗಿಕ ದೌರ್ಜನ್ಯದಿಂದ ಬೇಸತ್ತು, 16 ವರ್ಷದ ಯುವತಿಯು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು. ಈ ಸಂಬಂಧ ಮೃತ ಬಾಲಕಿಯ ತಂದೆಯು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಕುರಿತಂತೆ ಹೊಸನಗರ ಸರ್ಕಲ್ ಇನ್ಸ್’ಪೆಕ್ಟರ್ ಆಗಿದ್ದ ಬಿ.ಸಿ.ಗಿರೀಶ್ ಅವರು ಪ್ರಕರಣದ ತನಿಖೆ ನಡೆಸಿದ್ದರು. ಯುವಕನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ (ಚಾರ್ಜ್ ಶೀಟ್) ದಾಖಲಿಸಿದ್ದರು.