
ಶಿವಮೊಗ್ಗ : ಬಲಿಯಾದ ಎರಡು ಅಮಾಯಕ ನಾಗರೀಕ ಜೀವಗಳು..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜ. 29: ಕಳೆದ 24 ಗಂಟೆಗಳ ಅವಧಿಯಲ್ಲಿ, ಶಿವಮೊಗ್ಗ ನಗರ ಹಾಗೂ ಹೊರವಲಯದ ಸಾರ್ವಜನಿಕ ಸ್ಥಳಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಬಾಲಕಿಯೋರ್ವಳು ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಆದರೆ ಇವರಿಬ್ಬರ ಸಾವು ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಆಡಳಿತದ ಲೋಪದ ಬಗ್ಗೆ ಆಕ್ರೋಶ ವ್ಯಕ್ತವಾಗುವಂತಾಗಿದ!
ಘಟನೆ – 1 : ನಗರದ ಹೊರವಲಯ ಮುದ್ದಿನಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಟ್ರೀ ಪಾರ್ಕ್ ನಲ್ಲಿ, ಸಿಮೆಂಟ್ ನಿಂದ ನಿರ್ಮಿಸಿದ್ದ ಜಿಂಕೆಯ ಕಲಾಕೃತಿ ಮರಿದು ಬಿದ್ದು ಬಾಲಕಿಯೋರ್ವಳು ಅಸುನೀಗಿದ ದಾರುಣ ಘಟನೆ ಭಾನುವಾರ ಸಂಜೆ ನಡೆದಿದೆ.
ಗಾಂಧಿ ಬಜಾರ್ ರಸ್ತೆಯ ನಿವಾಸಿ ಸಮೀಕ್ಷಾ (6) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ತಾಯಿ ಹಾಗೂ ಸಹೋದರಿಯೊಂದಿಗೆ ಟ್ರೀ ಪಾರ್ಕ್ ಗೆ ಬಾಲಕಿ ಆಗಮಿಸಿದ್ದಳು. ಈ ವೇಳೆ ಬಾಲಕಿಯು ಜಿಂಕೆ ಕಲಾಕೃತಿ ಮೇಲೆ ಕುಳಿತು ಆಟವಾಡುವಾಗ ಕಲಾಕೃತಿ ಮುರಿದು ಬಾಲಕಿ ಮೇಲೆ ಬಿದ್ದಿದೆ.
ಗಾಯಗೊಂಡಿದ್ದ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾಳೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ಗಾಯಗೊಂಡ ಬಾಲಕಿಯನ್ನು, ಘಟನಾ ಸ್ಥಳದಿಂದ ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬ ಕೂಡ ಆಗಿದೆ. ಸಕಾಲದಲ್ಲಿ ತಾಯಿಗೆ ನೆರವು ದೊರಕಿಲ್ಲ ಎಂಬ ಮಾಹಿತಿಗಳು ಕೇಳಿಬರಲಾರಂಭಿಸಿವೆ.
ಘಟನೆ – 2: ಚರಂಡಿ ಮೇಲಿನ ಸ್ಲ್ಯಾಬ್ (ಹೊದಿಕೆ) ಕುಸಿದು ಬಿದ್ದ ಪರಿಣಾಮ, ಅದರ ಮೇಲೆ ನಿಂತಿದ್ದ ವ್ಯಕ್ತಿಯೋರ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶಿವಮೊಗ್ಗದ ವಿನೋಬನಗರ ಬಡಾವಣೆ ವೀರಣ್ಣನ ಲೇಔಟ್ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.
ಬೊಮ್ಮನಕಟ್ಟೆ ನಿವಾಸಿ ಮುತ್ತಪ್ಪ (45) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮುತ್ತಪ್ಪ ಅವರು ಚರಂಡಿ ಸ್ಲ್ಯಾಬ್ ಮೇಲೆ ನಿಂತು ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಏಕಾಏಕಿ ಸ್ಲ್ಯಾಬ್ ಕುಸಿದು ಬಿದ್ದಿದೆ.
ಇದರಿಂದ ಮುತ್ತಪ್ಪ ಅವರು ಸುಮಾರು ಏಳೆಂಟು ಅಡಿ ಆಳದ ಚರಂಡಿಯೊಳಗೆ ಬಿದ್ದಿದ್ದು, ಅವರ ಮೇಲೆಯೆ ಸ್ಲ್ಯಾಬ್ ಗಳು ಬಿದ್ದಿವೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಚರಂಡಿಯಿಂದ ಶವ ಮೇಲಕ್ಕೆತ್ತಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ವಿನೋಬನಗರ ಠಾಣೆ ಇನ್ಸ್’ಪೆಕ್ಟರ್ ಚಂದ್ರಕಲಾ ಅವರು ಭೇಟಿ ಪರಿಶೀಲಿಸಿದ್ದಾರೆ.
ಅಮಾಯಕರ ಬಲಿಗೆ ಹೊಣೆ ಯಾರು? : ಮೇಲಿನ ಎರಡು ಘಟನೆಗಳಲ್ಲಿ ಎರಡು ಅಮಾಯಕ ನಾಗರೀಕ ಜೀವಗಳು ಬಲಿಯಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಯಾರದೋ ನಿರ್ಲಕ್ಷ್ಯ, ಕಾಮಗಾರಿಗಳ ಅನುಷ್ಠಾನದ ವೇಳೆಯ ಲೋಪ, ಕಳಪೆ ಗುಣಮಟ್ಟದ ಕೆಲಸ, ಅಸಮರ್ಪಕ ಮೇಲ್ವಿಚಾರಣೆ ಮತ್ತೀತರ ಕಾರಣಗಳಿಂದ ನಾಗರೀಕರು ಜೀವ ತೆತ್ತುವಂತಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಆರೋಪವಾಗಿದೆ.
ಈ ಎರಡು ದುರಂತಗಳ ಬಗ್ಗೆ ಆಡಳಿತಗಾರರು ಎಚ್ಚೆತ್ತುಕೊಳ್ಳಬೇಕು. ವಸ್ತುನಿಷ್ಠ ತನಿಖೆ ನಡೆಸಬೇಕಾಗಿದೆ. ನೊಂದ ಕುಟುಂಬಗಳಿಗೆ ನ್ಯಾಯ ಕಲ್ಪಿಸಬೇಕಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಭವಿಷ್ಯದಲ್ಲಿ ಈ ರೀತಿಯ ದುರಂತಗಳಿಗೆ ಆಸ್ಪದವಾಗದಂತೆ ಎಚ್ಚರವಹಿಸಬೇಕಾಗಿದೆ ಎಂಬುವುದು ನಾಗರೀಕರ ಆಗ್ರಹವಾಗಿದೆ.