ಮಲ್ಲಾಪುರದಲ್ಲಿ ಚಿರತೆಗಳು : ಒಂದು ಬೋನಿಗೆ, ಮತ್ತೊಂದು ನಾಪತ್ತೆ!

ಶಿವಮೊಗ್ಗ, ಫೆ. 13: ಶಿವಮೊಗ್ಗ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಅರಣ್ಯ ಇಲಾಖೆಯಿಟ್ಟಿದ್ದ ಬೋನಿಗೆ ಚಿರತೆಯೊಂದು ಸೆರೆ ಸಿಕ್ಕಿರುವ ಘಟನೆ ನಡೆದಿದೆ.
ಕಳೆದ ಕೆಲ ದಿನಗಳಿಂದ ಮಲ್ಲಾಪುರ ಗ್ರಾಮದ ಸುತ್ತಮುತ್ತಲಿನ ಹೊಲಗದ್ದೆ, ತೋಟಗಳಲ್ಲಿ ಎರಡು ಚಿರತೆಗಳು ಓಡಾಡುತ್ತಿದ್ದವು. ಇದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಚಿರತೆಗಳ ಸೆರೆಗೆ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಆಯನೂರು ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಗಳು ಓಡಾಡುವ ಸ್ಥಳದಲ್ಲಿ ಬೋನೊಂದನ್ನು ಇರಿಸಿದ್ದರು. ಮುಂಜಾನೆ ಚಿರತೆ ಬೋನಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನಿನಲ್ಲಿ ಬಿದ್ದ ಚಿರತೆಯನ್ನು ತ್ಯಾವರೆಕೊಪ್ಪ ಹುಲಿ-ಸಿಂಹಾಧಾಮಕ್ಕೆ ಕೊಂಡೊಯ್ದಿದ್ದಾರೆ.
ಮತ್ತೊಂದು ಚಿರತೆ ಗ್ರಾಮದ ಸುತ್ತಮುತ್ತ ಸಂಚರಿಸುತ್ತಿದ್ದು, ಆ ಚಿರತೆಯ ಸೆರೆಗೂ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು. ಈ ಮೂಲಕ ಗ್ರಾಮಸ್ಥರಲ್ಲಿರುವ ಆತಂಕ ಹೋಗಲಾಡಿಸಬೇಕು ಎಂದು ಮುಖಂಡ ಬೋಜ್ಯಾನಾಯ್ಕ್ ಅವರು ಆಗ್ರಹಿಸಿದ್ದಾರೆ.

Previous post ಸಾವಿರಾರು ಭಕ್ತರಿಂದ ಮಾರಿಕಾಂಬೆ ದರ್ಶನ!
Next post ಡಿಎಸ್ಎಸ್ ನಿಂದ ಅನಿರ್ದಿಷ್ಟಾವದಿ ಅಹೋರಾತ್ರಿ ಧರಣಿ ಸತ್ಯಾಗ್ರಹ