
ಶಿವಮೊಗ್ಗ ಜಿಪಂ ಸಿಇಓ ಖಡಕ್ ಆದೇಶ : ಸರ್ಕಾರಿ ಶಾಲೆ ಮಕ್ಕಳಿಗೆ ಮತ್ತೆ ಆರಂಭವಾದ ಬಿಸಿಯೂಟ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜು. 29: ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪದ ಮೌಲಾನ ಆಜಾದ್ ಮಾದರಿ ಸರ್ಕಾರಿ ಶಾಲೆ (maulana azad model govt school) ಮಕ್ಕಳಿಗೆ ದಿಢೀರ್ ಸ್ಥಗಿತಗೊಳಿಸಲಾಗಿದ್ದ ಬಿಸಿಯೂಟ (midday meal) ಸೌಲಭ್ಯವನ್ನು ಮತ್ತೆ ಪುನರಾರಂಭಿಸಲಾಗಿದೆ..!
ಶಾಲೆಯಲ್ಲಿ ಏಕಾಏಕಿ ಬಿಸಿಯೂಟ ಸ್ಥಗಿತಗೊಳಿಸಿದ ಕುರಿತಂತೆ ‘ಉದಯ ಸಾಕ್ಷಿ’ ನ್ಯೂಸ್ ವೆಬ್’ಸೈಟ್ ನಲ್ಲಿ ವಿಸ್ತೃತ ಸುದ್ದಿ ಪ್ರಕಟಿಸಲಾಗಿತ್ತು. ಈ ನಡುವೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ceo) ಎನ್. ಹೇಮಂತ್ ಅವರು, ಸಕಾರಣವಿಲ್ಲದೆ ಮಕ್ಕಳಿಗೆ ಬಿಸಿಯೂಟ ಸ್ಥಗಿತಗೊಳಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದರು.
ಸರ್ಕಾರದ ಮಾರ್ಗದರ್ಶನಗಳಿಗೆ ಅನುಗುಣವಾಗಿ, ತತ್’ಕ್ಷಣವೇ ಮಕ್ಕಳಿಗೆ ಬಿಸಿಯೂಟ ವಿತರಣೆ ಆರಂಭಿಸುವಂತೆ ಆದೇಶ ಹೊರಡಿಸಿದ್ದರು. ಬಿಸಿಯೂಟ ವಿತರಣೆಗೆ ಅಡ್ಡಿಯಾದರೆ ಕಾನೂನು ರೀತ್ಯ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಸಿಇಓ ಆದೇಶದ ಬೆನ್ನಲ್ಲೇ, ಕಳೆದ ಶನಿವಾರದಿಂದ ಸದರಿ ಶಾಲಾ ಮಕ್ಕಳಿಗೆ ಸಮೀಪದ ಸರ್ಕಾರಿ ಶಾಲೆಯಿಂದ ಬಿಸಿಯೂಟ ವಿತರಣೆ ಆರಂಭಿಸಲಾಗಿದೆ.
ಸೌಲಭ್ಯವಿಲ್ಲ : ಮೌಲಾನಾ ಆಜಾದ್ ಮಾದರಿ ಸರ್ಕಾರಿ ಶಾಲೆಯು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ (minority welfare department) ಯಡಿ ಕಾರ್ಯನಿರ್ವಹಣೆ ಮಾಡುತ್ತಿದೆ. ಸೋಮಿನಕೊಪ್ಪದಲ್ಲಿ (sominakoppa) ಕಳೆದ ಒಂದೂವರೆ ವರ್ಷದಿಂದ ಕಾರ್ಯನಿರ್ವಹಣೆ ಮಾಡುತ್ತಿದೆ. 6 ರಿಂದ 10 ನೇ ತರಗತಿಯವರೆಗೆ ಸುಮಾರು 130 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.
ಶಾಲೆ ಆರಂಭದ ದಿನದಿಂದಲೂ ಮಕ್ಕಳಿಗೆ ಬಿಸಿಯೂಟ ಸೌಲಭ್ಯ ಸೇರಿದಂತೆ ಇತರೆ ಸರ್ಕಾರಿ ಶಾಲೆಗಳ ರೀತಿಯಲ್ಲಿ ಯಾವುದೇ ಸೌಲಭ್ಯ ಕಲ್ಪಿಸುತ್ತಿರಲಿಲ್ಲ. ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ (janaspandana programme) ಶಾಲೆಯ ಮಕ್ಕಳು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (minister madhu bangarappa) ಅವರಿಗೆ ಮನವಿ ಅರ್ಪಿಸಿದ್ದರು.
‘ಬಿಸಿಯೂಟ ಸೇರಿದಂತೆ ಯಾವುದೇ ಪೌಷ್ಠಿಕಾಂಶ ಆಹಾರ ನೀಡುತ್ತಿಲ್ಲ. ಶಿಕ್ಷಕರ ಕೊರತೆಯಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಕಂಪ್ಯೂಟರ್ ಶಿಕ್ಷಣ ಸೇರಿದಂತೆ, ಆಟೋಟ ಚಟುವಟಿಕೆಯಿಲ್ಲ’ ಎಂಬುವುದು ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ವಿದ್ಯಾರ್ಥಿಗಳು ಸಚಿವರಿಗೆ ಆಗ್ರಹಿಸಿದ್ದರು.
ವಿದ್ಯಾರ್ಥಿಗಳ ಅಹವಾಲು ಆಲಿಸಿದ್ದ ಸಚಿವರು, ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಲಮಿತಿಯೊಳಗೆ ತಮ್ಮ ಇಲಾಖೆಯಿಂದಲೇ ಬಿಸಿಯೂಟ ಹಾಗೂ ಪೌಷ್ಠಿಕ ಆಹಾರ ಪೂರೈಕೆಗೆ ಆದೇಶ ಹೊರಡಿಸಿದ್ದರು. ಶಿಕ್ಷಕರ ಕೊರತೆ ಇತರೆ ಸಮಸ್ಯೆಗಳ ಕುರಿತಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸಿ ಕೊಡುವುದಾಗಿ ಭರವಸೆ ನೀಡಿದ್ದರು.
ಸಚಿವರ ಸೂಚನೆ ಬೆನ್ನಲ್ಲೇ, ಸಮೀಪದ ಸರ್ಕಾರಿ ಶಾಲೆಯಿಂದ ಬಿಸಿಯೂಟ ತಯಾರಿಸಿ ಸದರಿ ಶಾಲೆಯ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿತ್ತು. ಆದರೆ ಪೌಷ್ಠಿಕ ಆಹಾರ ವಿತರಣೆ ಮಾಡುತ್ತಿರಲಿಲ್ಲ. ಈ ನಡುವೆ ಕೆಲ ದಿನಗಳಲ್ಲಿಯೇ ಬಿಸಿಯೂಟ ನೀಡುವುದನ್ನು ಕೂಡ ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ಇದು ಶಾಲಾ ಮಕ್ಕಳಲ್ಲಿ ತೀವ್ರ ನಿರಾಸೆ ಮೂಡಿಸಿತ್ತು.
‘ಬಿಸಿಯೂಟ ವಿತರಣೆಗೆ ಕ್ರಮ’ : ಸಿಇಓ
*** ‘ಮೌಲಾನಾ ಆಜಾದ್ ಶಾಲೆ ಮಕ್ಕಳಿಗೆ ಸಮೀಪದ ಸರ್ಕಾರಿ ಶಾಲೆಗಳಿಂದ ಬಿಸಿಯೂಟ ವಿತರಣೆ ಮಾಡುವ ಕುರಿತಂತೆ ಸರ್ಕಾರದ ಆದೇಶವಿದೆ. ಅದರಂತೆ ಸೋಮಿನಕೊಪ್ಪದ ಮೌಲಾನಾ ಆಜಾದ್ ಶಾಲೆ ಮಕ್ಕಳಿಗೆ ಸಮೀಪದ ಸರ್ಕಾರಿ ಶಾಲೆಯಿಂದ ಬಿಸಿಯೂಟ ವಿತರಣೆ ಮಾಡಲಾಗುತ್ತಿದೆ. ಈ ಸಂಬಂಧ ಶಾಲಾಭಿವೃದ್ದಿ ಸಮಿತಿ ಪ್ರಮುಖರೊಂದಿಗೆ ಚರ್ಚಿಸಿ ನಿರ್ದೇಶನ ನೀಡಲಾಗಿದೆ’ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (shimoga zp ceo) ಎನ್. ಹೇಮಂತ್ ಅವರು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವುದೇ ಸರ್ಕಾರ?
*** ‘ಶಿವಮೊಗ್ಗ ಸೋಮಿನಕೊಪ್ಪ ಮೌಲಾನಾ ಆಜಾದ್ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ (teachers) ಕೊರತೆಯಿದೆ. ಹಿಂದಿ ಭಾಷೆ ಶಿಕ್ಷಕರ ನೇಮಕ ಇಲ್ಲಿಯವರೆಗೂ ಆಗಿಲ್ಲ. ದೈಹಿಕ ಶಿಕ್ಷಕರ ನಿಯೋಜನೆಯೂ ಆಗಿಲ್ಲ. ಇದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆ ಮೇಲೆ ಪರಿಣಾಮ ಬೀರಿದೆ. ಕಂಪ್ಯೂಟರ್ ಶಿಕ್ಷಣ, ಸೈನ್ಸ್ ಲ್ಯಾಬ್ ಸೇರಿದಂತೆ ಪಠ್ಯ ಹೊರತಾದ ಇತರೆ ಶಿಕ್ಷಣ ಮಕ್ಕಳಿಗೆ ಲಭ್ಯವಾಗುತ್ತಿಲ್ಲ. ಆಟದ ಮೈದಾನದ ಸೌಲಭ್ಯವಿಲ್ಲ. ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರು ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಾದ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕಾಗಿದೆ ಎಂದು ಪೋಷಕರು ಆಗ್ರಹಿಸುತ್ತಾರೆ.