
ಶಿವಮೊಗ್ಗ ಲೋಕಸಭಾ ಕ್ಷೇತ್ರ : ಮತ್ತೆ ಮಾಜಿ ಸಿಎಂ ಮಕ್ಕಳ ಹಣಾಹಣಿಗೆ ಸಜ್ಜಾಗುತ್ತಿದೆ ವೇದಿಕೆ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಮಾ. 7: ಲೋಕಸಭೆ ಸಾರ್ವತ್ರಿಕ ಚುನಾವಣೆಗೆ (lok sabha election) ದಿನಾಂಕ ಘೋಷಣೆಗೂ ಮುನ್ನವೇ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ (shimoga lok sabha constituency) ರಾಜಕೀಯ ಕಣ ಕಾವೇರಲಾರಂಭಿಸಿದೆ. ಅಧಿಕೃತವಾಗಿ ಅಭ್ಯರ್ಥಿಗಳ ಘೋಷಣೆಯಾಗದ ಹೊರತಾಗಿಯೂ, ಬಿಜೆಪಿ – ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿನ ಅಖಾಡಕ್ಕೆ ವೇದಿಕೆ ಸಜ್ಜಾಗುತ್ತಿದೆ.
ಬಿಜೆಪಿಯಿಂದ ಹಾಲಿ ಸಂಸದ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ (b y raghavendra) ಮತ್ತೆ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅಧಿಕೃತ ಘೋಷಣೆಯಷ್ಟೆ ಬಾಕಿಯಿದೆ. ಉಳಿದಂತೆ ಕಾಂಗ್ರೆಸ್ (congress) ನಿಂದ ಮಾಜಿ ಸಿಎಂ ದಿವಂಗತ ಎಸ್. ಬಂಗಾರಪ್ಪ ಪುತ್ರಿ ಹಾಗೂ ನಟ ಶಿವರಾಜ್ ಕುಮಾರ್ (actor shivarajkumar) ಪತ್ನಿ ಗೀತಾ ಶಿವರಾಜ್ ಕುಮಾರ್ (geetha shivarajkumar) ಅವರು ಕಣಕ್ಕಿಳಿಯುವ ಸಾಧ್ಯತೆಗಳು ಗೋಚರವಾಗುತ್ತಿವೆ.
ಒಂದು ವೇಳೆ ಗೀತಾ ಶಿವರಾಜಕುಮಾರ್ ಕಣಕ್ಕಿಳಿಯುವುದು ಖಚಿತವಾದರೆ, ಶಿವಮೊಗ್ಗ ಕ್ಷೇತ್ರವು ಮತ್ತೊಮ್ಮೆ ‘ಮಾಜಿ ಸಿಎಂ ಮಕ್ಕಳ’ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಹೈವೋಲ್ಟೇಜ್ ಕಣವಾಗಿ ಹೊರಹೊಮ್ಮುವುದು ನಿಶ್ಚಿತವಾಗಿದೆ.
ರಾಜಕೀಯ ಹಿನ್ನೋಟ : ಸಂಸದ ಬಿವೈಆರ್ (byr) ಅವರ ಲೋಕಸಭಾ ಚುನಾವಣಾ ಹಿನ್ನೋಟ ಗಮನಿಸಿದರೆ, 2009 ರಿಂದ ಇಲ್ಲಿಯವರೆಗೂ ಬಿಜೆಪಿ (bjp) ಪಕ್ಷದಿಂದ ಮೂರು ಬಾರಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮೂರು ಬಾರಿಯೂ ಜಯ ಸಂಪಾದಿಸಿದ್ದಾರೆ. ಒಮ್ಮೆ ಮಾಜಿ ಸಿಎಂ ಎಸ್.ಬಂಗಾರಪ್ಪ (s bangarappa) ಹಾಗೂ ಎರಡು ಬಾರಿ ಅವರ ಪುತ್ರ ಮಧು ಬಂಗಾರಪ್ಪ (madhu bangarappa) ರನ್ನು ಪರಾಭವಗೊಳಿಸಿದ್ದಾರೆ.
ಉಳಿದಂತೆ ಗೀತಾ ಶಿವರಾಜಕುಮಾರ್ ಅವರು 2014 ರಲ್ಲಿ ಮೊದಲ ಬಾರಿಗೆ ರಾಜಕೀಯ ಕ್ಷೇತ್ರ ಪ್ರವೇಶಿಸಿ, ಜೆಡಿಎಸ್ ಪಕ್ಷದಿಂದ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದರು. ಅಂದು ಬಿಜೆಪಿಯಿಂದ ಕಣಕ್ಕಿಳಿದಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (b s yediurappa) ಇವರ ಎದುರಾಳಿಯಾಗಿದ್ದರು. ಇದರಿಂದ ಶಿವಮೊಗ್ಗ ಕ್ಷೇತ್ರವು ರಾಷ್ಟ್ರಮಟ್ಟದ ಗಮನ ಸೆಳೆದಿತ್ತು. ಗೀತಾ (geetha) ಪರವಾಗಿ ಕನ್ನಡ ಚಿತ್ರರಂಗದ ಪ್ರಮುಖ ನಟ-ನಟಿಯರು ಪ್ರಚಾರ ನಡೆಸಿದ್ದರು. ಯಡಿಯೂರಪ್ಪಗೆ ಭಾರೀ ಪೈಪೋಟಿ ನೀಡಲಿದ್ದಾರೆ. ಹೆಚ್ಚುಕಮ್ಮಿಯಾದರೆ ಗೀತಾ ಗೆಲುವು ನಿಶ್ಚಿತವೆಂದು ಕೆಲ ಮಾಧ್ಯಮಗಳು ಸಮೀಕ್ಷಾ ವರದಿ ಪ್ರಕಟಿಸಿದ್ದವು.
ಆದರೆ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಸಮೀಕ್ಷೆಗಳೆಲ್ಲ ತಲೆಕೆಳಗಾಗಿದ್ದವು. ಬಿಎಸ್ವೈ (bsy) ಭಾರೀ ಮತಗಳ ಅಂತರದಿಂದ ಜಯ ಸಂಪಾದಿಸಿದ್ದರು. ಗೀತಾರವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಳ್ಳುವಂತಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ (Manjunath Bhandary) ಎರಡನೇ ಸ್ಥಾನ ಸಂಪಾದಿಸಿದ್ದರು.
ಮುಖಾಮುಖಿ : 2009 ರಿಂದ 2019 ರವರೆಗಿನ ಲೋಕಸಭೆ ಚುನಾವಣೆಗಳಲ್ಲಿ ಬಂಗಾರಪ್ಪ – ಯಡಿಯೂರಪ್ಪ ಕುಟುಂಬ ಪರಸ್ಪರ ಮುಖಾಮುಖಿಯಾಗುತ್ತಿವೆ. ಈ ಬಾರಿಯ 2024 ರ ಚುನಾವಣೆಯಲ್ಲಿಯೂ ಮತ್ತೆ ಎರಡೂ ಕುಟುಂಬಗಳು ಮುಖಾಮುಖಿಯಾಗುವ ಲಕ್ಷಣಗಳು ಗೋಚರವಾಗುತ್ತಿದ್ದು, ಏನಾಗಲಿದೆ ಎಂಬುವುದು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಭರ್ಜರಿ ಸಮಾವೇಶ : ಕಾವೇರಿದ ಚುನಾವಣೆ ಸಿದ್ದತೆ!
*** ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ (bjp) ಹಾಗೂ ಕಾಂಗ್ರೆಸ್ (congress) ಪಕ್ಷಗಳು ಲೋಕಸಭೆ ಚುನಾವಣಾ ಪೂರ್ವಭಾವಿ ಸಿದ್ದತೆಗಳಿಗೆ ಚಾಲನೆ ನೀಡಿವೆ. ಆದರೆ ಕಾಂಗ್ರೆಸ್ ಗೆ ಹೋಲಿಸಿದರೆ ಬಿಜೆಪಿ ಪಕ್ಷದ ಚುನಾವಣಾ ಪೂರ್ವಭಾವಿ ಸಿದ್ದತೆ ಜೋರಾಗಿದೆ. ಕ್ಷೇತ್ರದಾದ್ಯಂತ ಪಕ್ಷದ ವಿವಿಧ ಮೋರ್ಚಾ ಹಾಗೂ ಜಾತಿಗಳ ಅಭಿನಂದನಾ ಸಮಾವೇಶ ಆಯೋಜಿಸಿ, ಮತದಾರರ ಚಿತ್ತ ಸೆಳೆಯುವ ಕಾರ್ಯಕ್ಕೆ ಚಾಲನೆ ನೀಡಿದೆ. ಉಳಿದಂತೆ ಕಾಂಗ್ರೆಸ್ ಪಕ್ಷ ‘ಯುವನಿಧಿ’, ‘ಗ್ಯಾರಂಟಿ’ಯಂತಹ ಸರ್ಕಾರಿ ಸಮಾವೇಶಗಳ ಮೂಲಕ ಈಗಾಗಲೇ ಶಕ್ತಿ ಪ್ರದರ್ಶನ ಮಾಡಿದೆ. ಆದರೆ ಪಕ್ಷದ ನೇತೃತ್ವದ ಸಮಾವೇಶ, ಪ್ರಚಾರ ಕಾರ್ಯಗಳು ಇನ್ನಷ್ಟೆ ಆರಂಭವಾಗಬೇಕಾಗಿದೆ.