
ಶಿವಮೊಗ್ಗ ಲೋಕಸಭಾ ಕ್ಷೇತ್ರ : ಮೂರು ಘಟಾನುಘಟಿ ಕುಟುಂಬಗಳ ಪ್ರತಿಷ್ಠೆಯ ಅಖಾಡ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಏ. 16: ಪ್ರಸ್ತುತ ಲೋಕಸಭೆ ಚುನಾವಣೆ (loksabha election), ಶಿವಮೊಗ್ಗ (shimoga) ಜಿಲ್ಲೆಯ ಮೂರು ಘಟಾನುಘಟಿ ರಾಜಕೀಯ ಕುಟುಂಬಗಳಿಗೆ (political families) ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಹಾಗೆಯೇ ಭವಿಷ್ಯದ ‘ರಾಜಕೀಯ’ ಅಸ್ತಿತ್ವ ನಿರ್ಧರಿಸುವ ನಿರ್ಣಾಯಕ ಚುನಾವಣೆಯಾಗಿ ಮಾರ್ಪಟ್ಟಿದೆ. ಈ ಕಾರಣದಿಂದ ಜಯ ಸಾಧಿಸಲೇಬೇಕಾದ ಅನಿವಾರ್ಯ ಒತ್ತಡದಲ್ಲಿ ಮೂರು ಕುಟುಂಬಗಳಿವೆ!
ಹೌದು. ಕಳೆದ ಒಂದೂವರೆ ದಶಕದ ಶಿವಮೊಗ್ಗ ಕ್ಷೇತ್ರದ ಲೋಕಸಭಾ ಚುನಾವಣಾ (loksabha election) ಚಿತ್ರಣ ಗಮನಿಸಿದರೆ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ (b s yediyurappa) ಹಾಗೂ ಎಸ್.ಬಂಗಾರಪ್ಪ (s bangarappa) ಕುಟುಂಬಗಳ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆಯಾಗುತ್ತಿರುವುದು ಕಂಡುಬರುತ್ತಿದೆ. ( www.udayasaakshi.com )
ಆದರೆ ಈ ಬಾರಿ ಈ ಎರಡೂ ಕುಟುಂಬಗಳ ಜೊತೆಗೆ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (k s eshwarappa) ಕುಟುಂಬ ದಿಢೀರ್ ಎಂಟ್ರಿಯಾಗಿರುವುದು ‘ತ್ರಿಕೋನ’ (triangular) ಹೋರಾಟಕ್ಕೆ ಅಖಾಡ ಸಜ್ಜಾಗುವಂತಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಶಿವಮೊಗ್ಗ ಕ್ಷೇತ್ರದ ಚುನಾವಣಾ ರಾಜಕಾರಣದ ಲೆಕ್ಕಾಚಾರವೇ ತಲೆಕೆಳಗಾಗುವಂತೆ ಮಾಡಿದೆ.
ಯಡಿಯೂರಪ್ಪ ಕುಟುಂಬ : ಬಿಜೆಪಿ (bjp) ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರಗೆ (b y raghavendra), ಈ ಹಿಂದಿನ ಮೂರು ಚುನಾವಣೆಗಳಿಗೆ ಹೋಲಿಸಿದರೆ ಪ್ರಸ್ತುತ ಎಲೆಕ್ಷನ್ ಅತ್ಯಂತ ಮಹತ್ವದಲ್ಲಿ ಮಹತ್ವದ್ದಾಗಿ ಪರಿಣಮಿಸಿದೆ. ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ. ( www.udayasaakshi.com )
ಬಿವೈಆರ್ ಗೆಲುವು, ಅವರ ಸಹೋದರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೂ (b y vijayendra) ಅನಿವಾರ್ಯವಾಗಿದೆ. ಹಾಗೆಯೇ ಯಡಿಯೂರಪ್ಪರಿಗೂ ರಾಜಕೀಯ ಪ್ರತಿಷ್ಠೆಯಾಗಿದೆ. ಆದರೆ ಕೆ.ಎಸ್.ಈಶ್ವರಪ್ಪ ಬಂಡಾಯ ಸಾಕಷ್ಟು ಎಡರು ತೊಡರು ಸೃಷ್ಟಿಯಾಗುವಂತೆ ಮಾಡಿದೆ. ಈ ಬಾರಿ ಏಕಕಾಲಕ್ಕೆ ಎಸ್.ಬಂಗಾರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಕುಟುಂಬಗಳ ಸವಾಲು ಎದುರಿಸಬೇಕಾದ ಸ್ಥಿತಿ ಯಡಿಯೂರಪ್ಪ ಕುಟುಂಬದ್ದಾಗಿದೆ.
ಎಸ್.ಬಂಗಾರಪ್ಪ ಕುಟುಂಬ : ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ (s bangarappa) ಪುತ್ರಿ ಗೀತಾ ಶಿವರಾಜಕುಮಾರ್ (geetha shivarajkumar) ಅವರ ಗೆಲುವು, ಸಹೋದರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ (madhu bangarappa) ‘ಸಚಿವ ಸ್ಥಾನ’ ಭದ್ರಕ್ಕೆ ಕಾರಣವಾಗಲಿದೆ. ( www.udayasaakshi.com )
ಈ ಕಾರಣದಿಂದ ಮಧು ಬಂಗಾರಪ್ಪಗೆ ಪ್ರಸ್ತುತ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಸಹೋದರಿಯನ್ನು ಗೆಲ್ಲಿಸಿಕೊಂಡು ಬರಲೇಬೇಕಾದ ಅನಿವಾರ್ಯ ಒತ್ತಡದಲ್ಲಿ ಸಿಲುಕಿ ಬಿದ್ದಿದ್ದಾರೆ. ಅವರ ರಾಜಕೀಯ ಜೀವನದ ಅತೀ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರಿಂದ ಸಹೋದರಿಯ ಜಯಕ್ಕಾಗಿ ಸಾಕಷ್ಟು ಕಸರತ್ತು, ತಂತ್ರಗಾರಿಕೆಯನ್ನು ಮಧು ಬಂಗಾರಪ್ಪ ನಡೆಸುವಂತಾಗಿದೆ.
ಕೆ.ಎಸ್.ಈಶ್ವರಪ್ಪ ಕುಟುಂಬ : ಹಾವೇರಿ (haveri) ಕ್ಷೇತ್ರದಲ್ಲಿ ಪುತ್ರನಿಗೆ ಟಿಕೆಟ್ ಕೈತಪ್ಪಿದ್ದರಿಂದ ಆಕ್ರೋಶಗೊಂಡಿರುವ ಕೆ.ಎಸ್.ಈಶ್ವರಪ್ಪ ಅವರು, ಯಡಿಯೂರಪ್ಪ ಕುಟುಂಬದ ವಿರುದ್ದ ಸಿಡಿದೆದ್ದಿದ್ದಾರೆ. ಈ ಕಾರಣದಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ (independent candidate) ಕಣಕ್ಕಿಳಿಯುತ್ತಿದ್ದಾರೆ. ಈಗಾಗಲೇ ನಾಮಪತ್ರ ಕೂಡ ಸಲ್ಲಿಸಿದ್ದಾರೆ.
ಈ ಕಾರಣದಿಂದ ಸದರಿ ಚುನಾವಣೆಯು ಕೆ.ಎಸ್.ಈಶ್ವರಪ್ಪರಿಗೆ ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಗೆಲುವು ಸಾಧಿಸಲೇಬೇಕಾದ ಅನಿವಾರ್ಯತೆಯಲ್ಲಿ ಸಿಲುಕುವಂತೆ ಮಾಡಿದೆ. ಅವರ ಸ್ಪರ್ಧೆಯು, ಅವರೊಂದಿಗೆ ಅವರ ಪುತ್ರ ಕೆ.ಇ.ಕಾಂತೇಶ್ (k e kantesh) ಅವರ ಭವಿಷ್ಯದ ರಾಜಕಾರಣವನ್ನು ನಿರ್ಧರಿಸಲಿದೆ.
ಒಟ್ಟಾರೆ ಶಿವಮೊಗ್ಗ ಕ್ಷೇತ್ರವು, ಮೂರು ಘಟಾನುಘಟಿ ರಾಜಕೀಯ ಕುಟುಂಬಗಳ ಹಣಾಹಣಿಗೆ ವೇದಿಕೆಯಾಗುವ ಮೂಲಕ ಮತ್ತೊಮ್ಮೆ ಇಡೀ ರಾಷ್ಟ್ರ – ರಾಜ್ಯದ ಗಮನ ಸೆಳೆದಿದೆ. ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳುವಂತೆ ಮಾಡಿದೆ.