ರಾಯಗಡ (ಮಹಾರಾಷ್ಟ್ರ), ಎ. 15: ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ ವೊಂದು, ರಸ್ತೆ ಬದಿಯ ಕಂದಕಕ್ಕೆ ಉರುಳಿಬಿದ್ದ ಪರಿಣಾಮ, ಬಸ್ ನಲ್ಲಿದ್ದ 13 ಜನ ಮೃತಪಟ್ಟು 29 ಮಂದಿ ಗಾಯಗೊಂಡ ದಾರುಣ ಘಟನೆ ಮಹಾರಾಷ್ಟ್ರ ರಾಜ್ಯದ ರಾಯಗಡ ಬಳಿ ಶನಿವಾರ ಮುಂಜಾನೆ ನಡೆದಿದೆ.
ಮುಂಬಯಿ – ಪುಣೆ ಹಳೇ ಹೆದ್ಧಾರಿಯ, ಖೋಪೊಲಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿಂಗ್ರೋಬಾ ದೇವಾಲಯ ಸಮೀಪ ಅವಘಡ ಸಂಭವಿಸಿದೆ. ಸದರಿ ಸ್ಥಳವು ಮುಂಬೈಯಿಂದ 70 ಕಿ.ಮೀ. ದೂರದಲ್ಲಿದೆ. ಪುಣೆಯ ಪಿಂಪ್ರಿ ಚಿಂಚವಾಡದಿಂದ ಮುಂಬೈಗೆ ಬಸ್ ಆಗಮಿಸುತ್ತಿದ್ದ ವೇಳೆ ಈ ಭೀಕರ ಅವಘಡ ಸಂಭವಿಸಿದೆ.

ಮೃತರೆಲ್ಲರೂ ಮುಂಬಯಿಯ ಗೋರೆಗಾಂವ್ ನ ಸಾಂಪ್ರದಾಯಿಕ ಸಂಗೀತ ತಂಡವಾದ ಬಜಿ ಪ್ರಭು ವಾದಕ್ ಗ್ರೂಪ್ ಎಂಬ ಸಂಗೀತ ತಂಡದ ಸದ್ಯರಾಗಿದ್ದಾರೆ. 18 ರಿಂದ 25 ವಯೋಮಾನದೊಳಗಿನವರಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಪುಣೆ ಜಿಲ್ಲೆಯ ಪಿಂಪ್ರಿ ಚಿಂಚವಾಡದ ಕಾರ್ಯಕ್ರಮವೊಂದರಲ್ಲಿ ಸಂಗೀತ ತಂಡ ಭಾಗವಹಿಸಿತ್ತು. ಕಾರ್ಯಕ್ರಮ ಪೂರ್ಣಗೊಂಡ ನಂತರ, ಶನಿವಾರ ಮುಂಜಾನೆ 1 ಗಂಟೆಗೆ ಸ್ಥಳದಿಂದ ಖಾಸಗಿ ಬಸ್ ನಲ್ಲಿ ಸಂಗೀತ ತಂಡದ ಸದಸ್ಯರು ಪ್ರಯಾಣಿಸಿದ್ದರು. ಮುಂಜಾನೆ 4.50 ರ ಸುಮಾರಿಗೆ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

