ಶಿವಮೊಗ್ಗದಲ್ಲಿ ರೈಲ್ವೆ ಅಂಡರ್ ಪಾಸ್, ಸಾಗರದಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ 31 ಕೋಟಿ ರೂ. ಮಂಜೂರು
ಶಿವಮೊಗ್ಗ, ನ. 7: ಶಿವಮೊಗ್ಗ ನಗರದಲ್ಲಿ ರೈಲ್ವೆ ಅಂಡರ್ ಪಾಸ್ ಹಾಗೂ ಸಾಗರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ, ಒಟ್ಟಾರೆ 31 ಕೋಟಿ ರೂ. ಅನುದಾನ ಹಂಚಿಕೆ ಮಾಡಿ ಕೇಂದ್ರ ರೈಲ್ವೆ ಇಲಾಖೆ ಆದೇಶಿಸಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಈ ಕುರಿತಂತೆ ಮಂಗಳವಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಎಲ್.ಸಿ. ಗೇಟ್ ನಂಬರ್ 47 ರಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ 6 ಕೋಟಿ ರೂ.
ಹಾಗೂ ಸಾಗರ ತಾಲೂಕಿನ ಸೊರಬ ರಸ್ತೆಯಲ್ಲಿನ ರೈಲ್ವೆ ಎಲ್.ಸಿ. ಗೇಟ್ ಸಂಖ್ಯೆ 130 ರಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ 25 ಕೋಟಿ ರೂ. ಅನುದಾನವನ್ನು ಕೇಂದ್ರ ರೈಲ್ವೆ ಪ್ರಾಧಿಕಾರ ಮಂಜೂರು ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.
ಎರಡು ಸ್ಥಳಗಳಲ್ಲಿ ಶೀಘ್ರದಲ್ಲಿಯೇ ಕಾಮಗಾರಿ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು. ಯೋಜನೆಗಳಿಗೆ ಅನುಮತಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಸಂಸದರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.