
‘ವಿಶ್ವಗುರು ಬಸವಣ್ಣ- ಸಾಂಸ್ಕೃತಿಕ ನಾಯಕ’ : ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಘೋಷವಾಕ್ಯ ಕಡ್ಡಾಯ
ಬೆಂಗಳೂರು, ಫೆ. 13: ವಿಶ್ವ ಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬ ಘೋಷವಾಕ್ಯ ಇಡೀ ರಾಜ್ಯದ ತುಂಬ ಮೊಳಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಸಾಂಸ್ಕೃತಿಕ ನಾಯಕರಾದ ಶ್ರೀ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣ ಮಾಡಿ ಮಾತನಾಡಿದರು.
ಫೆ. 17 ರಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲ್ಲೂಕು ಮಟ್ಟದಲ್ಲಿ ಶಾಸಕರು ಹಾಗೂ ಎಲ್ಲಾ ನಗರ ಹಾಗೂ ಗ್ರಾಮೀಣ ಸಂಸ್ಥೆಗಳಲ್ಲಿ ಆಯಾ ಅಧ್ಯಕ್ಷರಿಂದ ನೆರವೇರಿಸಲು ಸೂಚಿಸಲಾಗಿದೆ. ಎಲ್ಲ ಕಚೇರಿಗಳಲ್ಲಿಯೂ ಬಸವಣ್ಣನವರ ಭಾವಚಿತ್ರವಿರಬೇಕು, ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳಬೇಕು ಎಂದರು.
ಬಸವ ಜಯಂತಿ ಆಚರಿಸಿ, ಹಣೆಬರಹ, ನನ್ನ ಕರ್ಮ ಎನ್ನುವುದು ಪುನ: ದಾರಿ ತಪ್ಪಿಸಿದಂತಾಗುತ್ತದೆ. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ದ್ವೇಷಿಸುವುದು ದುರ್ಗುಣ. ಬಸವಣ್ಣ ಸಾಂಸ್ಕøತಿಕ ನಾಯಕ ಎನ್ನುವುದು ಅತ್ಯಂತ ಯೋಗ್ಯವಾಗಿದೆ ಎಂದರು.
ಶಿವಮೊಗ್ಗದಲ್ಲಿ ಹಳೇ ಜೈಲು ಆವರಣವನ್ನು ಅಲ್ಲಮಪ್ರಭು ಎಂದು ನಾಮಕರಣ ಮಾಡಲಾಗಿದೆ. ಬಿಜಾಪುರ ಮಹಿಳಾ ವಿಸ್ವವಿದ್ಯಾಲಯಕ್ಕೆ ಅಕ್ಕಮಹಹಾದೇವಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿದ್ದು ನಮ್ಮ ಸರ್ಕಾರವೇ ಎಂದರು. ಸಮಾಜದಲ್ಲಿ ಬದಲಾವಣೆ
ತರಲು ಈ ಕೆಲಸಗಳನ್ನು ಮಾಡುತ್ತಿದ್ದೇವೆ. ಬಸವಾದಿ ಶರಣರ ವಚನಗಳು ಹಿಂದೆ, ಇಂದು ಹಾಗೂ ಮುಂದೆಯೂ ಪ್ರಸ್ತುತವಾಗಿರಲಿದೆ. ಬಸವಣ್ಣನವರ ಕಾರ್ಯಕ್ರಮಕ್ಕೆ ಯಾವ ಕಾರಣಕ್ಕೂ ಸರ್ಕಾರದಲ್ಲಿ ಅನುದಾನದ ಕೊರತೆಯಿಲ್ಲ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಬುದ್ಧ, ಬಸವ, ಮಹಾತ್ಮಾ ಗಾಂಧಿ, ಅಂಬೇಡ್ಕರ್ ಈ ಎಲ್ಲ ಮಹನೀಯರು ಆರೋಗ್ಯಕರ, ಮನುಷ್ಯತ್ವದಿಂದ ಕೂಡಿದ ಸಮಾಜಿಕ ವ್ಯವಸ್ಥೆಯನ್ನು ಬಯಸಿದವರು. ಜಾತೀಯತೆ, ಮೌಢ್ಯ ಕಂದಾಚಾರಗಳನ್ನು ಸಮಾಜದಲ್ಲಿ ಪ್ರಚಲಿತವಾಗಿದೆ. ಅಸಮಾನತೆ ತೊಲಗಿ ಎಲ್ಲರೂ ಗೌರವದಿಂದ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕೆಂಬ ದಿಸೆಯಲ್ಲಿ ಬಸವಣ್ಣನವರು ಶ್ರಮಿಸಿದರು.
ನುಡಿದಂತೆ ನಡೆದವರ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ವರ್ಗರಹಿತ, ಜಾತಿರಹಿತ, ಮೌಢ್ಯಗಳಿಲ್ಲದ ವೈಚಾರಿಕ ಸಮಾಜ ಸ್ಥಾಪನೆಯ ಆಶಯದಿಂದ ವಚನಗಳನ್ನು ರಚಿಸಿದರು. ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ವಚನಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಕಾಯಕ, ದಾಸೋಹವನ್ನು ಬೋಧಿಸಿದ ಬಸವಣ್ಣನವರು ಯಾರೂ ಕುಳಿತು ತಿನ್ನದೇ ಕಾಯಕದಲ್ಲಿ ತೊಡಗಬೇಕೆಂದು ಪ್ರತಿಪಾದಿಸಿದರು. ಬಡವರು ಬಡವರಾಗಿಯೇ ಉಳಿಯುವ ಹಾಗೂ ಶ್ರೀಮಂತರ ಕೂತು ತಿನ್ನುವ ವ್ಯವಸ್ಥೆ ಹೋಗಬೇಕು.ಅಧಿಕಾರ ಮತ್ತು ಸಂಪತ್ತು ಕೆಲವೇ ಜನರ ಕೈಯಲ್ಲಿ ಇರಬಾರದು, ಎಲ್ಲರಿಗೂ ಸಮಪಾಲು, ಸಮಬಾಳು ಎಂದು ಬಸವಾದಿ ಶರಣರು, ಅಂಬೇಡ್ಕರ್ ತಿಳಿಸಿದ್ದರು.