
ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರದಲ್ಲಿ ಪೊಲೀಸರ ವಿಶೇಷ ಕಾರ್ಯಾಚರಣೆ : 248 ಕೇಸ್ ದಾಖಲು!
ಶಿವಮೊಗ್ಗ, ಡಿ. 8: ಶಿವಮೊಗ್ಗ, ಭದ್ರಾವತಿ, ಸಾಗರ ಹಾಗೂ ಶಿಕಾರಿಪುರದ ವಿವಿಧೆಡೆ ಗುರುವಾರ ಸಂಜೆ ಪೊಲೀಸರು ಏರಿಯಾ ಡಾಮಿನೇಷನ್ ವಿಶೇಷ ಗಸ್ತು ಕಾರ್ಯಾಚರಣೆ ನಡೆಸಿದ್ದಾರೆ.
ಶಿವಮೊಗ್ಗದ ಮಂಜುನಾಥ ಬಡಾವಣೆ, ಎಎ ಕಾಲೋನಿ, ರೈಲ್ವೆ ಸ್ಟೇಷನ್, ಸೋಮಿನಕೊಪ್ಪ, ಭದ್ರಾವತಿಯ ವಿದ್ಯಾ ಕಾಲೋನಿ, ತಮ್ಮಣ್ಣ ಕಾಲೋನಿ, ಸಾಗರದ ರಾಮನಗರ, ಇಕ್ಕೇರಿ ವೃತ್ತ, ಜೋಗ ಬಜಾರ್, ಯಡೇಹಳ್ಳಿ,
ಶಿಕಾರಿಪುರ ಪೊಲೀಸ್ ಉಪ ವಿಭಾಗ ವ್ಯಾಪ್ತಿಯ ಸೊರಬ ತಾಲೂಕಿನ ಆನವಟ್ಟಿ ಬಸ್ ನಿಲ್ದಾಣ, ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪಟ್ಟಣದ ಹೊರವಲಯದ ಪ್ರದೇಶಗಳಲ್ಲಿ ಆಯಾ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದವರು, ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ಪೂರ್ವಾಪರ ವಿಚಾರಣೆ ನಡೆಸಿ, ಮಾಹಿತಿ ಕಲೆ ಹಾಕಿದ್ದಾರೆ.
ಒಟ್ಟಾರೆ 203 ಲಘು ಪ್ರಕರಣ, ಮೋಟಾರು ವಾಹನ ಕಾಯ್ದೆಯಡಿ 35 ಹಾಗೂ ಕೋಟ್ಪಾ ಕಾಯ್ದೆಯಡಿಯಲ್ಲಿ 10 ಪ್ರಕರಣಗಳನ್ನು ದಾಖಲಿಸಿರುವುದಾಗಿ ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.