
ಶಿವಮೊಗ್ಗ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಎಸ್.ಬಂಗಾರಪ್ಪ ನಗರ ಹೆಸರಿಡಲು ಆಗ್ರಹ
ಶಿವಮೊಗ್ಗ, ಫೆ. 23: ಶಿವಮೊಗ್ಗ ನಗರದ ಹೊರವಲಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ, ಮಾಜಿ ಮುಖ್ಯಮಂತ್ರಿ ದಿವಂಗತ ‘ಎಸ್.ಬಂಗಾರಪ್ಪ ನಗರ’ ಎಂದು ಹೆಸರಿಡಲು ಕ್ರಮಕೈಗೊಳ್ಳಬೇಕೆಂದು ಮಹಾನಗರ ಪಾಲಿಕೆ ಆಡಳಿತಕ್ಕೆ ಎಸ್.ಬಂಗಾರಪ್ಪ ಅಭಿಮಾನಿಗಳ ಸಂಘ ಆಗ್ರಹಿಸಿದೆ.
ಈ ಸಂಬಂಧ ಶುಕ್ರವಾರ ಮಹಾನಗರ ಪಾಲಿಕೆ ಕಚೇರಿಯಲ್ಲಿ ಆಯುಕ್ತ ಮಾಯಣ್ಣಗೌಡ ಅವರಿಗೆ ಸಂಘಟನೆ ಮನವಿ ಪತ್ರ ಅರ್ಪಿಸಿದೆ.
ಬಡ – ಮಧ್ಯಮ ವರ್ಗದ ವಸತಿರಹಿತರಿಗೆ ಅನುಕೂಲ ಕಲ್ಪಿಸಿಕೊಡಲು, ಎಸ್.ಬಂಗಾರಪ್ಪ ಅವರು ಬೊಮ್ಮನಕಟ್ಟೆ ಆಶ್ರಯ ಬಡಾವಣೆ ರಚನೆಗೆ ಕ್ರಮಕೈಗೊಂಡಿದ್ದರು. ಪ್ರಸ್ತುತ ಸದರಿ ಬಡಾವಣೆಯಲ್ಲಿ 7 ಸಾವಿರ ಮನೆಗಳಿದ್ದು, 25 ರಿಂದ 30 ಸಾವಿರ ಜನಸಂಖ್ಯೆಯಿದೆ.
ಇಲ್ಲಿಯವರೆಗೂ ಸದರಿ ಬಡಾವಣೆಗೆ ಯಾವುದೇ ಹೆಸರಿಟ್ಟಿಲ್ಲ. ಬಡಾವಣೆ ರಚನೆಗೆ ಮೂಲ ಕಾರಣಕರ್ತರಾದ ಎಸ್.ಬಂಗಾರಪ್ಪ ಅವರ ಸ್ಮರಣಾರ್ಥ, ಎಸ್.ಬಂಗಾರಪ್ಪ ನಗರ ಎಂದು ನಾಮಕರಣ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಬೊಮ್ಮನಕಟ್ಟೆ ಮಾಲತೇಶ್ ಕೆ, ಪ್ರಮುಖರಾದ ಜಯಪ್ಪ, ಪ್ರಕಾಶ್, ರಾಮಕೃಷ್ಣ, ಕೃಷ್ಣಮೂರ್ತಿ, ಲಕ್ಷ್ಮಣನಾಯ್ಕ್, ವಜೀರ್ ಬೇಗ್ ಸೇರಿದಂತೆ ಮೊದಲಾದವರಿದ್ದರು.