
ಮಾ.15 ರಂದು ಶಿವಮೊಗ್ಗ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತದಿಂದ ಸಾರ್ವಜನಿಕ ಕುಂದುಕೊರತೆ ಸಭೆ
ಶಿವಮೊಗ್ಗ, ಮಾ. 14: ಕರ್ನಾಟಕ ಲೋಕಾಯುಕ್ತ ಇಲಾಖೆಯಿಂದ ಮಾ.15 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸಾರ್ವಜನಿಕರಿಂದ ಕುಂದುಕೊರತೆ ಬಗ್ಗೆ ಅಹವಾಲು ಮತ್ತು ಅರ್ಜಿ ಸ್ವೀಕಾರ ಸಭೆ ಆಯೋಜಿಸಲಾಗಿದೆ.
ಈ ಸಭೆಗೆ ಸಾರ್ವಜನಿಕರು ಹಾಜರಾಗಿ ಕುಂದುಕೊರತೆ, ಅಹವಾಲು ತೋಡಿಕೊಳ್ಳಬಹುದಾಗಿದೆ. ಸರ್ಕಾರದ ಯೋಜನೆಗಳಾದ ವೃದ್ಯಾಪ್ಯ ವೇತನ, ಬಿ.ಪಿ.ಎಲ್., ಎ.ಪಿ.ಎಲ್. ಕಾರ್ಡ್ಗಳು, ಪಹಣಿ, ಪೋಡಿ, ಖಾತೆ ಬದಲಾವಣೆ, ಸರ್ಕಾರಿ ಕಾಮಗಾರಿಗಳು,
ಗ್ರಾಮ ಪಂಚಾಯಿತಿಯ ಯೋಜನೆಗಳು, ಕಂದಾಯ ಇಲಾಖೆ, ಸಾರಿಗೆ ಇಲಾಖೆ, ನೊಂದಣಾಧಿಕಾರಿಗಳ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಆಸ್ಪತ್ರೆಗಳು,
ಜಿಲ್ಲಾ ಪಂಚಾಯತ್ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳು, ಅರೆ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಸಂಘ ಸಂಸ್ಥೆಗಳಲ್ಲಿ ಬರುವ ಎಲ್ಲಾ ಕರ್ತವ್ಯಗಳು ಮತ್ತು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಂಬಂಧಿಸಿದ ಸರ್ಕಾರಿ ಇಲಾಖೆಗಳು ನಿರ್ಲಕ್ಷ್ಯ ಧೋರಣೆ,
ವಿಳಂಬ, ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬಂದಲ್ಲಿ ಲೋಕಾಯುಕ್ತ ಠಾಣೆಗೆ ಅಥವಾ ತಾಲೂಕು ಭೇಟಿಯ ಸಮಯದಲ್ಲಿ ಖುದ್ದಾಗಿ ಫಾರಂ 1 ಮತ್ತು 2 ನ್ನು ಪಡೆದು ಭರ್ತಿ ಮಾಡಿ ನೋಟರಿಯವರಲ್ಲಿ ಪ್ರಮಾಣೀಕರಿಸಿ ಸೂಕ್ತ ದಾಖಲೆಗಳ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಅಂತಹ ಸರ್ಕಾರಿ ನೌಕರರ ವಿರುದ್ಧ ಕ್ರಮಕ್ಕಾಗಿ ಮತ್ತು ವಿಚಾರಣೆಗಾಗಿ ಲೋಕಾಯುಕ್ತರಿಗೆ ಕಳುಹಿಸಿಕೊಡಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.