
ಲೋಕಸಭೆ ಚುನಾವಣೆ : ಬಿಜೆಪಿ ಟಿಕೆಟ್ ಹಂಚಿಕೆ – ಮತ್ತೆ ಯಡಿಯೂರಪ್ಪ ಪ್ರಾಬಲ್ಯ?!
ವರದಿ : ಬಿ. ರೇಣುಕೇಶ್
ಬೆಂಗಳೂರು/ಶಿವಮೊಗ್ಗ, ಮಾ. 12: ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯಲ್ಲಿ ಸಂಪೂರ್ಣ ಮೂಲೆಗುಂಪಾಗಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಮತ್ತೇ ಮುನ್ನೆಲೆಗೆ ಬಂದಿದ್ದಾರೆ. ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಾಬಲ್ಯ ಮೆರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದಿನ ವಿಧಾನಸಭೆ ಚುನಾವಣೆ ವೇಳೆ, ಬಿಜೆಪಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವಗಣನೆಗೆ ಒಳಗಾಗಿದ್ದರು. ಅಭ್ಯರ್ಥಿಗಳ ಆಯ್ಕೆ ವೇಳೆ ಪಕ್ಷದಲ್ಲಿನ ಅವರ ವಿರೋಧಿ ಪಾಳೇಯ ಮೇಲುಗೈ ಸಾಧಿಸಿತ್ತು. ಪಕ್ಷದ ವರಿಷ್ಠರು ಕೂಡ ಬಿ.ಎಸ್.ವೈ ಮಾತಿಗೆ ಕಿಮ್ಮತ್ತು ಕೊಟ್ಟಿರಲಿಲ್ಲ ಎಂದು ಹೇಳಲಾಗಿತ್ತು.
ಇನ್ನೇನೂ ಬಿಜೆಪಿಯಲ್ಲಿ ಬಿ.ಎಸ್.ವೈ ಯುಗ ಅಂತ್ಯವಾಗುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರಲಾರಂಭಿಸಿತ್ತು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿದ್ದು, ಪಕ್ಷದ ವರಿಷ್ಠರನ್ನು ಕಂಗೆಡಿಸುವಂತೆ ಮಾಡಿತ್ತು. ಮತ್ತೊಂದೆಡೆ, ಬಿ.ಎಸ್.ವೈ ವಿರೋಧಿ ಪಾಳೇಯಕ್ಕೂ ದೊಡ್ಡ ಹಿನ್ನಡೆಯಾಗುವಂತೆ ಮಾಡಿತ್ತು. ಜೊತೆಗೆ ವರಿಷ್ಠರ ಕೋಪಕ್ಕೂ ತುತ್ತಾಗುವಂತಾಗಿತ್ತು.
ಇದೆಲ್ಲದರ ಪರಿಣಾಮದಿಂದ ಮತ್ತೆ ಬಿ.ಎಸ್.ವೈ ರತ್ತ ದೆಹಲಿ ವರಿಷ್ಠರು ಚಿತ್ತ ಹರಿಸುವಂತಾಗಿತ್ತು. ಅವರ ಪುತ್ರ ಬಿ.ವೈ.ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿತ್ತು. ಪ್ರಸ್ತುತ ರಾಜ್ಯದ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವೇಳೆಯೂ ಬಿ.ಎಸ್.ವೈ ಅಭಿಪ್ರಾಯಕ್ಕೆ ಹೆಚ್ಚಿನ ಮನ್ನಣೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಕೆಲ ಕ್ಷೇತ್ರಗಳಿಗೆ ಅವರು ಶಿಫಾರಸ್ಸು ಮಾಡಿದವರಿಗೆ ವರಿಷ್ಠರು ಟಿಕೆಟ್ ನೀಡಿದ್ದಾರೆ. ಟಿಕೆಟ್ ಕೈತಪ್ಪುವ ಭೀತಿಯಲ್ಲಿದ್ದ ಕೆಲವರು ಬಿ.ಎಸ್.ವೈ ಕೃಪಕಟಾಕ್ಷದಿಂದ ಮತ್ತೆ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತಾಗಿದೆ ಎಂಬ ಮಾತುಗಳು ಬಿಜೆಪಿ ಪಾಳೇಯದಿಂದ ಕೇಳಿಬರಲಾರಂಭಿಸಿದೆ. ಇದು ಅವರ ವಿರೋಧಿ ಪಾಳೇಯವನ್ನು ತಣ್ಣಗಾಗುವಂತೆ ಮಾಡಿದೆ.
ಗುರಿ ನಿಗದಿ: ‘ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಕನಿಷ್ಠ 22 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿಕೊಂಡು ಬರಬೇಕೆಂಬ’ ಗುರಿಯನ್ನು ಬಿ.ಎಸ್.ವೈ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರಗೆ ವರಿಷ್ಠರು ನಿಗದಿಪಡಿಸಿದ್ದಾರೆಂದು ಹೇಳಲಾಗುತ್ತಿದೆ.
ಈ ಕಾರಣದಿಂದ ಬಿ.ಎಸ್.ವೈ – ಬಿ.ವೈ.ವಿಜಯೇಂದ್ರಗೆ ಪ್ರಸ್ತುತ ಲೋಕಸಭೆ ಚುನಾವಣೆಯು ಅಗ್ನಿ ಪರೀಕ್ಷೆಯಾಗಿದೆ. ಅತ್ಯಧಿಕ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಆಯ್ಕೆಯಾದರೆ, ರಾಜ್ಯ ಬಿಜೆಪಿಯಲ್ಲಿ ಅಪ್ಪ – ಮಗ ಮತ್ತೆ ಕಿಂಗ್ ಮೇಕರ್ ಗಳಾಗಿ ಹೊರಹೊಮ್ಮಲಿದ್ದಾರೆ. ಒಂದು ವೇಳೆ ಲೆಕ್ಕಾಚಾರಗಳ ತಲೆಕೆಳಗಾದರೆ ರಾಜಕೀಯವಾಗಿ ಸಾಕಷ್ಟು ಹಿನ್ನಡೆ ತುತ್ತಾಗಲಿರುವುದು ನಿಶ್ಚಿತವಾಗಿದೆ.
ಅಭ್ಯರ್ಥಿಗಳ ಪಟ್ಟಿ ಫೈನಲ್!
ನವದೆಹಲಿಯಲ್ಲಿ ಸೋಮವಾರ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಕರ್ನಾಟಕದ 22 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲಾಗಿದೆ. ಇಂದು ಅಥವಾ ನಾಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ಹೇಳಲಾಗಿದೆ. ಲಭ್ಯ ಮಾಹಿತಿ ಅನುಸಾರ ಹಾವೇರಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬೆಳಗಾವಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
One thought on “ಲೋಕಸಭೆ ಚುನಾವಣೆ : ಬಿಜೆಪಿ ಟಿಕೆಟ್ ಹಂಚಿಕೆ – ಮತ್ತೆ ಯಡಿಯೂರಪ್ಪ ಪ್ರಾಬಲ್ಯ?!”
Comments are closed.
BSY is the kingmaker Again….
He will achieve the target no doubt…
Modiji will become PM Again.