
ಜಮೀನಿನಲ್ಲಿ ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು!
ಸೊರಬ (sorab), ಜು. 24: ಕಾಡು ಹಂದಿ ಹಿಡಿಯಲು ಜಮೀನೊಂದರಲ್ಲಿ ಹಾಕಿದ್ದ ಉರುಳಿಗೆ ಸಿಲುಕಿ, ಚಿರತೆಯೊಂದು (leopard) ಮೃತಪಟ್ಟ ಘಟನೆ ತಾಲೂಕಿನ ಹೊಸಬಾಳೆ ವೃತ್ತದ ಮೇಲಿನ ಕಿರುಗುಣಸೆ ಗ್ರಾಮದಲ್ಲಿ ಬುಧವಾರ ನಡೆದಿದೆ.
ಚಿರತೆ ಉರುಳಿಗೆ ಸಿಲುಕಿ ಕೂಗುವುದನ್ನು ಗಮನಿಸಿದ ಗ್ರಾಮಸ್ಥರೋರ್ವರು, ಅರಣ್ಯ ಇಲಾಖೆಗೆ (forest dept) ಮಾಹಿತಿ ನೀಡಿದ್ದರು. ಸ್ಥಳಕ್ಕೆ ಶಿವಮೊಗ್ಗದಿಂದ (shivamogga) ಅರವಳಿಕೆ ತಜ್ಞರು ಆಗಮಿಸಿ ಗಾಯಗೊಂಡಿದ್ದ ಚಿರತೆಗೆ ಚಿಕಿತ್ಸೆ ನೀಡುವಷ್ಟರಲ್ಲಿ ಮೃತಪಟ್ಟಿದೆ.
ಜಮೀನಿನೊಂದರ ತಂತಿ ಬೇಲಿಗೆ, ಕಾಡು ಹಂದಿ (wild boar) ಹಿಡಿಯುವ ಉದ್ದೇಶದಿಂದ ಉರುಳು ಹಾಕಲಾಗಿತ್ತು. ಮೃತ ಚಿರತೆಗೆ ಸುಮಾರು 4 ವರ್ಷ ವಯೋಮಾನವಿದ್ದು, ಗಂಡು ಚಿರತೆಯಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಜಮೀನಿನ ಮಾಲೀಕನ ವಿರುದ್ದ ಅರಣ್ಯ ಇಲಾಖೆಯು ಪ್ರಕರಣ ದಾಖಲಿಸಿಕೊಂಡಿದೆ. ಜೊತೆಗೆ ಮೃತ ಚಿರತೆಯನ್ನು ನ್ಯಾಯಾಲಯದ ಅನುಮತಿ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ನಡೆಸಿದೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಎಲ್. ಪರಶುರಾಮ್, ಉಪ ವಲಯ ಅರಣ್ಯಾಧಿಕಾರಿಗಳಾದ ಜಿ. ಪರಶುರಾಮ್, ರಾಮಪ್ಪ, ಗಸ್ತು ಅರಣ್ಯಪಾಲಕರಾದ ಹರೀಶ್, ಆನಂದ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.