
ಅಪಾಯಕಾರಿ ರಾಷ್ಟ್ರೀಯ ಹೆದ್ದಾರಿ : ಶಾಲಾ ಮಕ್ಕಳ ನೆರವಿಗೆ ಧಾವಿಸದ ಆಡಳಿತ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜು. 3: ಶಿವಮೊಗ್ಗ ಮಹಾನಗರ ಪಾಲಿಕೆ (corporation) ವ್ಯಾಪ್ತಿ ಗಾಡಿಕೊಪ್ಪದ ಸರ್ಕಾರಿ ಶಾಲೆಗೆ (gadikoppa govt school) ಹೊಂದಿಕೊಂಡಂತಿರುವ ರಾಷ್ಟ್ರೀಯ ಹೆದ್ದಾರಿಯು, ವಿದ್ಯಾರ್ಥಿಗಳ ಪಾಲಿಗೆ ಅಕ್ಷರಶಃ ಯಮ ಸ್ವರೂಪಿಯಾಗಿ ಪರಿಣಮಿಸಿದೆ. ಈಗಾಗಲೇ ಹಲವು ವಿದ್ಯಾರ್ಥಿಗಳು ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದಾರೆ. ಜೀವ ಕೈಯಲ್ಲಿಡಿದು ರಸ್ತೆ ದಾಟುವಂತಹ ದುಃಸ್ಥಿತಿಯಿದೆ!
ಇಷ್ಟೆಲ್ಲದರ ಹೊರತಾಗಿಯೂ ವಿದ್ಯಾರ್ಥಿಗಳ ನೆರವಿಗೆ ಧಾವಿಸುವ ಕನಿಷ್ಠ ಕಳಕಳಿಯನ್ನು ಆಡಳಿತ (administration) ಪ್ರದರ್ಶಿಸಿಲ್ಲ. ಮತ್ತೊಂದೆಡೆ, ವಾಹನಗಳ ವೇಗ ನಿಯಂತ್ರಣಕ್ಕೆಂದು ಶಾಲೆಯ ಸಮೀಪದ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು (barricades) ಕೂಡ ಇತ್ತೀಚೆಗೆ ಏಕಾಏಕಿ ತೆಗೆದುಕೊಂಡು ಹೋಗಲಾಗಿದೆ ಎಂದು ಸ್ಥಳೀಯರು ದೂರುತ್ತಾರೆ.
ಸಮಸ್ಯೆಯೇನು?: ಅಂಗನವಾಡಿಯಿಂದ 10 ನೇ ತರಗತಿಯವರೆಗೆ ನೂರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲೆಗಳಿಗೆ ಹೊಂದಿಕೊಂತೆ ಹೆದ್ದಾರಿಯಿದೆ (national highway). ಪ್ರತಿನಿತ್ಯ ಭಾರೀ ಸರಕು ಸಾಗಾಣೆ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು (vehicles) ಸಂಚರಿಸುತ್ತವೆ. ಬಹುತೇಕ ವಾಹನಗಳು ಮಿತಿಮೀರಿದ ವೇಗದಲ್ಲಿ (excessive speed) ಓಡಾಡುತ್ತವೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.
ಕಳೆದ ಕೆಲ ವರ್ಷಗಳ ಹಿಂದೆ ಹೆದ್ದಾರಿ ಅಗಲೀಕರಣಗೊಳಿಸಿ, ಚತುಷ್ಪಥ ಮಾರ್ಗವಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ವೇಳೆ ಶಾಲಾ ಮಕ್ಕಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವ ಕನಿಷ್ಠ ಸುರಕ್ಷಾ ಕ್ರಮಗಳ ಪಾಲನೆಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ (national highway dept) ಮಾಡಲಿಲ್ಲ. ನಾಗರೀಕರ ಸಲಹೆಯ ಹೊರತಾಗಿಯೂ, ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ನಡೆದುಕೊಂಡಿತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇದರಿಂದ ಹೆದ್ಧಾರಿ ದಾಟಿಕೊಂಡು ಶಾಲೆ – ಮನೆಗೆ ಹೋಗಲು ಮಕ್ಕಳು (childrens) ಬಹಳ ಸಂಕಷ್ಟ ಪಡುವಂತಾಗಿದೆ. ಈಗಾಗಲೇ ಶಾಲೆಯ ಕೆಲ ವಿದ್ಯಾರ್ಥಿಗಳು (students) ಹೆದ್ಧಾರಿ ದಾಟುವ ವೇಳೆ ಅಪಘಾತಕ್ಕೀಡಾದ ಊದಾಹರಣೆಯೂ ಇದೆ. ಈ ಹಿಂದೆ ಸ್ಥಳಕ್ಕಾಗಮಿಸಿದ್ದ ಹೆದ್ಧಾರಿ ಇಲಾಖೆ ಎಂಜಿನಿಯರ್ ಗಳು ಶಾಲಾ ಮಕ್ಕಳ ಅನುಕೂಲಕ್ಕಾಗಿ ಸ್ಕೈ ವಾಕರ್ (sky walker) ಮಾಡಿಕೊಡುವ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪೋಷಕರು ದೂರುತ್ತಾರೆ.
ಸದರಿ ಹೆದ್ಧಾರಿ ದುಃಸ್ಥಿತಿಯ ಕುರಿತಂತೆ ಈ ಹಿಂದೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ವೇಳೆ, ಟ್ರಾಫಿಕ್ ಪೊಲೀಸರು ಶಾಲೆ ಸಮೀಪದ ಸರ್ಕಲ್ ಬಳಿ ಬ್ಯಾರಿಕೇಡ್ ಹಾಕಿದ್ದರು. ಜೊತೆಗೆ ಶಾಲೆ ಆರಂಭ ಹಾಗೂ ಬಿಡುವ ವೇಳೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದರು. ಆದರೆ ಕಳೆದ ಕೆಲ ದಿನಗಳ ಹಿಂದೆ ರಸ್ತೆಗೆ ಹಾಕಿದ್ದ ಬ್ಯಾರಿಕೇಡ್ ಗಳನ್ನು ತೆಗೆಯಲಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಕ್ರಮಕೈಗೊಳ್ಳಲಿ : ಶಾಲೆ ಸಮೀಪದ ಸರ್ಕಲ್ ನಲ್ಲಿ ಸಿಗ್ನಲ್ ಲೈಟ್ (signal light) ಅಳವಡಿಸಬೇಕು. ಅಗತ್ಯವಾದರೆ ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ (scientific humps) ಹಾಕಬೇಕು. ನಗರ ವ್ಯಾಪ್ತಿಯಲ್ಲಿರುವುದರಿಂದ ವಾಹನಗಳ ವೇಗ (speed limit) ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.
ಮಕ್ಕಳು ಸುರಕ್ಷಿತವಾಗಿ ಶಾಲೆಗೆ ಹೋಗಿ ಬರುವಂತೆ ಮಾಡುವುದು ಆಡಳಿತದ ಜವಾಬ್ದಾರಿಯಾಗಿದೆ. ಆದರೆ ಈ ನಿಟ್ಟಿನಲ್ಲಿ ಆಡಳಿತ ನಿರ್ಲಕ್ಷ್ಯ ಧೋರಣೆ ತಳೆದಿರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ. ಇನ್ನಾದರೂ ಸದರಿ ಶಾಲೆಯ ಸಮೀಪದ ಹೆದ್ದಾರಿಯಲ್ಲಿ ಅಗತ್ಯ ಸಂಚಾರಿ ಸುರಕ್ಷತಾ ಕ್ರಮಗಳ ಅನುಷ್ಠಾನಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.
‘ಸಿಗ್ನಲ್ ಲೈಟ್ ಅಳವಡಿಕೆಗೆ ಕ್ರಮಕೈಗೊಳ್ಳಲಿ’
ಶಿವಮೊಗ್ಗದ ಗಾಡಿಕೊಪ್ಪದ ಸರ್ಕಾರಿ ಶಾಲೆಗೆ ಹೊಂದಿಕೊಂಡಂತಿರುವ ರಾಷ್ಟ್ರೀಯ ಹೆದ್ದಾರಿ ಸರ್ಕಲ್ ನಲ್ಲಿ ಸಿಗ್ನಲ್ ಲೈಟ್ ಅಳವಡಿಸಬೇಕೆಂಬ ಬೇಡಿಕೆಯಿದೆ. ಈ ಸಂಬಂಧ ಪೊಲೀಸ್ ಇಲಾಖೆಯು ಮಹಾನಗರ ಪಾಲಿಕೆ ಆಡಳಿತಕ್ಕೆ ಅನುದಾನ ಕೋರಿ ಪ್ರಸ್ತಾವನೆ ಕೂಡ ಸಲ್ಲಿಸಿದೆ ಎನ್ನಲಾಗಿದೆ. ಸಿಗ್ನಲ್ ಲೈಟ್ ಅಳವಡಿಕೆಗೆ ಅಗತ್ಯವಾದ ಅನುದಾನ ಬಿಡುಗಡೆಗೆ ಪಾಲಿಕೆ ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.