ಶಿವಮೊಗ್ಗ, ಜೂ. 28: ಹಲವು ದಿನಗಳ ನಂತರ, ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಒತ್ತುವರಿ ತೆರವು ಕಾರ್ಯಾಚರಣೆಗೆ ಮತ್ತೆ ಚಾಲನೆ ನೀಡಿದೆ. ರಾಜಕಾಲುವೆ ಹಾಗೂ ಪೊಲೀಸ್ ಇಲಾಖೆಗೆ ಸೇರಿದ ಬಹು ಕೋಟಿ ರೂ. ಮೌಲ್ಯದ ಒತ್ತುವರಿಯಾಗಿದ್ದ ಜಾಗವನ್ನು ಪಾಲಿಕೆ ಆಡಳಿತ ವಶಕ್ಕೆ ಪಡೆದ ಘಟನೆ ನಡೆದಿದೆ.
ಭಾರತೀ ಕಾಲೋನಿ ಬಡಾವಣೆಯಲ್ಲಿ ಜೂ. 23 ರಂದು ಈ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಸರಿಸುಮಾರು ಎರಡೂವರೆ ಕೋಟಿ ರೂ. ಮೌಲ್ಯದ, ಒಂದೂವರೆ ಎಕರೆ ಜಾಗವನ್ನು ಪಾಲಿಕೆ ಆಡಳಿತ ವಶಕ್ಕೆ ಪಡೆಯುವಲ್ಲಿ ಸಫಲವಾಗಿದೆ.

ಬಿಗಿ ಪೊಲೀಸ್ ಪಹರೆಯೊಂದಿಗೆ ಸರಿಸುಮಾರು 50 ಕ್ಕೂ ಅಧಿಕ ಪಾಲಿಕೆ ಅಧಿಕಾರಿ – ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಒತ್ತುವರಿ ಮಾಡಿದ್ದ ಜಾಗದಲ್ಲಿ ಹಾಕಿದ್ದ ಬೃಹತ್ ಕಾಂಪೌಂಡ್ ತೆರವುಗೊಳಿಸಿದೆ.
‘ಭವಾನಿ ರೈಸ್ ಮಿಲ್ ಸಮೀಪ ರಾಜಕಾಲುವೆ ಒತ್ತುವರಿ ಮಾಡಲಾಗಿತ್ತು. ಜೊತೆಗೆ ಇದಕ್ಕೆ ಹೊಂದಿಕೊಂಡಂತಿದ್ದ ಪೊಲೀಸ್ ಇಲಾಖೆ ಸೇರಿದ ಪರೇಡ್ ಮೈದಾನದ ಜಾಗ ಕೂಡ ಒತ್ತುವರಿಯಾಗಿತ್ತು. ರಾಜಕಾಲುವೆ ಒತ್ತುವರಿಯಾಗಿದ್ದ ಕಾರಣದಿಂದ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ, ಸುತ್ತಮುತ್ತಲಿನ 200 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗುತ್ತಿತ್ತು.
ಈ ಸಂಬಂಧ ಸ್ಥಳೀಯ ನಿವಾಸಿಗಳು ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ಸರಾಗವಾಗಿ ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಮಾಡುವಂತೆ ಹಲವು ಬಾರಿ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸದರಿ ಜಾಗದ ಸಮಗ್ರ ವರದಿ ತರಿಸಿಕೊಳ್ಳಲಾಗಿತ್ತು. ಒತ್ತುವರಿಯಾಗಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಒತ್ತುವರಿ ಮಾಡಿ ಹಾಕಲಾಗಿದ್ದ ಸುಮಾರು 15 ಅಡಿ ಎತ್ತರದ ಕಾಂಪೌಂಡ್ ತೆರವುಗೊಳಿಸಲಾಗಿದೆ’ ಎಂದು ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರು ತಿಳಿಸಿದ್ದಾರೆ.

ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಸರಿಸುಮಾರು ಒಂದೂವರೆ ಎಕರೆ ಜಾಗ ವಶಕ್ಕೆ ಪಡೆಯಲಾಗಿದೆ. ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡುವ ಮೂಲಕ, ಸ್ಥಳೀಯ ನಾಗರೀಕರು ಎದುರಿಸುತ್ತಿರುವ ಜಲಾವೃತ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು’ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಅಭಿನಂದನೆ: ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ಜಲಾವೃತ ಸಮಸ್ಯೆಗೆ ಪರಿಹಾರ ಕಲ್ಪಿಸಿದ ಆಯುಕ್ತ ಮಾಯಣ್ಣಗೌಡ ಅವರಿಗೆ ಭಾರತೀ ನಗರ ನಿವಾಸಿಗಳು ಪಾಲಿಕೆ ಕಚೇರಿಯಲ್ಲಿ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ಒತ್ತುವರಿದಾರರಿಗೆ ಕಾದಿದೆ ಮತ್ತಷ್ಟು ಶಾಕ್…!

*** ಶಿವಮೊಗ್ಗ ನಗರದ ವಿವಿಧೆಡೆ ರಾಜಕಾಲುವೆ ಹಾಗೂ ಪಾಲಿಕೆ ಜಾಗ ಒತ್ತುವರಿ ಮಾಡಿಕೊಂಡವರಿಗೆ ಶಾಕ್ ನೀಡಲು ಪಾಲಿಕೆ ಆಡಳಿತ ಸಿದ್ದತೆ ಮಾಡಿಕೊಂಡಿದೆ. ‘ಈಗಾಗಲೇ ಹಲವು ಒತ್ತುವರಿ ಪ್ರಕರಣಗಳ ವಿವರ ಕಲೆ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ. ಇದರಿಂದ ಪಾಲಿಕೆ ಆಡಳಿತದಲ್ಲಿ ಇಷ್ಟು ದಿನ ಸ್ತಬ್ದವಾಗಿದ್ದ ಒತ್ತುವರಿ ತೆರವು ಕಾರ್ಯಾಚರಣೆ ಇದೀಗ ಮತ್ತೆ ಸದ್ದು ಮಾಡಲಾರಂಭಿಸಿದೆ. ಒತ್ತುವರಿದಾರರಲ್ಲಿ ನಡುಕ ಸೃಷ್ಟಿಯಾಗುವಂತೆ ಮಾಡಿದೆ.

